ಸಿನಿಮಾ ಎಂದರೆ ರೇಸ್. ಪ್ರತಿ ವಾರ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಅವೆಲ್ಲವೂ ಒಂದರ ಜೊತೆ ಇನ್ನೊಂದು ಎಂಬಂತೆ ರೇಸ್ ನಡೆಸಬೇಕು... ನಟರಾದ ದಿವಾಕರ್, ಸಂತೋಷ್ ಮತ್ತು ನಕುಲ್ ಗೋವಿಂದ್ ಅವರು ತಮ್ಮ ಕನಸುಗಳ ಜೊತೆ ರೇಸ್ ನಡೆಸಿ, ಹೊಸ ಸಿನಿಮಾ ಸಿದ್ಧಪಡಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ ‘ರೇಸ್’.
ಚಿತ್ರದ ಹಾಡುಗಳನ್ನು ತೋರಿಸಿ, ಚಿತ್ರದ ಬಗ್ಗೆ ಒಂದೆರಡು ಮಾಹಿತಿ ನೀಡಲು ಸಿನಿಮಾ ತಂಡ ಚಿಕ್ಕ ಕಾರ್ಯಕ್ರಮ ಆಯೋಜಿಸಿತ್ತು. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳ ಮಾತುಗಳಲ್ಲಿ ಒಂದಿಷ್ಟು ಹಿನ್ನೋಟದ ಅಂಶಗಳೂ ಇದ್ದವು.
‘ಇದು ನನ್ನ ಹಲವು ವರ್ಷಗಳ ಕನಸು. ನಾನು ಬೆಂಗಳೂರಿಗೆ ಬಂದಿದ್ದೇ ಸಿನಿಮಾ ಹೀರೊ ಆಗಲು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಈಗ ನನಗೊಂದು ಅವಕಾಶ ದೊರೆತಿದೆ’ ಎನ್ನುತ್ತ ಮೊದಲ ಮಾತು ಆರಂಭಿಸಿದರು ನಟ ದಿವಾಕರ್.
ಅವರು ಸಿನಿಮಾ ನಾಯಕ ನಟ ಆಗುವ ಅವಕಾಶ ದೊರೆಯದಿದ್ದಾಗ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅವರದೇ ಮಾತಿನಲ್ಲಿ ಹೇಳುವುದಾದರೆ, ‘ಸೇಲ್ಸ್ಮ್ಯಾನ್ ಆಗಿ ರಾಜ್ಯದ ಮೂಲೆ ಮೂಲೆ ಸುತ್ತಿದ್ದರು’. ನಂತರ ದಿವಾಕರ್ ಅವರಿಗೆ ಬಿಗ್ ಬಾಸ್ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಆ ಮೂಲಕ ಸಿನಿಮಾ ಲೋಕ ಪ್ರವೇಶಿಸುವ ಕನಸು ಸಾಕಾರವಾಯಿತು.
ಚಿತ್ರದ ಇನ್ನೊಬ್ಬ ಪ್ರಮುಖ ಪಾತ್ರಧಾರಿ ಸಂತೋಷ್. ‘ನಾನು ಯಶಸ್ಸಿನ ಹಿಂದೆ ಓಡುತ್ತಿದ್ದೇನೆ. ಈ ಸಿನಿಮಾ ಮೂಲಕ ಯಶಸ್ಸು ಕಂಡುಕೊಳ್ಳುವ ಭರವಸೆಯಲ್ಲಿ ಇದ್ದೇನೆ. ನಾವೆಷ್ಟು ಸಿನಿಮಾ ಮಾಡಿದ್ದೇವೆ ಎಂಬುದಕ್ಕಿಂತಲೂ, ಯಶಸ್ಸು ಮುಖ್ಯವಾಗುತ್ತದೆ’ ಎಂದರು ಸಂತೋಷ್. ಅವರು ಈ ಚಿತ್ರದಲ್ಲಿ ಹಲವು ಶೇಡ್ಗಳಲ್ಲಿ ಕಾಣಿಸುತ್ತಾರಂತೆ. ಹೀಗೆ ಕಾಣಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಆಗಿತ್ತಂತೆ.
ನಕುಲ್ ಗೋವಿಂದ್ ಅವರು ಈ ಚಿತ್ರದಲ್ಲಿ ಒಳ್ಳೆಯ ಪಾತ್ರವೊಂದನ್ನು ನಿಭಾಯಿಸುವ ಅವಕಾಶ ದೊರೆತ ಖುಷಿಯಲ್ಲಿ ಇದ್ದರು. ‘ನಾವು ಹಲವು ಸಿನಿಮಾಗಳನ್ನು ಮಾಡುತ್ತೇವೆ. ಅದರೆ ಒಂದು ಸಿನಿಮಾ ನಮಗೆ ಹೊಸ ಬದುಕು ಕೊಡುತ್ತದೆ’ ಎಂದರು ನಕುಲ್.
ಚಿತ್ರದ ನಾಯಕಿ ರಕ್ಷಾ ಶೆಣೈ. ಅವರು ಹೆಚ್ಚೇನೂ ಮಾತನಾಡಲಿಲ್ಲ. ‘ಸಂತೋಷ, ಒಂಥರಾ ಭಯ, ಉತ್ಸಾಹ ನನ್ನಲ್ಲಿ ತುಂಬಿಕೊಂಡಿವೆ’ ಎಂದರು. ಅವರದು ಇದರಲ್ಲಿ ಅಂಜನಿ ಎನ್ನುವ ಪಾತ್ರ. ಅದು ‘ಒಂದಿಷ್ಟು ನಿಗೂಢವನ್ನೂ ಒಂದಿಷ್ಟು ಬಬ್ಲಿ ಗುಣಗಳನ್ನೂ’ ಹೊತ್ತುಕೊಂಡಿದೆ ಎಂದರು ರಕ್ಷಾ. ಚಿತ್ರದ ನಿರ್ದೇಶನ ಹೇಮಂತ್ ಕೃಷ್ಣ ಅವರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.