ಸಾವಿಲ್ಲದ ಚಿಂತನೆಗಳು ಬಂದಿಯಾಗಿರುವ ರಹಸ್ಯ ತಾಣವೊಂದರ ಬಗ್ಗೆ ವಿವರಿಸುವ ಕಥೆ ‘ಲಾಕ್’. ಇದು ಶುಕ್ರವಾರ ತೆರೆಗೆ ಬರುತ್ತಿದ್ದು, ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಸುದ್ದಿಗೋಷ್ಠಿ ಕರೆದಿತ್ತು.
‘ಅನಾಮಿಕ ವ್ಯಕ್ತಿಯೊಬ್ಬ ಈ ದೇಶಕ್ಕೆ ಬೇಕಾಗಿರುವ ಅಮರ ಚಿಂತನೆಗಳು ಲಾಕ್ ಆಗಿರುವ ರಹಸ್ಯ ತಾಣವೊಂದರ ಬಗ್ಗೆ ವಿವರಿಸುವುದೇ ಈ ಚಿತ್ರದ ಕಥೆ’ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಲಾಕ್ ಚಿತ್ರದ ಪೋಸ್ಟರ್ನಲ್ಲಿ ಒಂದಿಷ್ಟು ನಿಗೂಢಗಳನ್ನು ಸೃಷ್ಟಿಸಲು ಯತ್ನಿಸಿರುವ ತಂಡ, ಚಿತ್ರದ ಕುರಿತ ವಿವರಣೆಯಲ್ಲೂ ನಿಗೂಢತೆಯನ್ನು ಕಾಪಾಡಿಕೊಂಡಿತು.
ಚಿತ್ರದ ನಿರ್ದೇಶನ ಪರಶುರಾಮ್ ಅವರದ್ದು. ‘ಒ. ಹೆನ್ರಿ ಕಥೆಗಳಲ್ಲಿ ಇರುವ ಮಾದರಿಯನ್ನು ನಾನು ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದರು ಪರಶುರಾಮ್. ‘ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡ ಈ ಚಿತ್ರದ ಒಂದು ಭಾಗ. ದೇಶದ ಬಗ್ಗೆ ನನ್ನಲ್ಲಿರುವ ಚಿಂತನೆಗಳು ಹಾಗೂ ನೇತಾಜಿ ಹೊಂದಿದ್ದ ಚಿಂತನೆಗಳನ್ನು ಬೆರೆಸಿ ಈ ಚಿತ್ರ ಮಾಡಿದ್ದೇನೆ’ ಎಂದೂ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಅವಧಿಯಲ್ಲೂ ನೇತಾಜಿ ಬದುಕಿದ್ದರಾ, ಅವರು ಏನಾದರು ಎಂಬ ಬಗ್ಗೆಯೂ ಸಿನಿಮಾದಲ್ಲಿ ಪ್ರಸ್ತಾಪ ಇದೆಯಂತೆ. ಶಶಿಕುಮಾರ್ ಅವರು ನೇತಾಜಿ ವೇಷದಲ್ಲಿ ಕಾಣಿಸಿಕೊಳ್ಳುತ್ತಾರಂತೆ.
ಚಿತ್ರದ ನಾಯಕ ಅಭಿಲಾಷ್, ನಾಯಕಿ ಸೌಂದರ್ಯಾ. ಅಭಿಲಾಷ್ ಅವರದ್ದು ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಲ್ಲುವ ಪಾತ್ರ. ‘ಇದರಲ್ಲಿ ಯುವಕರಿಗೆ ಒಳ್ಳೆಯ ಸಂದೇಶ ಇದೆ’ ಎಂದರು ಅಭಿಲಾಷ್. ‘ಸಿನಿಮಾ ನೋಡಿ. ಲಾಕ್ ಅನ್ಲಾಕ್ ಆಗುತ್ತದೆ’ ಎಂದಷ್ಟೇ ಹೇಳಿದರು ಸೌಂದರ್ಯಾ.
ರೋಹಿತ್ ಅಶೋಕ್ ಕುಮಾರ್ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ. ವಿನಯಚಂದ್ರ ಪ್ರಸನ್ನ ಛಾಯಾಗ್ರಹಣ, ಎಂ. ಸಂಜೀವ ರಾವ್ ಸಂಗೀತ ಈ ಚಿತ್ರಕ್ಕಿದೆ. ಹಿನ್ನೆಲೆ ಸಂಗೀತ ವಿ. ರಾಘವೇಂದ್ರ ಅವರದ್ದು. ಅವಿನಾಶ್, ದಿಶಾ ಪೂವಯ್ಯ, ಶರತ್ ಲೋಹಿತಾಶ್ವ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.