ಬೆಂಗಳೂರು: ತೆಲುಗು ಚಲನಚಿತ್ರ ರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಭಾವುಕರಾದರು.
ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿ 'ಪುನೀತ್ ಬಹಳ ಒಳ್ಳೆಯ ಹುಡುಗ. ಸರಳ ಜೀವಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ ನಿಧನವಾದ ವಿಷಯ ತಿಳಿದು ಆಘಾತವಾಗಿದೆ' ಎಂದರು.
'ಡಾ.ರಾಜ್ಕುಮಾರ್ ಅವರ ಮಗನಾಗಿದ್ದರೂ ಆತನಿಗೆ ಕಿಂಚಿತ್ತೂ ಅಹಂ ಇರಲಿಲ್ಲ' ಎಂದು ಗದ್ಗದಿತರಾದರು.
ತೆಲುಗು ಚಲನಚಿತ್ರ ರಂಗದ ನಟರಾದ ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಹಾಸ್ಯನಟ ಅಲಿ ಅವರೂ ಪುನೀತ್ ಜೊತೆಗಿನ ಒಡನಾಟ ಸ್ಮರಿಸಿದರು.
ಬಹುಭಾಷಾ ನಟ ಅರ್ಜುನ ಸರ್ಜಾ, ಧ್ರುವ ಸರ್ಜಾ, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್, ನಟಿಯರಾದ ರಮ್ಯಾ, ರಚಿತಾ ರಾಮ್, ರಕ್ಷಿತಾ, ಪ್ರಿಯಾಂಕಾ ಉಪೇಂದ್ರ ಅವರೂ ಪುನೀತ್ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟರು.