ಬೆಂಗಳೂರು: ‘ಕೆಲವರ ಮೇಲೆ ಸಿಬಿಐ ದಾಳಿ ಆಗಿದೆ. ಸಂಸದ ಡಿ.ಕೆ. ಸುರೇಶ್ ಹೆಸರು ಹೇಳಿ ಎಂದು ದಾಳಿಗೆ ಒಳಗಾದವರ ಮೇಲೆ ಸಿಬಿಐ ಅಧಿಕಾರಿಗಳು ಒತ್ತಡ ತರುತ್ತಿದ್ದಾರೆ’ ಎಂದು ಶಾಸಕ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಸುಖಾಸುಮ್ಮನೆ ತಮ್ಮನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಈಗಲೇ ಯಾವುದನ್ನೂ ಹೇಳುವುದಿಲ್ಲ. ಸುಳ್ಳು ಹೇಳುವಂತೆ ಸಿಬಿಐ ಅಧಿಕಾರಿಗಳು ನಮ್ಮ ಆಪ್ತರಿಗೆಲ್ಲರಿಗೂ ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ. ಅದಕ್ಕೆ ನನ್ನನ್ನೇ ಗುರಿ ಮಾಡಿದ್ದಾರೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಯಾವುದಕ್ಕೂ ಬಗ್ಗುವುದಿಲ್ಲ’ ಎಂದರು.
ಸಚಿವ ಸಂಪುಟ ರಚನೆ ಕಗ್ಗಂಟು ಬಗ್ಗೆ ಮಾತನಾಡಿದ ಅವರು, ‘ನನ್ನ ಮ್ಯಾಚ್ ಡಿಫರೆಂಟ್. ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಿರಿಯರಿದ್ದಾರೆ. ಅವರ ಜೊತೆ ನನ್ನನ್ನು ಯಾಕೆ ಸೇರಿಸುತ್ತಿದ್ದೀರಾ. ನನಗೆ ಸಚಿವ ಸ್ಥಾನ ಕೊಟ್ಟರೂ ಒಂದೇ, ಬಿಟ್ಟರೂ ಒಂದೇ. ಕಾಂಗ್ರೆಸ್ನ 78 ಶಾಸಕರಲ್ಲಿ ನಾನು ಒಬ್ಬ’ ಎಂದರು.