ಚಿತ್ರದ ಹೆಸರೇ ಸೂಚಿಸುವಂತೆ ಇದುಕಾಲೇಜು ಹುಡುಗರ ಕಥೆ ಆಧರಿಸಿದ ಚಿತ್ರ. ಇಬ್ಬರು ಹುಡುಗರು ಪ್ರೀತಿಗಾಗಿ ಕಾಲೇಜು ಹುಡುಗಿಯೊಬ್ಬಳ ಬೆನ್ನು ಬಿದ್ದಾಗ ಏನೆಲ್ಲ ಸಂಭವಿಸುತ್ತದೆ ಎನ್ನುವುದು ಚಿತ್ರದ ಕಥಾಹಂದರ.
‘ಸಪ್ನೋಂಕಿ ರಾಣಿ’ ಹಾಗೂ ‘ಆಪ್ತ ಮಿತ್ರರು ವರ್ಸಸ್ ನಾಗವಲ್ಲಿ’ ಚಿತ್ರಗಳ ನಂತರ ನಿರ್ದೇಶಕ ಶಂಕರ್ ಅರುಣ್ ತಮ್ಮ ಮೂರನೇ ಸಿನಿಮಾ ‘ಕಾಲೇಜ್ ಕುಮಾರಿ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಸನ್ಶೈನ್ ಬ್ಯಾನರ್ನಡಿ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.‘ಹೆಣ್ಣೆಂದರೆಸರ್ವನಾಶ. ಜಗತ್ತಿನಲ್ಲಿ ಈವರೆಗೆ ನಡೆದ ಯುದ್ಧಗಳಿಗೆಲ್ಲ ಹೆಣ್ಣೇ ಕಾರಣ. ಹಾಗೆಯೇ ಪ್ರತಿನಿತ್ಯದ ಕೆಲವು ಘಟನೆಗಳಿಗೂ ಹೆಣ್ಣೇ ಕಾರಣ. ರೌಡಿಗಳ ನಡುವಿನ ಕದನಕ್ಕೂ ಹೆಣ್ಣೇ ಕಾರಣ’ ಎನ್ನುವ ನಿರ್ದೇಶಕರು, ಒಂದು ನೈಜ ಘಟನೆಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಲು ತೆರೆಯ ಮೇಲೆ ‘ಕಾಲೇಜು ಕುಮಾರಿ’ಯ ಕಥೆ ಹೇಳಿದ್ದೇನೆ ಎಂದರು.
ತಾರಾ ಗಣದಲ್ಲಿಜೀವಾ, ಚರಣ್ ರಾಜ್, ರುಚಿತಾ, ವಿಕ್ರಮ್ ಕಾರ್ತಿಕ್, ಬಿಂದುಶ್ರೀ, ವಿನಯ್ ಹಾಗೂ ಗುರುದತ್ ಇದ್ದಾರೆ. ವಿಘ್ನೇಶ್ ಛಾಯಾಗ್ರಹಣ, ಉತ್ತಮ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.