ಮಂಗಳೂರು: ಕನ್ನಡ, ತುಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರುವಾಸಿಯಾಗಿದ್ದ ದಿ. ಆರೂರು ಪಟ್ಟಾಭಿ ಅವರ ಪತ್ನಿ, ಖ್ಯಾತ ಗಾಯಕಿ ಆರೂರು ಸರೋಜಿನಿ ಪಟ್ಟಾಭಿ (95) ಅವರು ಚೆನ್ನೈನ ಮಂದವಳ್ಳಿಯ ಸ್ವಗೃಹದಲ್ಲಿ ನಿಧನರಾದರು.
ವಿವಾಹ ಪೂರ್ವದಲ್ಲಿ ‘ಜಿನ್ನಿ’ ಎಂದೇ ಖ್ಯಾತರಾಗಿದ್ದ ಅವರು, ತುಳು ಹಾಗೂ ಕನ್ನಡ ಚಿತ್ರಗೀತೆಗಳಿಗೆ ಹಾಡುಗಳನ್ನು ಹಾಡಿದ್ದರು.
ಕನ್ನಡ ಚಿತ್ರದಲ್ಲಿನ ‘ಕುಂತ್ರೆ ನಿಂತ್ರೆ ಅವಂದೆ ಧ್ಯಾನ’ ಹಾಡಿನ ಮೂಲಕ ಮನೆ ಮಾತಾಗಿದ್ದರು. ಪ್ರಸಿದ್ಧ ನೃತ್ಯಗಾರ್ತಿ ವೈಜಯಂತಿ ಮಾಲಾ ಬಳಗದಲ್ಲಿ ನಟುವಾಂಗ ಕಲಾವಿದೆಯಾಗಿ ವಿಶ್ವದಾದ್ಯಂತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ‘ನೈಟಿಂಗೇಲ್’ ಎಂದು ಕರೆಸಿಕೊಂಡಿದ್ದರು.
ತಮ್ಮ ಕೊನೆಯ ದಿನಗಳವರೆಗೂ ಮನೆಯಲ್ಲೇ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆಗಳ ಪಾಠ ನೀಡುತ್ತಿದ್ದರು.