‘ಕೃಷ್ಣ ತುಳಸಿ’ಯಂತಹ ಮನಮಿಡಿಯುವ ಸಿನಿಮಾದಲ್ಲಿ ಭಾವನಾಜೀವಿಗಳ ಕಣ್ಣಂಚು ಒದ್ದೆಯಾಗುವಂತೆ ನಟಿಸಿದ್ದ ಕಲಾವಿದೆ ಮೇಘಶ್ರೀ ಈಗ ‘ವಾರ್ಡ್ ನಂಬರ್ 11’ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.
‘ಇವಳು ಸುಜಾತ’ ಧಾರಾವಾಹಿ ಮೂಲಕ ತನ್ನ ಅಭಿಮಾನಿ ಬಳಗವನ್ನು ಹಿಗ್ಗಿಸಿಕೊಂಡಿರುವ ಮೇಘಶ್ರೀ ಈಗ ಏಕಕಾಲಕ್ಕೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
‘ಇವಳು ಸುಜಾತ ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಧಾರಾವಾಹಿಯ ಕತೆಯ ಬಗ್ಗೆ ತುಂಬ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅತ್ತೆ– ಸೊಸೆಯರ ನಡುವಿನ ಜಗಳ ತೋರಿಸುವ ಮಾಮೂಲಿ ಧಾರಾವಾಹಿ ಇದಲ್ಲ. ವಿಭಿನ್ನ ಕಥೆ ಹೊಂದಿರುವ ಭಿನ್ನ ಸೀರಿಯಲ್. ಧಾರಾವಾಹಿಯ ಕಥಾನಾಯಕಿ ಸುಜಾತ ಗಂಡ ಇಲ್ಲದಿದ್ದರೂ ಕೂಡ ಆತ್ಮ ಗೌರವ ಕಾಪಾಡಿಕೊಂಡು, ಹೇಗೆ ಖುಷಿಯಿಂದ ತನ್ನ ಜೀವನವನ್ನು ಮುನ್ನಡೆಸುತ್ತಾಳೆ ಎಂಬುದನ್ನು ಇಲ್ಲಿ ತುಂಬ ಚೆನ್ನಾಗಿ ತೋರಿಸಲಾಗಿದೆ. ಸುಜಾತ ಪಾತ್ರವನ್ನು ಎಲ್ಲ ಹೆಣ್ಣುಮಕ್ಕಳು ತುಂಬ ಇಷ್ಟಪಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ತಾಳ್ಮೆ ತುಂಬ ಮುಖ್ಯ. ಅದನ್ನು ಈ ಪಾತ್ರದ ಮೂಲಕ ತೋರಿಸಲಾಗಿದೆ’ ಎನ್ನುತ್ತಾರೆ ನಟಿ ಮೇಘಶ್ರೀ.
ಸಿನಿಮಾ ಮತ್ತು ಧಾರಾವಾಹಿ ಈ ಎರಡೂ ಕ್ಷೇತ್ರದಲ್ಲೂ ಏಕಕಾಲಕ್ಕೆ ತೊಡಗಿಸಿಕೊಳ್ಳಲು ಎದುರಾಗುವ ಸವಾಲುಗಳ ಬಗ್ಗೆ ಮೇಘಶ್ರೀ ಹೇಳಿದ್ದು ಹೀಗೆ:
‘ಒಬ್ಬಕಲಾವಿದೆ ಎರಡೆರೆಡು ಕಡೆ ಕಾಣಿಸಿಕೊಳ್ಳುವುದು ನಿಜಕ್ಕೂ ಸವಾಲಿನ ವಿಚಾರವೇ ಸರಿ. ಇಂತಹ ಸನ್ನಿವೇಶದಲ್ಲಿ ಸಮಯ ಹೊಂದಾಣಿಕೆಗಿಂತಲೂ ಡೇಟ್ಸ್ ಹೊಂದಿಸಿಕೊಳ್ಳುವುದು ತುಂಬ ಕಷ್ಟ. ಧಾರಾವಾಹಿಯ ಚಿತ್ರೀಕರಣ ಅಂದಾಗ ವಾರಪೂರ್ತಿ ತೊಡಗಿಸಿಕೊಳ್ಳಬೇಕು. ಅದರ ಜತೆಗೆ ಸಿನಿಮಾ ಒಪ್ಪಿಕೊಂಡಾಗ ಡೇಟ್ಸ್ ಹೊಂದಿಸುವುದು ಕಷ್ಟ. ಅದು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ’.
ಶ್ರೀಕಾಂತ್ ಅವರು ‘ವಾರ್ಡ್ ನಂಬರ್ 11’ ಚಿತ್ರದ ನಿರ್ದೇಶಕರು. ಸ್ವತಂತ್ರ ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ ಆದರೂ ಕೂಡ, ಈ ಹಿಂದೆ ಅವರು ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಂದೀಪ್ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ. ರಕ್ಷಿ ಚಿತ್ರದ ನಾಯಕನಟ. ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ ಮೂರನೇ ವಾರದಿಂದ ಆರಂಭಗೊಳ್ಳಲಿದೆಯಂತೆ.
ಈಚೆಗಷ್ಟೇ ರವಿಚಂದ್ರನ್ ಅಭಿನಯದ ‘ದಶರಥ’ ಸಿನಿಮಾದಲ್ಲಿ ನಟಿಸಿದ್ದ ಮೇಘಶ್ರೀ ಈಗ ಮತ್ತೊಬ್ಬ ಹಿರಿಯ ಕಲಾವಿದ ರಾಘವೇಂದ್ರ ರಾಜ್ಕುಮಾರ್ ಅವರ ಜತೆಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.
‘ವಾರ್ಡ್ ನಂಬರ್ 11 ಹೊಸ ತಂಡದ ಸಿನಿಮಾ. ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರೂ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಾನು ಕಾಲೇಜು ವಿದ್ಯಾರ್ಥಿನಿಯ ಪಾತ್ರ ನಿರ್ವಹಿಸಿದ್ದೇನೆ. ಚಿತ್ರಕ್ಕೆ ನನ್ನ ಪಾತ್ರದಿಂದಲೇ ಒಂದು ಟ್ವಿಸ್ಟ್ ಸಿಗುತ್ತದೆ. ನಟನೆಗೆ ತುಂಬ ಅವಕಾಶ ಇರುವಂತಹ ಪಾತ್ರ ಇದು’ ಎನ್ನುತ್ತಾರೆ ಮೇಘಶ್ರೀ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.