ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಕ ಎಸ್‌ಪಿಬಿ ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆ‌: ಪುತ್ರ ಚರಣ್‌ ಮಾಹಿತಿ

Last Updated 23 ಸೆಪ್ಟೆಂಬರ್ 2020, 7:24 IST
ಅಕ್ಷರ ಗಾತ್ರ

ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಶೀಘ್ರವೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕೋವಿಡ್‌–19 ಸೋಂಕು ಇರುವುದು ದೃಢಪಟ್ಟ ಪರಿಣಾಮ ಆಗಸ್ಟ್‌ 5ರಂದು ಎಸ್‌ಪಿಬಿ ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ವೆಂಟಿಲೇಟರ್‌ ಅಳವಡಿಸಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರಿಗೆ ಕೊರೊನಾ ನೆಗೆಟಿವ್‌ ಇರುವ ವರದಿ ಬಂದಿತ್ತು.

‘ಅಪ್ಪನ ಆರೋಗ್ಯದಲ್ಲಿ ಪ್ರತಿದಿನವೂ ಸುಧಾರಣೆ ಕಂಡುಬರುತ್ತಿದೆ. ನನಗೆ ಇದಕ್ಕಿಂತ ಖುಷಿ ಬೇರೊಂದಿಲ್ಲ. ಇಕೆಎಂಒ ಉಪಕರಣ ಮತ್ತು ವೆಂಟಿಲೇಟರ್ ಅಳವಡಿಸಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಪಿಸಿಯೋಥೆರಪಿಯನ್ನೂ ಮಾಡಲಾಗುತ್ತಿದೆ. ಅಪ್ಪ ದ್ರವ ಆಹಾರ ಸೇವಿಸುತ್ತಿದ್ದಾರೆ. ಶೀಘ್ರವೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳುವುದನ್ನೇ ನಾನು ಎದುರು ನೋಡುತ್ತಿದ್ದೇನೆ’ ಎಂದು ಎಸ್‌ಪಿಬಿ ಅವರ ಪುತ್ರ ಎಸ್‌.ಪಿ. ಚರಣ್‌ ಟ್ವೀಟ್‌ ಮಾಡಿದ್ದಾರೆ.

ಚರಣ್‌ ನೀಡಿರುವ ಈ ಮಾಹಿತಿಯು ಎಸ್‌ಪಿಬಿ ಅವರ ಅಭಿಮಾನಿಗಳಲ್ಲಿ ಸಂತಸದ ಅಲೆಯನ್ನು ಉಕ್ಕಿಸಿದೆ. ಎಸ್‌ಬಿಪಿ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಶೀಘ್ರ ಮನೆಗೆ ಮರಳಲಿ ಎಂದು ‘ಸೂಪರ್‌ ಸ್ಟಾರ್’ ರಜನಿಕಾಂತ್‌, ಇಳೆಯರಾಜ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ಉಂಟು. ಕನ್ನಡ ಚಿತ್ರರಂಗದಿಂದಲೂ ಹಂಸಲೇಖ ಸೇರಿದಂತೆ ಹಲವು ನಟ, ನಟಿಯರು ಎಸ್‌ಬಿಪಿ ಅವರ ಚೇತರಿಕೆ ಸಂಬಂಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT