ಯಶ್, ಗಣೇಶ್, ಜೆ.ಕೆ. ಹೀಗೆ ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟು ಮಿಂಚಿದ ಹಲವು ನಟರು ಚಂದನವನದಲ್ಲಿದ್ದಾರೆ. ಇದೇ ರೀತಿ ಚಿತ್ರರಂಗಕ್ಕೆ ಪ್ರವೇಶಿಸಿದವರಲ್ಲಿ ರಿತ್ವಿಕ್ ಮಠದ್ ಕೂಡಾ ಒಬ್ಬರು.
‘ಗಿಣಿರಾಮ’ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿರುವ ಇವರು ಇದೀಗ ‘ಉತ್ಸವ’ ಹೊರಟಿದ್ದಾರೆ. ಚಿತ್ರರಂಗರದಲ್ಲಿ ಈ ವರ್ಷ ಹೊಸಬರ ಆಗಮನವೇ ಹೆಚ್ಚಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ನಿರ್ದೇಶಕ ಅರುಣ್ ಸೂರ್ಯ. ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇರುವ ಅರುಣ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ಉತ್ಸವ’.
ಸದ್ದಿಲ್ಲದೆ ಮನಾಲಿ ಹಾಗೂ ಗೋವಾದಲ್ಲಿ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ‘ಆ ಎರಡು ವರ್ಷಗಳು’, ‘ಗಿಫ್ಟ್ ಬಾಕ್ಸ್’ ಚಿತ್ರದಲ್ಲಿ ನಟಿಸಿದ್ದ ರಿತ್ವಿಕ್ ಅವರಿಗೆ ಇದು ಮೂರನೇ ಸಿನಿಮಾವಾಗಿದೆ. ಪೂರ್ವಿ ಜೋಷಿ ಈ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರೇಮಕಥೆಯ ‘ಉತ್ಸವ’ ಸಿನಿಮಾವನ್ನು ಅರಸ ಪ್ರೊಡಕ್ಷನ್ನಡಿ ಉಷಾ ಶ್ರೀನಿವಾಸ ನಿರ್ಮಾಣ ಮಾಡಿದ್ದಾರೆ. ಜಯಂತ ಕಾಯ್ಕಿಣಿ ಅವರು ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಎಮಿನಲ್ ಮಹಮ್ಮದ್ ಸಂಗೀತ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.