ವಿಕ್ಕಿ ಕೌಶಲ್ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವು ಶುಕ್ರವಾರ (ಜುಲೈ 26) ಮಹಾರಾಷ್ಟ್ರದಲ್ಲಿ ಪುನಃ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ. ಅಂದು ‘ಕಾರ್ಗಿಲ್ ವಿಜಯ ದಿವಸ’ದ ಆಚರಣೆಯೂ ಇದೆ.
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ 2016ರಲ್ಲಿ ಭಾರತೀಯ ಸೇನೆಯು ಉಗ್ರಗಾಮಿಗಳ ಮೇಲೆ ನಡೆಸಿದ ನಿರ್ದಿಷ್ಟ ದಾಳಿಯನ್ನು ಆಧರಿಸಿದ್ದು. ‘ಉರಿ ಚಿತ್ರವು ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಭಾಗವಾಗುತ್ತಿರುವುದು ಸಂತಸ ತಂದಿದೆ. ಈ ಚಿತ್ರವನ್ನು ಆಯ್ಕೆ ಮಾಡುವ ಮೂಲಕ ನಮ್ಮ (ಮಹಾರಾಷ್ಟ್ರ) ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಅದ್ಭುತ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಚಿತ್ರವು ಮಹಾರಾಷ್ಟ್ರದ 500 ಕಡೆಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಚಿತ್ರದಿಂದ ಸ್ಫೂರ್ತಿ ಪಡೆದು ಸೇನೆಯನ್ನು ಸೇರುವ ತೀರ್ಮಾನ ಕೈಗೊಂಡ ಯುವಕರಿಂದ ನಮಗೆ ಬಹಳಷ್ಟು ಸಂದೇಶಗಳು ಬಂದಿವೆ’ ಎಂದು ಆದಿತ್ಯ ಹೇಳಿಕೊಂಡಿದ್ದಾರೆ.
ಈ ಚಿತ್ರವು ಜನವರಿ 11ರಂದು ಬಿಡುಗಡೆ ಆಗಿತ್ತು. ಇದು ಬಾಕ್ಸ್ ಆಫೀಸ್ನಲ್ಲಿ ಒಟ್ಟು ₹ 342 ಕೋಟಿ ಹಣ ಸಂಗ್ರಹಿಸಿತ್ತು. ಚಿತ್ರದ ನಾಯಕ ವಿಕ್ಕಿ ಕೌಶಲ್, ನಿರ್ದೇಶಕ ಆದಿತ್ಯ ಮತ್ತು ನಿರ್ಮಾಪಕ ರೋನಿ ಸ್ಕ್ರೂವಾಲಾ ಅವರು ಜೊತೆಯಾಗಿ ‘ಅಶ್ವತ್ಥಾಮ’ ಎನ್ನುವ ಸಿನಿಮಾ ಮಾಡುತ್ತಿದ್ದಾರೆ.