ಟಾಲಿವುಡ್ ‘ಪ್ರಿನ್ಸ್’ ಮಹೇಶ್ಬಾಬು, ಏಪ್ರಿಲ್ 25ರಂದು ಬಿಡುಗಡೆಯಾಗಬೇಕಿರುವ ‘ಮಹರ್ಷಿ’ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ 25ನೇ ಚಿತ್ರ ಎನ್ನುವುದು ‘ಮಹರ್ಷಿ’ ಮೇಲಿನ ವಿಶೇಷ ಮಮಕಾರಕ್ಕೆ ಕಾರಣ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.
ಆದರೆ ಅಷ್ಟರಲ್ಲಾಗಲೇ ಅವರು ಹೊಸ ಚಿತ್ರದ ಕತೆಯನ್ನು ಓದಿ ಮುಗಿಸಿದ್ದಾರೆ.ತಮಿಳು ಮತ್ತು ತೆಲುಗಿನ ಬಹುಬೇಡಿಕೆಯ ನಟಿ ಸಾಯಿ ಪಲ್ಲವಿ ನಾಯಕನಟಿಯಾಗಿರುವ ಈ ಚಿತ್ರದಲ್ಲಿ ಪ್ರಿನ್ಸ್ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತವಾಗಿದೆ.
ಅನಿಲ್ ರಾವಿಪುಡಿ ನಿರ್ದೇಶನದ ಈ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ. ತೆಲುಗಿನಲ್ಲಿ ಅವರದೇ ನಿರ್ಮಾಣದ ಎರಡು ಚಿತ್ರಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಹಾಗಾಗಿ ಅನಿಲ್ ಅವರಲ್ಲಿ ಸಾಯಿ ಪಲ್ಲವಿ ಹೆಸರನ್ನು ದಿಲ್ ರಾಜು ಶಿಫಾರಸು ಮಾಡಿದ್ದಾರೆನ್ನಲಾಗಿದೆ. ನಿರ್ದೇಶಕರು ಚೆನ್ನೈಗೆ ತೆರಳಿ ಪಲ್ಲವಿಗೆ ಚಿತ್ರಕತೆ ಹೇಳಿ ಕಾಲ್ಶೀಟ್ ಪಡೆದು ಬಂದಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ.
ಈ ಹಿಂದೆ, ಸಾಯಿ ಪಲ್ಲವಿ ಮತ್ತು ವರುಣ್ ತೇಜ್ ಅಭಿನಯದ ಚಿತ್ರವೊಂದರಲ್ಲಿ ಪ್ರಿನ್ಸ್ ನಾಯಕನಟರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ವದಂತಿ ಹಬ್ಬಿತ್ತು. ಆದರೆ ಪ್ರಿನ್ಸ್ ಈ ಚಿತ್ರವನ್ನು ಕೈಬಿಟ್ಟಿದ್ದರು.