ಬೆಂಗಳೂರು: ತಮಿಳು ಸೂಪರ್ಸ್ಟಾರ್ ರಜನೀಕಾಂತ್ ಅವರು ಬೆಂಗಳೂರಿನ ಶೇಷಾದ್ರಿಪುರದಲ್ಲಿ ಇರುವ ಅಪೋಲೊ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ತಮ್ಮ ಸಹೋದರ ಸತ್ಯನಾರಾಯಣ ಅವರ ಆರೋಗ್ಯ ವಿಚಾರಿಸಿದರು.
ಸತ್ಯನಾರಾಯಣ ಅವರು ಮಂಡಿನೋವಿನಿಂದ ಬಳಲುತ್ತಿದ್ದರು. ಅವರಿಗೆ ಮಂಡಿಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸತ್ಯನಾರಾಯಣ ಅವರು ಆರೋಗ್ಯವಾಗಿದ್ದಾರೆ, ಅವರು ಈಗ ನಡೆಯಲು ಅಡ್ಡಿಯಿಲ್ಲ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಕಿರಣ್ ಚೌಕ ಅವರು ರಜನೀಕಾಂತ್ ಅವರಿಗೆ ಮಾಹಿತಿ ನೀಡಿದರು.
ರಜನಿ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸುದ್ದಿ ತಿಳಿದ ಅವರ ಅಭಿಮಾನಿಗಳು, ನೆಚ್ಚಿನ ನಟನನ್ನು ನೋಡಲು ಆಸ್ಪತ್ರೆಯ ಎದುರು ಗುಂಪುಗೂಡಿದ್ದರು. ಇದರಿಂದಾಗಿ ಸಂಚಾರಕ್ಕೆ ತುಸು ಅಡಚಣೆ ಉಂಟಾಯಿತು.