ಹೈದರಾಬಾದ್: ಜೀವನದಲ್ಲಿ ಈಗಾಗಲೇ ಮದುವೆಯಾಗಿ ತಪ್ಪು ಮಾಡಿದ್ದೀಯಾ, ಮತ್ತೆ ಎರಡನೇ ಮದುವೆ ಬೇಡ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟ ಸುಮಂತ್ಗೆ ಹೇಳಿದ್ದಾರೆ.
ತೆಲುಗು ನಟ ಸುಮಂತ್ ಎರಡನೇ ಮದುವೆಯಾಗುತ್ತಿದ್ದಾರೆ. ತಮ್ಮ ವಿವಾಹದ ಆಮಂತ್ರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವರ್ಮಾ ಮದುವೆಯಾಗಿ ಜೀವನ ಹಾಳು ಮಾಡಿಕೊಳ್ಳಬೇಡ ಎಂದಿದ್ದಾರೆ.
ಈಗಾಗಲೇ ಒಂದು ಮದುವೆಯಾಗಿ ಸಾಕಷ್ಟು ಅನುಭವಿಸಿದ್ದೀಯಾ? ಮತ್ತೆ ನೀನು ಎರಡನೇ ಮದುವೆಯಾಗಬೇಕಾ? ನಿನ್ನ ಕರ್ಮ! ಅನುಭವಿಸು ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಸುಮಂತ್ ಅವರನ್ನು ಮದುವೆಯಾಗುತ್ತಿರುವ ಪವಿತ್ರ ಅವರಿಗೂ ದಯಮಾಡಿ ಮದುವೆಯಾಗಬೇಡಿ ಎಂದುವರ್ಮಾ ಮನವಿ ಮಾಡಿದ್ದಾರೆ. ವೈವಾಹಿಕ ವ್ಯವಸ್ಥೆ ಬದುಕನ್ನು ಹಾಳು ಮಾಡುತ್ತದೆ ಎಂದು ಕಮೆಂಟ್ ಹಾಕಿದ್ದಾರೆ.
ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರ ಅಕ್ಕನ ಮಗನಾಗಿರುವ ಸುಮಂತ್, ಪವಿತ್ರ ಎಂಬುವರನ್ನು ಮದುವೆಯಾಗುತ್ತಿದ್ದಾರೆ. ಕೆಲ ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.
ಸುಮಂತ್ 2004ರಲ್ಲಿ ಕೀರ್ತಿ ರೆಡ್ಡಿ ಎಂಬುವರನ್ನು ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಮೂಡಿ 2006ರಲ್ಲಿ ವಿಚ್ಛೇದನ ಪಡೆದು ಒಂಟಿಯಾಗಿ ಬದುಕುತ್ತಿದ್ದರು. ಇತ್ತ ಕೀರ್ತಿ ರೆಡ್ಡಿ ಮತ್ತೊಂದು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.