ದಾವಣಗೆರೆ: 2021ರ ಜನವರಿ ತಿಂಗಳಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಹರಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ‘ಯುವರತ್ನ ಸಮಾವೇಶ’ದಲ್ಲಿ ನಟ ಪುನೀತ್ ರಾಜ್ಕುಮಾರ್ ಭಾಗವಹಿಸಿದ್ದರು.
ಆ ವೇಳೆ ಹಾಡು ಹೇಳುವಂತೆ ಜನರು ಬೇಡಿಕೆ ಇಟ್ಟಾಗ ಪುನೀತ್, ‘ಬೊಂಬೆ ಹೇಳುತೈತೆ..ನೀನೇ ರಾಜಕುಮಾರ’..ಎಂಬ ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು.
‘ನಾವು ಮೊದಲು ತಂದೆ–ತಾಯಿ ಬಳಿಕ ಗುರುಹಿರಿಯರನ್ನು ಗೌರವಿಸಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ, ಗೌರವ ಇರಬೇಕು. ನಾವು ಚೆನ್ನಾಗಿದ್ದರೆ ನಮ್ಮ ಸುತ್ತಲಿನವರೂ ಉತ್ತಮ ಸ್ಥಿತಿಯಲ್ಲಿರುತ್ತಾರೆ’ ಎಂದು ಪುನೀತ್ ರಾಜ್ಕುಮಾರ್ ಹೇಳಿದ್ದರು.
‘ಗಿಡ ನೆಟ್ಟು, ಮರವಾಗಿ ಬೆಳೆಯುವಂತೆ ನೀವು ಗಟ್ಟಿಯಾಗಿ ಬೆಳೆದು ನಿಮ್ಮಲ್ಲಿನ ‘ಯುವರತ್ನ’ನನ್ನು ಕಂಡುಕೊಳ್ಳಿ’ ಎಂದು ಕಿವಿಮಾತು ಹೇಳಿದ್ದ ಪುನೀತ್ ರಾಜ್ಕುಮಾರ್ ‘ಇಲ್ಲಿ ಶೂಟಿಂಗ್ ಮಾಡುವ ಅವಕಾಶ ಸಿಕ್ಕರೆ ಮತ್ತೆ ಬರುತ್ತೇನೆ’ ಎಂದು ಹೇಳಿ ಹೊರಟಿದ್ದರು.
ಇದಕ್ಕೂ ಮೊದಲು 2019ರ ಮಾರ್ಚ್ 3ರಂದು ನಟಸಾರ್ವಭೌಮ ಚಿತ್ರದ ಪ್ರಚಾರಕ್ಕಾಗಿ ಪುನೀತ್ ರಾಜ್ಕುಮಾರ್ ದಾವಣಗೆರೆಗೆ ಬಂದಿದ್ದರು.
ಆ ವೇಳೆ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದ್ದರು. ‘ಸೆಲ್ಫಿ’ ತೆಗೆದುಕೊಳ್ಳಲು ಅಭಿಮಾನಿಗಳು ಪೈಪೋಟಿಗೆ ಇಳಿದಿದ್ದರು. ಆ ವೇಳೆ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿ ಜನರನ್ನು ನಿಯಂತ್ರಿಸಿದ್ದರು.