ರೈತನ ಬದುಕು ಬವಣೆಯನ್ನು ವಿವರಿಸುವ ಚಿತ್ರ ‘ರೈತ’. ಅದರ ಪೋಸ್ಟರ್ನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಇತ್ತೀಚೆಗೆ ಬಿಡುಗಡೆ ಮಾಡಿದರು.
‘ನಾವೆಲ್ಲಾ ಇಂದು ನೆಮ್ಮದಿಯ ಜೀವನ ನಡೆಸಲು ಮುಖ್ಯ ಕಾರಣ ರೈತ. ಆತ ಬೆಳೆದ ಆಹಾರ ತಿಂದು ನಾವು ಸುಖವಾಗಿದ್ದೇವೆ. ಅಂತಹ ‘ರೈತ’ ನ ಕುರಿತು ಬರುತ್ತಿರುವ ಚಿತ್ರವಿದು’ ಎಂದರು ಪಾಟೀಲ್.
ಕುಮುದಾ ಆರ್ಟ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಅಮರನಾಥ ರೆಡ್ಡಿ ವಿ. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ರೈತ ಬೇರೆ ಯಾರಿಂದಲೂ ಬಡ್ಡಿಗಾಗಿ ಹಣ ಪಡೆದು ಕಷ್ಟಪಡಬಾರದು. ಆತನ ಅನುಕೂಲಕ್ಕಾಗಿ ಸಾಕಷ್ಟು ಬ್ಯಾಂಕ್ಗಳಿವೆ. ವಿಮೆ ಇದೆ. ಇದರ ಲಾಭ ಪಡೆದುಕೊಳ್ಳಬಹುದು’ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕ ರಾಜೇಂದ್ರ ಕುಣಿಗಲ್.
ತೆಲುಗಿನಲ್ಲಿ ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಕುಣಿಗಲ್ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಸಂಭಾಷಣೆಯನ್ನು ಅವರೆ ಬರೆದಿದ್ದಾರೆ. ನೃತ್ಯ ನಿರ್ದೇಶನ ಕೂಡ ರಾಜೇಂದ್ರ ಅವರದ್ದೇ.
ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚಿಂತಾಮಣಿ ಮುಂತಾದ ಕಡೆ ಮೂವತ್ತೆಂಟು ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ನಾಲ್ಕು ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶ ಈ ಚಿತ್ರದಲ್ಲಿದೆ. ಮುರಳಿ ನೃತ್ಯ ನಿರ್ದೇಶನ, ಕೊಟ್ರೇಶ್ - ಸುರೇಶ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಅಮರ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಖುಷಿ. ಸೊಫಿಯಾ, ಸುಜಾತ, ರೇಖಾದಾಸ್, ಸಂಗೀತ, ಸಿದ್ದಾರ್ಥ, ಲಕ್ಷ್ಮಣ್, ಸುರೇಶ್, ಕೃಷ್ಣ ರೆಡ್ಡಿ ತಾರಾಬಳಗದಲ್ಲಿದ್ದಾರೆ.