‘777 ಚಾರ್ಲಿ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್ ಹೊಸ ಸಿನಿಮಾವೊಂದನ್ನು ಘೋಷಿಸಿದೆ. ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಚಿತ್ರಕ್ಕೆ ರಕ್ಷಿತ್ ಸಾಥ್ ನೀಡಿದ್ದಾರೆ.
‘ಕಾಲ್ ಕೆಜಿ ಪ್ರೀತಿ’, ‘ಪಂಚತಂತ್ರ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಟ ವಿಹಾನ್ ಈ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ‘ನಮ್ಮನೆ ಯುವರಾಣಿ’ ಖ್ಯಾತಿಯ ನಟಿ ಅಂಕಿತಾ ಅಮರ್ ಜೋಡಿಯಾಗಲಿದ್ದಾರೆ. ಹೊಸ ಚಿತ್ರದ ಶೀರ್ಷಿಕೆ ಆಗಸ್ಟ್ನಲ್ಲಿ ಘೋಷಣೆಯಾಗಲಿದ್ದು, ಸಪ್ಟೆಂಬರ್ನಿಂದ ಚಿತ್ರೀಕರಣ ಆರಂಭವಾಗಲಿದೆ.
ಮೂರು ವರ್ಷಗಳ ಹಿಂದೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಪಂಚತಂತ್ರ’ ಸಿನಿಮಾದಲ್ಲಿ ನಟಿಸಿದ ಬಳಿಕ ವಿಹಾನ್ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ, ರೊಮ್ಯಾನ್ಸ್ ಡ್ರಾಮಾ ಶೈಲಿಯ ಚಿತ್ರದ ಮೂಲಕ ವಿಹಾನ್ ಮತ್ತೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳೂ ಈಗಾಗಲೇ ಆರಂಭವಾಗಿದೆ. ಚಿತ್ರದಲ್ಲಿ ನಾಯಕನಿಗೆ ಮೂರು ಶೇಡ್ಗಳಿರಲಿವೆ. ಕಾಲೇಜು ವಿದ್ಯಾರ್ಥಿ, ಕ್ರಿಕೆಟ್ ಆಟಗಾರ ಹಾಗೂ ಉದ್ಯಮಿಯಾಗಿ ವಿಹಾನ್ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುದಕ್ಕೂ ವಿಹಾನ್ ಸೂಕ್ತ ಎನ್ನುವ ಕಾರಣದಿಂದ ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ ಚಂದ್ರಜಿತ್.
ರಕ್ಷಿತ್ ಶೆಟ್ಟಿ ಅವರ ‘ಸೆವೆನ್ ಆಡ್ಸ್’ ತಂಡದಲ್ಲಿ ಬರಹಗಾರನಾಗಿ ಚಂದ್ರಜಿತ್ ಬೆಳ್ಳಿಯಪ್ಪಗುರುತಿಸಿಕೊಂಡಿದ್ದರು. ಈ ಮೊದಲು ರಿಷಬ್ ಶೆಟ್ಟಿ ಅವರ ‘ಕಥಾಸಂಗಮ’ ಸಿನಿಮಾದಲ್ಲಿನ ‘ರೇನ್ಬೋ ಲ್ಯಾಂಡ್’ ಎಂಬ ಕಥೆಯನ್ನು ಚಂದ್ರಜಿತ್ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬರವಣಿಗೆಯ ಭಾಗವಾಗಿದ್ದರು.
ರೊಮ್ಯಾನ್ಸ್ ಡ್ರಾಮಾ ಮತ್ತು ಮ್ಯೂಸಿಕಲ್ ಲವ್ಸ್ಟೋರಿ ಹಿನ್ನಲೆಯ ಈ ಸಿನಿಮಾದಲ್ಲಿ ಕಾಲೇಜು ಜೀವನವೂ ಕಾಣಿಸಲಿದೆ ಎಂದಿದೆ ಚಿತ್ರತಂಡ. ಅಮೆರಿಕಾದ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್ ಸೆಲ್ವರಾಜನ್ ಈ ಹೊಸ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಗಗನ್ ಬದೇರಿಯಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.