ಮುಂಬೈ: ಕಳೆದ ವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ತಡೆದು ಪರಿಶೀಲನೆ ನಡೆಸಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಗೆ ಬಹುಮಾನ ನೀಡಲಾಗಿದೆ.
ಅಧಿಕಾರಿಯ ವೃತ್ತಿಪರತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಸೂಕ್ತ ಬಹುಮಾನ ನೀಡಲಾಗಿದೆ ಎಂದು ಸಿಐಎಸ್ಎಫ್ ಬುಧವಾರ ಟ್ವೀಟ್ ಮಾಡಿದೆ.
ಸಲ್ಮಾನ್ ಖಾನ್ ಅವರನ್ನು ತಡೆದು ಪರಿಶೀಲಿಸಿರುವ ಅಧಿಕಾರಿಗೆ ದಂಡ ವಿಧಿಸಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದವು.
ಇದನ್ನು ಅಲ್ಲಗಳೆದಿರುವ ಸಿಐಎಸ್ಎಫ್, 'ಕರ್ತವ್ಯದಲ್ಲಿ ವೃತ್ತಿಪರತೆ ಪ್ರದರ್ಶಿಸಿರುವ ಅಧಿಕಾರಿಗೆ ಸೂಕ್ತ ಬಹುಮಾನ ನೀಡಲಾಗಿದೆ' ಎಂದು ತಿಳಿಸಿದೆ.
ಟೈಗರ್-3 ಚಿತ್ರೀಕರಣದ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಕಳೆದ ವಾರ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈಗಾಗಲೇ ಟೈಗರ್–3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯವಾಗಿದೆ. ಇದರಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದರು.
ಇದೀಗ ರಷ್ಯಾ, ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 18ರಂದು ಪ್ರಯಾಣ ಬೆಳೆಸಿರುವ ಚಿತ್ರತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ.
ಮನಿಶ್ ಶರ್ಮಾ ಟೈಗರ್–3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರಿನಾ, ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರೆದಿದ್ದಾರೆ.