ಜನಸಾಮಾನ್ಯರ ಆಡುಮಾತುಗಳೇ ಸಿನಿಮಾದ ಶೀರ್ಷಿಕೆಗಳಾಗುವುದು ಹೊಸದೇನಲ್ಲ. ಸಿನಿಮಾದತ್ತ ಬಹುಬೇಗನೇ ಪ್ರೇಕ್ಷಕರ ಗಮನ ಸೆಳೆಯಲು ನಿರ್ದೇಶಕರು ಮತ್ತು ನಿರ್ಮಾಪಕರು ಈ ತಂತ್ರಕ್ಕೆ ಮೊರೆ ಹೋಗುವುದು ಸರ್ವೇ ಸಾಮಾನ್ಯ. ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ ಬಿಟ್ಟ’ ಚಿತ್ರ ಇದಕ್ಕೆ ಹೊಸ ಸೇರ್ಪಡೆ.
ಸೆವೆನ್ ರಾಜ್ ನಿರ್ಮಾಣದಡಿ ಆಸ್ಕರ್ ಕೃಷ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರ ಇದಾಗಿದೆ. ಇದರ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಈಗಾಗಲೇ, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ.
ಲಾಕ್ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ ಈ ಸಿನಿಮಾದ ಕಥೆ ಕುತೂಹಲ ಹೆಚ್ಚಿಸಿದೆ. ನಟ ಲೋಕೇಂದ್ರ ಸೂರ್ಯ ಇದರಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಮಲಯಾಳದ ನಟಿ ಗೌರಿ ನಾಯರ್ ಇದರ ನಾಯಕಿ. ಸೆವೆನ್ ರಾಜ್ ಬಂಡವಾಳ ಹೂಡುವ ಜೊತೆಗೆ ಪ್ರಮುಖ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸರ್ಕಾರದ ಅನುಮತಿ ಸಿಕ್ಕಿದ ಬಳಿಕ ಬಾಕಿ ಉಳಿದಿರುವ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಗಗನ ಕುಮಾರ್ ಅವರ ಛಾಯಾಗ್ರಹಣವಿದೆ. ಅನಂತ್ ಆರ್ಯನ್ ಸಂಗೀತ ನೀಡಿದ್ದಾರೆ. ಸಂಕಲನ ನಿರ್ವಹಣೆ ಮರಿಸ್ವಾಮಿ ಅವರದ್ದು. ವೈಲೆಂಟ್ ವೇಲು ಸಾಹಸ ನಿರ್ದೇಶಿಸಿದ್ದಾರೆ. ಅಕುಲ್ ಅವರು ನೃತ್ಯ ಸಂಯೋಜಿಸಿದ್ದಾರೆ. ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಅವರ ಸಹ ನಿರ್ದೇಶನವಿದೆ.