‘ಟಾಲಿವುಡ್ ಪ್ರಿನ್ಸ್’ ಮಹೇಶ್ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆಯುತ್ತಿದೆ. ಮಹೇಶ್ಬಾಬು ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ನಿರ್ದೇಶಿಸಿದ್ದು ಅನಿಲ್ ರವಿಪುಡಿ. ಈ ಚಿತ್ರದ ಬಳಿಕ ಅವರು ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಸದ್ಯಕ್ಕೆ ಅವರು ನಟನೆಯಿಂದ ಮೂರು ತಿಂಗಳು ಬಿಡುವು ಪಡೆಯಲಿದ್ದಾರಂತೆ.
ಮಹೇಶ್ಬಾಬು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಹಾಗಾಗಿ, ನಟನೆಯಿಂದ ತಾತ್ಕಾಲಿಕ ಬಿಡುವು ಪಡೆಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಹೊರಬಿದ್ದಿದೆ. ‘ಸರಿಲೇರು ನೀಕೆವ್ವರು’ ಚಿತ್ರದ ಬಿಡುಗಡೆಗೂ ಕೆಲವು ತಿಂಗಳ ಹಿಂದೆಯೇ ಅವರ ಪತ್ನಿ ನಮ್ರತಾ ಶಿರೋಡ್ಕರ್ ಮಾಧ್ಯಮದವರೊಟ್ಟಿಗೆ ಈ ಮಾಹಿತಿ ಹಂಚಿಕೊಂಡಿದ್ದು ಉಂಟು.
ಮಹೇಶ್ಬಾಬು ನಟನೆಯ ‘ಅಗಡು’ ಚಿತ್ರ ತೆರೆಕಂಡಿದ್ದು 2014ರಲ್ಲಿ. ಆ ವೇಳೆ ಅವರ ಕಾಲಿಗೆ ತೀವ್ರ ಪೆಟ್ಟಾಗಿತ್ತಂತೆ. 2017ರಲ್ಲಿ ತೆರೆಕಂಡ ‘ಸ್ಪೈಡರ್’ ಚಿತ್ರದ ಶೂಟಿಂಗ್ ವೇಳೆಯೇ ಅವರು ಶಸ್ತ್ರಚಿಕಿತ್ಸೆಗೆ ತೆರಳಬೇಕಿತ್ತಂತೆ. ಆದರೆ, ಅದು ಸಾಧ್ಯವಾಗಿಲ್ಲ. ‘ಭರತ ಆನೆ ನೇನು’ ಮತ್ತು ‘ಮಹರ್ಷಿ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
‘ಸರಿಲೇರು ನೀಕೆವ್ವರು’ ಚಿತ್ರದ ಶೂಟಿಂಗ್ ವೇಳೆ ಮೊಣಕಾಲಿನ ನೋವು ಜಾಸ್ತಿಯಾದ ಪರಿಣಾಮ ತ್ವರಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ, ಶಸ್ತ್ರಚಿಕಿತ್ಸೆಗೆ ತೆರಳಲು ಅವರು ನಿರ್ಧರಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆ ಬಳಿಕ ಮಹೇಶ್ಬಾಬು ಅವರು ವಂಶಿ ಪೈಡಿಪಲ್ಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ಮೇ ತಿಂಗಳಿನಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ. ಇದರಲ್ಲಿ ಅವರದು ಪತ್ತೇದಾರಿಯಪಾತ್ರವಂತೆ. ಇದಕ್ಕೆ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ. ತಮನ್ ಸಂಗೀತ ಸಂಯೋಜಿಸಲಿದ್ದಾರೆ.
ಈ ಹಿಂದೆ ಅವರು ‘ಸ್ಪೈಡರ್’ ಚಿತ್ರದಲ್ಲಿ ಪತ್ತೇದಾರಿಯಾಗಿಯೇ ನಟಿಸಿದ್ದರು. ಆದರೆ, ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಮಗಾಡೆ ಮಲಗಿತ್ತು.ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಚಿತ್ರಕ್ಕೆ ನಾಯಕಿಯಾಗಿ ಕೈರಾ ಅಡ್ವಾನಿಯನ್ನು ಕರೆತರಲು ನಮ್ರತಾ ಶಿರೋಡ್ಕರ್ ಉತ್ಸುಕರಾಗಿದ್ದಾರಂತೆ. ಈ ಹಿಂದೆ ಕೊರಟಾಲ ಶಿವ ನಿರ್ದೇಶಿಸಿದ್ದ ‘ಭರತ ಆನೆ ನೇನು’ ಚಿತ್ರದಲ್ಲಿ ಮಹೇಶ್ಬಾಬುಗೆ ಕೈರಾ ಅವರೇ ನಾಯಕಿಯಾಗಿದ್ದರು. ಈ ಚಿತ್ರ ಸೂಪರ್ಹಿಟ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.