ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ, ಭ್ರೂಣಹತ್ಯೆ ವಿರುದ್ಧ ಹೋರಾಟ

ಬಂಧು ಮುಕ್ತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಅಗ್ನಿವೇಶ
Last Updated 18 ಏಪ್ರಿಲ್ 2018, 7:51 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ವ್ಯಾಪವಾಗಿ ನಡೆಯುತ್ತಿರುವ ಅತ್ಯಾಚಾರ, ಭ್ರೂಣಹತ್ಯೆಗಳನ್ನು ತಡೆಗಟ್ಟಲು ಬಸವಣ್ಣನವರ ವಚನ ಸಂದೇಶದ ಮೂಲಕ ಹೋರಾಟ ಮಾಡೋಣ’ ಎಂದು ನವದೆಹಲಿಯ ಬಂಧುಮುಕ್ತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಅಗ್ನಿವೇಶ ಹೇಳಿದರು.

ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಜಗತ್ ವೃತ್ತದ ಬಸವವೇಶ್ವರ ಪುತ್ಥಳಿ ಬಳಿ ಮಂಗಳವಾರ ಆಯೋಜಿಸಿದ್ದ ಬಸವಣ್ಣನವರ 885ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದೇ ಒಂದು ಭ್ರೂಣಹತ್ಯೆ ನಡೆ ಯದಂತೆ ಆಂದೋಲನ ಕೈಗೊಳ್ಳೋಣ. ಅದೇ ರೀತಿ ಹಿಂದೂ–ಮುಸ್ಲಿಂ ಮಧ್ಯೆ ಭೇದ ಭಾವ, ಜಾತೀಯತೆ, ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಹೋರಾಡುವ ಅವಶ್ಯವಿದೆ’ ಎಂದರು.

‘ಕಠುವಾದಲ್ಲಿ ಆಸೀಫಾಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವುದು ಖಂಡನೀಯ. ಹಿಂದೂ ಎಂದು ಹೇಳಿಕೊಂಡವರು ಹೇಯ ಕೃತ್ಯ ಎಸಗಿದ್ದಾರೆ. ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಮಹಿಳೆಯರಿಗೆ ಸಮಾನ ಅವಕಾಶ, ಗೌರವ ಕೊಟ್ಟಿದ್ದರು. ಹೀಗಾಗಿ ಬಸವಣ್ಣನವರ ವಚನಗಳ ಸಾರವನ್ನು ದೇಶದಾದ್ಯಂತ ಪ್ರಚುರಪಡಿಸುವ ಅಗತ್ಯವಿದೆ’ ಎಂದರು.

‘ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಬಳಿ ನಿಯೋಗ ಹೋಗೋಣ. ಮದ್ಯಪಾನ ನಿಷೇಧಿಸುವಂತೆ ಒತ್ತಡ ಹೇರೋಣ. ಇದಾದ ಬಳಿಕ ದೇಶದಾದ್ಯಂತ ಮದ್ಯಪಾನ, ಮಾಂಸಾಹಾರ ನಿಷೇಧಿಸುವಂತೆ ಹೋರಾಟ ಮಾಡೋಣ. ಪ್ರಾಣಿ, ಪಕ್ಷಿಗಳು ಕೂಡ ಬದುಕಬೇಕು. ಹೀಗಾಗಿ ಶಾಖಾಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಬಸವಣ್ಣ ಜಾತೀಯತೆ, ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದ. ಕರ್ನಾಟಕ ಅಷ್ಟೇ ಅಲ್ಲ, ಇಡೀ ಮನುಕುಲದ ಒಳಿತಿಗಾಗಿ ಹೋರಾಡಿದ ಮಹಾನ್ ನಾಯಕ. ಆದ್ದರಿಂದ ಆತನ ತತ್ವ, ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು’ ಎಂದರು.

ನವದೆಹಲಿಯ ಬಸವ ಧರ್ಮ ಪೀಠದ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಜಯಂತಿ ಉತ್ಸವ ಸಮಿತಿ ಗೌರವ ಅಧ್ಯಕ್ಷೆ ವಿಲಾಸವತಿ ಖೂಬಾ, ಕಾರ್ಯಾಧ್ಯಕ್ಷ ಆರ್.ಜಿ.ಶೆಟಗಾರ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ, ಸಿಖ್ ಸಮುದಾಯದ ಮುಖಂಡ ಗುರುಮಿತಸಿಂಗ್ ಸಲುಜಾ, ಅಂಬಾರಾಯ ಹೋಳ್ಕರ್, ಶರಣಬಸಪ್ಪ ಭೂಸನೂರ ಇದ್ದರು.

ಅಗ್ನಿ ಮತ್ತು ಮಳೆ

ಸ್ವಾಮಿ ಅಗ್ನಿವೇಶ ಅವರು ಮಾತು ಆರಂಭಿಸುತ್ತಿದ್ದಂತೆಯೇ ಮಳೆ ಆರಂಭವಾಯಿತು. ಜನರು ಮನೆಯತ್ತ ಹೆಜ್ಜೆ ಹಾಕಲು ಆರಂಭಿಸಿದರು. ಆಗ ಅಗ್ನಿವೇಶ, ‘ನಾನು ಅಗ್ನಿ, ಅದಕ್ಕೆ ಮಳೆ ಬಂದಿದೆ. ಅಗ್ನಿಯ ಮಾತುಗಳಿಗೆ ಮಳೆ ತಂಪೆರೆಯುತ್ತಿದೆ’ ಎಂದಾಗ ಎಲ್ಲರೂ ನಗುತ್ತ ತಮ್ಮ ಆಸನಗಳತ್ತ ಮರಳಿದರು. ಆಗ ಮಳೆ ನಿಂತಿತು!

**

ರಾಜ್ಯದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಯಾವೊಂದು ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು – ಸ್ವಾಮಿ ಅಗ್ನಿವೇಶ, ರಾಷ್ಟ್ರೀಯ ಅಧ್ಯಕ್ಷ, ನವದೆಹಲಿಯ ಬಂಧು ಮುಕ್ತಿ ಮೋರ್ಚಾ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT