ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಕೊರಟಾಲ ಶಿವ ನಿರ್ದೇಶನ ‘ಆಚಾರ್ಯ’ ಸಿನಿಮಾದಲ್ಲಿ ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ ನಟಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಕಾರಣಾಂತರಗಳಿಂದ ತ್ರಿಷಾ ಸಿನಿಮಾದಿಂದ ಹೊರ ನಡೆದಿದ್ದಾರೆ.
ಚಿತ್ರತಂಡವೇ ತ್ರಿಷಾ ಅವರನ್ನು ಸಿನಿಮಾದಿಂದ ಹೊರ ಕಳುಹಿಸಿದೆ ಎಂದು ಕೆಲವು ಮೂಲಗಳು ಹೇಳಿದರೆ ಇನ್ನೂ ಕೆಲವರು ಚಿತ್ರತಂಡದೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ ಸ್ವತಃ ತ್ರಿಷಾ ಹೊರನಡೆದಿದ್ದಾರೆ ಎನ್ನುತ್ತಿದ್ದಾರೆ. ಆದರೆ ಈ ಬಗ್ಗೆ ಇಲ್ಲಿಯವರೆಗೆ ಚಿತ್ರತಂಡ ಹಾಗೂ ತ್ರಿಷಾ ಏನೂ ಹೇಳಿರಲಿಲ್ಲ.
ಈಗ ವಿಷಯದ ಬಗ್ಗೆ ತ್ರಿಷಾ ತುಟಿ ಬಿಚ್ಚಿದ್ದಾರೆ. ‘ಕೆಲವೊಮ್ಮೆ ನಾವು ಅಂದುಕೊಂಡ ಹಾಗೆ ಎಲ್ಲವೂ ಆಗುವುದಿಲ್ಲ. ನನ್ನ ಚಿತ್ರತಂಡದ ನಡುವೆ ಕೆಲವೊಂದು ಸೃಜನಾತ್ಮಕ ಭಿನ್ನಾಭಿಪ್ರಾಯಗಳು ಎದುರಾಗಿದ್ದವು. ಆ ಕಾರಣಕ್ಕೆ ಚಿರಂಜೀವಿ ಅವರ ಸಿನಿಮಾದಿಂದ ಹೊರ ಬರಬೇಕಾಯ್ತು’ ಎಂದಿದ್ದಾರೆ.
‘ಆಚಾರ್ಯ ತಂಡಕ್ಕೆ ಆಲ್ ದಿ ಬೆಸ್ಟ್. ಆದಷ್ಟು ಬೇಗ ಒಂದು ಒಳ್ಳೆಯ ಸಿನಿಮಾದ ಮೂಲಕ ಜನರ ಮುಂದೆ ಬರಲು ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ ತ್ರಿಷಾ.
2016ರಲ್ಲಿ ನಾಯಕಿ ಚಿತ್ರದಲ್ಲಿ ತ್ರಿಷಾ ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.