ಬಾಲಿವುಡ್ ನಟ ಸೋನು ಸೂದ್, ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಊಟ, ವಸತಿ ಒದಗಿಸಿದ್ದು, ಕಾರ್ಮಿಕರನ್ನು ಬಸ್ಸು, ರೈಲು, ವಿಮಾನಗಳ ಮೂಲಕ ಅವರವರ ಊರುಗಳಿಗೆ ತಲುಪಿಸಿದ್ದು...
ಇಂಥ ಹಲವು ಸೋನು ಅವರ ಸೇವೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಈಗ ಮತ್ತೆ ಸೋನು ಸೂದ್ ಇಂಥದ್ದೇ ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಕಿರ್ಗಿಸ್ತಾನದಲ್ಲಿರುವ ನಮ್ಮ ದೇಶದ ವಿದ್ಯಾರ್ಥಿಗಳನ್ನು ಅವರ ಊರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಿರ್ಗಿಸ್ತಾನದಲ್ಲಿವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ವಿಶಾಖಪಟ್ಟಣಕ್ಕೆ ಕರೆತರುತ್ತಿದ್ದಾರೆ ಸೋನು ಸೂದ್. ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
’ಸ್ನೇಹಿತರೆ, ನಿಮಗೊಂದು ಒಳ್ಳೆಯ ಸುದ್ದಿ. ಕಿರ್ಗಿಸ್ತಾನದಿಂದ ವಿಶಾಖಪಟ್ಟಣಕ್ಕೆ ಹೋಗಲಿರುವ ಸ್ಪೈಸ್ಜೆಟ್ ವಿಮಾನ, 24ರಂದು ಬಿಷ್ಕೇಕ್ನಿಂದ ಮಧ್ಯಾಹ್ನ 3 ಗಂಟೆಗೆ ಟೇಕ್ಆಫ್ ಆಗಲಿದೆ. ಏರ್ಪೋರ್ಟ್ನಲ್ಲಿ ಸಿದ್ಧವಾಗಿರಿ. ನಿಮ್ಮ ಕುಟುಂಬದವರನ್ನು ಭೇಟಿಯಾಗುವ ಸಮಯ ಬಂದಿದೆ’ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ ಸೋನು.
Good news friends💫Flight from Kyrgyzstan to Vizag will takeoff at 3 pm today, 24th July from Bishkek..be at the airport on time time folks. Time to meet your families❣️@flyspicejet
— sonu sood (@SonuSood) July 24, 2020
ಈ ಮೊದಲು 23ನೇ ತಾರೀಖು ವಿಮಾನ ಕಿರ್ಗಿಸ್ತಾನದಿಂದ ಹೊರಡಬೇಕಿತ್ತು. ಹವಾಮಾನ ವ್ಯತ್ಯಾಸದಿಂದಾಗಿ ಪ್ರಯಾಣದ ದಿನ ಮುಂದೂಡಲಾಯಿತು. ಮುಂದೂಡಿದ ದಿನಾಂಕವನ್ನು ಸೋನು ಸೂದ್ ಟ್ವೀಟ್ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದ್ದರು.
Hi students of Kyrgyzstan, just to update all of you we are postponing the flight from KYRGYZSTAN—VARANASI to tomorrow, 23rd July due to weather conditions. Students who have not registered, kindly do it today. The timings of the flight for tomorrow I will update in few hours.
— sonu sood (@SonuSood) July 22, 2020
ನಟ ಮತ್ತು ಕಮೆಡಿಯನ್ ಕಪಿಲ್ ಶರ್ಮಾ, ಸೋನು ಸೂದ್ ಅವರ ಈ ಸಮಾಜಸೇವೆಯನ್ನು ಕೊಂಡಾಡಿದ್ದಾರೆ. 'ಈ ಸಮಯದಲ್ಲಿ ಜನರಿಗೆ ಏನು ಅಗತ್ಯವಿದೆಯೋ ಅದನ್ನು ಸೇವೆ ಮೂಲಕ ನೀಡುತ್ತಿದ್ದೀರಿ. ನಿಮ್ಮ ಕಾರ್ಯವನ್ನು ಬಣ್ಣಿಸಲು ಪದಗಳು ಸಿಗುತ್ತಿಲ್ಲ. ನೀವು ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಿರಬಹುದು. ನೀವು ನಿಜ ಜೀವನದಲ್ಲಿ ನಮ್ಮ ನಾಯಕನೇ. ನಿಮಗೆ ಆ ದೇವರು ಹೆಚ್ಚು ಆರೋಗ್ಯ, ದೀರ್ಘಾಯಸ್ಸು ನೀಡಲಿ’ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ ಕಪಿಲ್ ಶರ್ಮಾ.
ಈ ಹಿಂದೆ ಸೋನು ಸೂದ್ ಅವರು ಕೇರಳದ ಎರ್ನಾಕುಲಂನಿಂದ ವಲಸೆ ಕಾರ್ಮಿಕರನ್ನು ಭುವನೇಶ್ವರಕ್ಕೆ ವಿಮಾನದಲ್ಲಿ ಕಳಿಸುವ ವ್ಯವಸ್ಥೆ ಮಾಡಿದ್ದರು. ಇದಾದ ನಂತರಮಹಾರಾಷ್ಟ್ರದಿಂದ ಕರ್ನಾಟಕ ಮತ್ತು ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು10 ಬಸ್ಗಳ ಮೂಲಕ ಅವರ ತವರಿಗೆ ಕಳುಹಿಸಿದ್ದರು. ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.
ಸೋನು ಸಾಮಾಜಿಕ ಕಾರ್ಯಕ್ಕೆ ಫಿದಾ ಆದ ವ್ಯಕ್ತಿಯೊಬ್ಬ ತನ್ನ ಅಂಗಡಿಗೆ ಸೋನುಸೂದ್ ಹೆಸರಿಡಲು ಮುಂದಾಗಿದ್ದರು. ಇನ್ನೊಂದು ಕಡೆ ಸೋನು ಬಯೋಪಿಕ್ ಆಧರಿಸಿ ಸಿನಿಮಾ ತೆಗೆಯುವ ಸಿದ್ಧತೆಯೂ ನಡೆಯುತ್ತಿತ್ತು. ಅಷ್ಟೇ ಅಲ್ಲ, ಸ್ವತಃ ಸೋನು ಸೂದ್ ಅವರೇ, ’ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಿದ’ ಕಥೆಯನ್ನೇ ಪುಸ್ತಕವಾಗಿಸಲು ಮುಂದಾಗಿರುವುದು ಸುದ್ದಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.