ಪ್ರಭಾಸ್ ಬಳಿಕ ನಟ ಮಹೇಶ್ ಬಾಬು ಬಾಲಿವುಡ್ ಮಾರುಕಟ್ಟೆ ಮೇಲೆ ಕಣ್ಣು ನೆಟ್ಟಿದ್ದಾರೆ. ಮಹೇಶ್ ಬಾಬು ಅವರ ಮುಂದಿನ ಸಿನಿಮಾ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಹೊಸ ಚಿತ್ರವನ್ನು ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.
ಈಗ ಭಾರತೀಯ ಸಿನಿಮಾ ರಂಗದಲ್ಲಿ ಬಹುಭಾಷಾ ಸಿನಿಮಾಗಳ ಹಬ್ಬ. ‘ಬಾಹುಬಲಿ’ ಹಾಗೂ ‘ಕೆಜಿಎಫ್ ಭಾಗ 1’ ಸಿನಿಮಾಗಳ ಯಶಸ್ಸಿನ ನಂತರ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಹಾಗೂ ನಟರು ಬಹುಭಾಷಾ ಸಿನಿಮಾಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಈಗ ಮಹೇಶ್ ಬಾಬು ಅವರ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.ಪ್ರಶಾಂತ್ ನೀಲ್ ಈ ಚಿತ್ರವನ್ನು ‘ಕೆಜಿಎಫ್’ನಂತೆ ಮಾಡಲು ಯೋಜನೆ ಹಾಕಿಕೊಂಡಿದ್ದಾರಂತೆ.
‘ಕೆಜಿಎಫ್– ಭಾಗ 2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್, ಕಳೆದ ವಾರ ಬಿಡುವು ಪಡೆದುಕೊಂಡು ಮಹೇಶ್ ಬಾಬು ಅವರನ್ನು ಭೇಟಿ ಮಾಡಿ ಕತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಶಾಂತ್ ಜೊತೆ ಕೆಲಸ ಮಾಡಲು ಪ್ರಿನ್ಸ್ ಒಪ್ಪಿಗೆ ಸೂಚಿಸಿದ್ದಾರೆ.
ಮಹೇಶ್ ಬಾಬು ಸದ್ಯ ‘ಸರಿಲೇರು ನೀಕೆವ್ವರು’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ. ಈ ಚಿತ್ರ ಮುಂದಿನ ಮೇನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಮುಖ್ಯ ದೃಶ್ಯಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ.
ಮಹೇಶ್ ಬಾಬು ಅವರ ಹೊಸ ಚಿತ್ರವು ‘ಕೆಜಿಎಫ್– ಭಾಗ2’ ಬಿಡುಗಡೆ ನಂತರ ಸೆಟ್ಟೇರಲಿದೆ.