ಜಮ್ಮು : ಜಮ್ಮು ಮತ್ತು ಕಾಶ್ಮೀರದ ಕೆಲ ಗ್ರಾಮ ಹಾಗೂ ಗಡಿ ಪ್ರದೇಶದಲ್ಲಿನ ಹೊರ ಠಾಣೆಗಳ ಮೇಲೆ ಪಾಕಿಸ್ತಾನ ಸೇನೆ ಭಾರಿ ಶೆಲ್ ದಾಳಿ ನಡೆಸಿದ ಪರಿಣಾಮ ಬಿಎಸ್ಎಫ್ನ ಯೋಧ ಸೇರಿದಂತೆ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಶನಿವಾರ ಭೇಟಿ ನೀಡಲಿದ್ದು, ಕಳೆದ ಮೂರು ದಿನಗಳಿಂದ ಪಾಕ್ ಸೇನೆ ಅಂತರರಾಷ್ಟ್ರೀಯ ಗಡಿರೇಖೆ ಬಳಿ ಶೆಲ್ ದಾಳಿ ನಡೆಸುತ್ತಿದೆ.
ಆರ್.ಎಸ್.ಪುರ, ಬಿಷ್ನಾ ಮತ್ತು ಅರ್ನಿಯಾ ಸೆಕ್ಟರ್ ಬಳಿ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಶೆಲ್ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದೆ. ಪಾಕಿಸ್ತಾನ ಪುಂಡಾಟಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದೆ ಎನ್ನಲಾಗಿದೆ.