ಅಮರಾವತಿ: ದೇಶದ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಹೊಂದಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ಬರೆದಿದ್ದ ಪತ್ರವನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ವಾಪಸ್ ಪಡೆದಿದೆ.
ಎಎಸ್ಐ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಎಎಸ್ಐ ಬರೆದ ಪತ್ರಕ್ಕೆ ಆಂಧ್ರ ಪ್ರದೇಶ ಸರ್ಕಾರದಿಂದಲೂ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
ಕೇಂದ್ರ ಸರ್ಕಾರ ಇಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಿಜೆಪಿ ಹೇಳಿತ್ತು. ಕೆಲವು ರಾಜಕೀಯ ಗುಂಪುಗಳು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವುದಕ್ಕೆ ‘ಸುಳ್ಳು’ಗಳನ್ನು ಹರಡುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಹೇಳಿತ್ತು.
ಆದರೆ ಎಎಸ್ಐಯ ಪತ್ರ ಬಹಿರಂಗವಾದ ಬಳಿಕ ಎಎಸ್ಐ ಮಹಾನಿರ್ದೇಶಕಿ ಉಷಾ ಶರ್ಮಾ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಸಿಂಘಾಲ್ ಅವರಿಗೆ ಕರೆ ಮಾಡಿ ಪತ್ರವನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ.