ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿ–ಶರಣ್ ಜೋಡಿಯ ತ್ರಿಶಂಕು ಸ್ವರ್ಗ!

Last Updated 15 ಜನವರಿ 2019, 19:45 IST
ಅಕ್ಷರ ಗಾತ್ರ

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ತೆರೆಗೆ ಬರುವ ದಿನಾಂಕ ಮುಂದಕ್ಕೆ ಹೋಗಿದ್ದು ಅವರ ಅಭಿಮಾನಿಗಳಿಗೆ ತುಸು ಬೇಸರ ತರಿಸಿರಬಹುದು. ಆದರೆ, ಆ ಬೇಸರ ನೀಗಿಸಲು ಹೊಸ ಸುದ್ದಿಯೊಂದನ್ನು ಸುನಿ ನೀಡಿದ್ದಾರೆ. ‘ಸುನಿ ಮತ್ತು ಶರಣ್ ಜೋಡಿ ಹೊಸ ಸಿನಿಮಾ ಮಾಡುತ್ತಿದೆ’ ಎಂಬುದು ಆ ಸುದ್ದಿ.

ಅದರ ಜೊತೆಯಲ್ಲೇ, ಇನ್ನೊಂದು ಸುದ್ದಿ ಕೂಡ ಹೊರಬಂದಿದೆ. ಈ ಸಿನಿಮಾದಲ್ಲಿ ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ. ಅವರು ಮಹತ್ವದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಎಂಬುದು ಮೂಲಗಳು ನೀಡಿರುವ ಸುದ್ದಿ.

ಚಿತ್ರದ ಹೆಸರು ಇನ್ನೂ ಅಂತಿಮ ಆಗಿಲ್ಲ. ಆದರೆ, ತ್ರಿಶಂಕು ಸ್ವರ್ಗದ ಪರಿಕಲ್ಪನೆಯನ್ನು ಆಧರಿಸಿದ ಕಥೆಯ ಎಳೆ ಈ ಚಿತ್ರದಲ್ಲಿ ಇರಲಿದೆ ಎಂಬುದು ಸುನಿ ನೀಡಿರುವ ವಿವರಣೆ. ಇದರ ಜೊತೆಯಲ್ಲೇ ಮಹಾಭಾರತದ ಒಂದು ಎಳೆ ಕೂಡ ಇದರಲ್ಲಿ ಇರಲಿದೆಯಂತೆ. ಅಷ್ಟಕ್ಕೂ, ಮಹಾಭಾರತದಲ್ಲಿ ಇರದಿರುವುದು ಇನ್ನೆಲ್ಲೂ ಇರುವುದಿಲ್ಲ ಎಂಬ ಕವಿವಾಣಿಯೇ ಇದೆಯಲ್ಲ?!

ಈ ಸಿನಿಮಾ ಕಥೆ ಸೃಷ್ಟಿಸಿರುವುದು ಸುನಿ ಅವರೇ. ಚಿತ್ರಕಥೆಯನ್ನು ಸುನಿ ಜೊತೆ ಇನ್ನೂ ಕೆಲವರು ಸೇರಿ ಸಿದ್ಧಪಡಿಸಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಹಣ ಹೂಡಿದವರು ಪುಷ್ಕರ ಮಲ್ಲಿಕಾರ್ಜುನಯ್ಯ.

ಚಿತ್ರದ ಕಥೆಯು ಕರ್ನಾಟಕದ ಮಲೆನಾಡಿನ ಪ್ರದೇಶ, ರಾಜಧಾನಿ ಬೆಂಗಳೂರು ಹಾಗೂ ದೂರದ ಒಡಿಶಾದಲ್ಲಿ ನಡೆಯಲಿದೆ. ಶರಣ್ ಅವರು ಚಿತ್ರದ ನಾಯಕ. ಆದರೆ, ಪಾತ್ರದ ಸ್ವಭಾವ ಏನು ಎಂಬುದನ್ನು ಸುನಿ ಇನ್ನೂ ಗುಟ್ಟಾಗಿಯೇ ಇರಿಸಿದ್ದಾರೆ. ಶರಣ್ ಅಭಿನಯ ಅಂದರೆ ವೀಕ್ಷಕರನ್ನು ನಗಿಸುವ ಪ್ರಯತ್ನಗಳಿಗೆ ಅಲ್ಲಿ ಕೊರತೆ ಇರುವುದಿಲ್ಲ ಎಂದೇ ಅರ್ಥ.

‘ಫೆಬ್ರುವರಿ ಮೊದಲ ವಾರದಲ್ಲಿ ಬಜಾರ್ ಚಿತ್ರದ ಬಿಡುಗಡೆ ಇದೆ. ಅದಾದ ತಕ್ಷಣ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ’ ಎನ್ನುತ್ತಾರೆ ಸುನಿ. ಚಿತ್ರದ ನಾಯಕಿ ಯಾರು ಎಂಬುದು ಇನ್ನೂ ಅಂತಿಮ ಆಗಿಲ್ಲ. ಕನ್ನಡದ ಬೆಡಗಿಯೊಬ್ಬಳನ್ನು ಚಿತ್ರತಂಡ ಹುಡುಕುತ್ತಿದೆ ಎಂಬುದು ಮೂಲಗಳಿಂದ ಗೊತ್ತಾಗಿರುವ ಸುದ್ದಿ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT