ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರಡಿ’ಯಿಂದ ಹೊರಬಂದ ರಚಿತಾ, ನಾಯಕಿಯಾಗಿ ಸೋನಲ್‌ ಮೊಂತೆರೋ

Last Updated 10 ಫೆಬ್ರುವರಿ 2022, 9:27 IST
ಅಕ್ಷರ ಗಾತ್ರ

ಕಾಲ್‌ಶೀಟ್‌ ಸಮಸ್ಯೆಯಿಂದಾಗಿ ನಟಿ ರಚಿತಾ ರಾಮ್‌ ಅವರು ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದಿಂದ ಹೊರಬಂದಿದ್ದಾರೆ. ರಚಿತಾ ರಾಮ್‌ ಬದಲಾಗಿ ನಾಯಕಿ ಸ್ಥಾನಕ್ಕೆ ಇದೀಗ ನಟಿ ಸೋನಲ್‌ ಮೊಂತೆರೋ ಆಯ್ಕೆಯಾಗಿದ್ದು, ಚಿತ್ರದ ಚಿತ್ರೀಕರಣ ಬುಧವಾರದಿಂದ ಆರಂಭವಾಗಿದೆ.

ನಟಿ ಸೋನಲ್‌ ಮೊಂತೆರೋ
ನಟಿ ಸೋನಲ್‌ ಮೊಂತೆರೋ

ಚಂದನವನದ ಜೊತೆಗೆ ಟಾಲಿವುಡ್‌ನಲ್ಲೂ ರಚಿತಾ ರಾಮ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ‘ಕ್ರಾಂತಿ’, ‘ಮ್ಯಾಟ್ನಿ’, ‘ಶಬರಿ’ ಸೇರಿದಂತೆ ಸಾಲು ಸಾಲು ಚಿತ್ರಗಳ ಚಿತ್ರೀಕರಣದಲ್ಲಿ ರಚಿತಾ ರಾಮ್‌ ತೊಡಗಿಸಿಕೊಂಡಿದ್ದಾರೆ. ಯೋಗರಾಜ್‌ ಭಟ್‌ ಅವರೇ ನಿರ್ದೇಶಿಸಿದ್ದ ‘ಪಂಚತಂತ್ರ’ ಸಿನಿಮಾ ಮೂಲಕವೇ ಕೋಸ್ಟಲ್‌ವುಡ್‌ನಿಂದ ಚಂದನವನಕ್ಕೆ ನಾಯಕಿಯಾಗಿ ಹೆಜ್ಜೆ ಇಟ್ಟಿದ್ದ ನಟಿ ಸೋನಲ್‌ ಮೊಂತೆರೋ ಸದ್ಯಕ್ಕೆ ಚಂದನವನದ ಬಹುಬೇಡಿಕೆಯ ನಟಿ. ‘ರಾಬರ್ಟ್‌’ ಸಿನಿಮಾದ ‘ತನು’ ಪಾತ್ರದ ಯಶಸ್ಸಿನ ಬಳಿಕ ಸಾಲು ಸಾಲು ಆಫರ್‌ಗಳು ಸೋನಲ್‌ ಅವರನ್ನು ಅರಸಿಕೊಂಡು ಬಂದಿವೆ. ‘ಪದವಿಪೂರ್ವ’, ‘ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ’, ‘ಬನಾರಸ್‌’, ‘ಶುಗರ್‌ ಫ್ಯಾಕ್ಟರಿ’, ‘ತಲ್ವಾರ್‌ ಪೇಟೆ’, ‘ನಟವರ್‌ಲಾಲ್‌’, ‘ಶಂಭೋ ಶಿವಶಂಕರ’, ‘ಬುದ್ಧಿವಂತ–2’ ಹೀಗೆ ಸೋನಲ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತದೆ. ಇದಕ್ಕೆ ಹೊಸ ಸೇರ್ಪಡೆ ‘ಗರಡಿ’.

ಚಿತ್ರದ ‘ಮುಹೂರ್ತ’ ಹಾಗೂ ‘ಟೈಟಲ್ ಲಾಂಚ್’ ಕಾರ್ಯಕ್ರಮ ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದಿತ್ತು. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಪತ್ನಿ ವನಜಾ ಪಾಟೀಲ ಹಾಗೂ ಪುತ್ರಿ ಸೃಷ್ಟಿ ಪಾಟೀಲ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಯಶಸ್ ಸೂರ್ಯ ನಟಿಸುತ್ತಿದ್ಡು, ಬಿ.ಸಿ ಪಾಟೀಲ ಅವರೂ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಟ ದರ್ಶನ್‌ ಅವರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈ ಆ್ಯಕ್ಷನ್‌ ಡ್ರಾಮಾಗೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಯೋಗರಾಜ್‌ ಭಟ್‌ ಅವರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT