ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮುಖಿ ರಂಗಕರ್ಮಿಯ ಬದುಕಿನ ಹಿನ್ನೋಟ: ಗುಬ್ಬಿಯ ಅಜೇಯ ಶತಕ

Last Updated 28 ಆಗಸ್ಟ್ 2022, 2:28 IST
ಅಕ್ಷರ ಗಾತ್ರ

ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರಿಗೀಗ ಬರೋಬ್ಬರಿ ನೂರರ ತುಂಬು ಹರೆಯ. ಪರದೆ ಎಳೆಯುವ ರಂಗಕಾರ್ಮಿಕನಾಗಿ, ನಟನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ನಾಟಕಕಾರನಾಗಿ, ಚಲನಶೀಲ ರಂಗೇತಿಹಾಸಕಾರನಾಗಿ ಹೀಗೆ ಬಹುಮುಖಿ ರಂಗಕರ್ಮಿಯ ಎಂಟು ದಶಕಗಳನ್ನು ಹಾಳತವಾಗಿ ಬಾಳಿದವರು. ಅವರ ಬದುಕಿನ ಒಂದು ಹಿನ್ನೋಟ...

**

ನಮ್ಮ ನಡುವಿನ ಮಹತ್ವದ ರಂಗಕರ್ಮಿ ಗುಬ್ಬಿ ಚನ್ನಬಸಯ್ಯ ಮೊನ್ನೆಯ ಮೇ ಆರನೇ ತಾರೀಖಿನಂದು ಬರೋಬ್ಬರಿ ನೂರರ ಪ್ರಾಯದಲ್ಲಿ ಕಾಲಿಟ್ಟರು. ಅವರ ಹುಟ್ಟೂರು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ (ಜನನ: 06.05.1923) ಒಡೆಯರ ಮತಿಘಟ್ಟ. ಚನ್ನಬಸಯ್ಯ ಕಳೆದ ಎಂಬತ್ತು ವರುಷಗಳಿಂದ ಕನ್ನಡ ರಂಗಭೂಮಿಯ ಮೌಲ್ಯಗಳನ್ನು ಬಿತ್ತಿ ಬೆಳೆದವರು. ವೃತ್ತಿರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಬೋಸ್, ಹೊಸಮನಿ ಸಿದ್ದಪ್ಪ (ಸುಭಾಷ್‌ಚಂದ್ರ ಬೋಸ್ ಒಡನಾಡಿ) ಅವರ ಬದುಕು ಸಾಧನೆಗಳ ಮೇಲೆ ನಿಚ್ಚಳ ಬೆಳಕು ಚೆಲ್ಲುವ ಮಹತ್ವದ ನಾಟಕಗಳನ್ನು ಕನ್ನಡ ರಂಗಭೂಮಿಗೆ ತಂದವರು. ಸ್ವಾತಂತ್ರ್ಯದ ರಂಗಸಂಸ್ಕೃತಿ ಪರಂಪರೆ ಮೆರೆದವರು.

ದೂರದ ದೆಹಲಿ, ಕೊಲ್ಕತ್ತಾ ಮಹಾನಗರಗಳಿಗೆ ಒಂಬತ್ತು ವರ್ಷಗಳ ಕಾಲ ಓಡಾಡಿ, ವಾರಗಟ್ಟಲೇ ವಾಸ್ತವ್ಯ ಹೂಡಿದ್ದರು. ಸುಭಾಷ್‌ಚಂದ್ರ ಬೋಸ್ ಅವರ ಮೊಮ್ಮಗ ಶಿಶಿರಚಂದ್ರ ಬೋಸ್ ಅವರೊಂದಿಗೆ ಸುದೀರ್ಘ ಕಾಲ ಒಡನಾಡಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಸುಭಾಷ್‌ಚಂದ್ರ ಬೋಸ್ ಕುರಿತು ಚಿಂತನಾರ್ಹ ನಾಟಕ ರೂಪಿಸಿದರು. ಅದಕ್ಕಾಗಿ ಸುಭಾಷ್ ಚಂದ್ರ ಬೋಸ್ ಅನುಯಾಯಿಗಳಾದ ಡಿ.ಬಿ. ಕಲ್ಮಣಕರ್ ಅವರ ನೆರವು ಪಡೆದರು. ಈ ನಾಟಕವನ್ನು ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದರು. ಹಾಗೆಯೇ ಕರ್ನಾಟಕದ ಹೊಸಮನಿ ಸಿದ್ದಪ್ಪ ಕುರಿತು ನಾಟಕ ಬರೆದರು. ಈ ಎರಡೂ ನಾಟಕಗಳು ಅನೇಕ ಕಡೆ ಪ್ರದರ್ಶನ ಕಂಡಿವೆ. ಖುದ್ದಾಗಿ ಚನ್ನಬಸಯ್ಯ ಪಾತ್ರ ಮಾಡಿದ್ದಾರೆ.

ಸೌಭಾಗ್ಯಲಕ್ಷ್ಮಿ, ಬಾಲಚಂದ್ರ, ಕಡಕೋಳ ಮಡಿವಾಳಪ್ಪ, ಪುತ್ಥಳಿಯಂತಹ ಅಪರೂಪದ ನೂರೈವತ್ತಕ್ಕೂ ಅಧಿಕ ನಾಟಕಗಳ ನೂರಾರು ಪಾತ್ರಗಳಲ್ಲಿ ಅಭಿನಯಿಸಿದವರು ಗುಬ್ಬಿ. ಸಹಸ್ರಾರು ಪ್ರದರ್ಶನಗಳ ಮೂಲಕ ಕನ್ನಡ ರಂಗಭೂಮಿಯ ಪರಂಪರೆಯನ್ನು ಸಮೃದ್ಧಗೊಳಿಸಿದವರು.

ಪರದೆ ಎಳೆಯುವ ರಂಗಕಾರ್ಮಿಕನಾಗಿ, ನಟನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ನಾಟಕಕಾರನಾಗಿ, ಚಲನಶೀಲ ರಂಗೇತಿಹಾಸಕಾರನಾಗಿ ಹೀಗೆ ಬಹುಮುಖಿ ರಂಗಕರ್ಮಿಯ ಎಂಟು ದಶಕಗಳನ್ನು ಹಾಳತವಾಗಿ ಬಾಳಿದವರು. ಇನ್ನೂ ಇಂತಹ ಹತ್ತಾರು ಮಹತ್ತರ ರಂಗಭೂಮತ್ವದ ವ್ಯಕ್ತಿತ್ವವುಳ್ಳ ಗುಬ್ಬಿ ಚನ್ನಬಸಯ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿಗಳು ಇದುವರೆಗೆ ಬಾರದಿರುವುದೇ ಪರಮಾಶ್ಚರ್ಯ. ಅವರೇನು ಪ್ರಶಸ್ತಿಗಳಿಗಾಗಿ ಇಷ್ಟೆಲ್ಲ ರಂಗಸಾಧನೆ ಮಾಡಿದವರಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಹಿರಿಯ ರಂಗಚೇತನದ ಹೆಸರು, ರಂಗವ್ಯಕ್ತಿತ್ವದ ಪರಿಚಯ ಇಲ್ಲವೆಂದೇನಿಲ್ಲ. ಹಾಗಂತ ಇವರ ಹೆಸರು ರಾಜ್ಯೋತ್ಸವ ಮತ್ತು ಗುಬ್ಬಿ ವೀರಣ್ಣ ಪ್ರಶಸ್ತಿಗಳ ಆಯ್ಕೆ ಸಮಿತಿ ಗಮನ ಸೆಳೆದಿಲ್ಲವೆಂತಲೂ ಇಲ್ಲ. ಪ್ರತೀ ಬಾರಿಯೂ ಕಟ್ಟಕಡೇ ಗಳಿಗೆವರೆಗೂ ಇವರ ಹೆಸರು ಕೇಳಿಬಂದು ಪವಾಡ ಸದೃಶದಂತೆ ಅದೇ ಕಟ್ಟಕಡೇ ಕ್ಷಣದಲ್ಲಿ ಆಯ್ಕೆ ಸಮಿತಿಯ ಕಣ್ತಪ್ಪಿಸಿ ಮಾಯವಾಗಿ ಹೋಗುತ್ತದೆ. ಆದರೆ ಜನಮಾನಸ ನೀಡಿದ ಪ್ರಶಸ್ತಿಗಳ ಬಹುದೊಡ್ಡ ಪಟ್ಟಿಯೇ ಇದೆ.

ಚನ್ನಬಸಯ್ಯ ಗುಬ್ಬಿ, ತಮ್ಮ ಪರಿಚಯಕ್ಕೆ ಮುನ್ನವೇ ‘ನಾನು ಗುಬ್ಬಿ ವೀರಣ್ಣನವರ ಕುಟುಂಬಕ್ಕೆ ಸಂಬಂಧಿಸಿದವನಲ್ಲ’ ಎಂದು ವಿನೀತರಾಗೇ ಸ್ಪಷ್ಟಪಡಿಸುತ್ತಾರೆ. ಅದು ಅವರ ಮನೋಧರ್ಮವೇ ಆಗಿದೆ. ಅದು ಅವರ ಸ್ವಯಂ ಪರಿಚಯದ ಗಟ್ಟಿಧ್ವನಿಯ ವಾಡಿಕೆಯೇ ಆಗಿದೆ.

ಕೆಲವು ಮಂದಿ ಕಲಾವಿದರು ತಮ್ಮ ಪರಿಚಯವನ್ನು ಹೆಗ್ಗಳಿಕೆಯ ಧ್ವನಿಯಲ್ಲಿ ‘ತಾವು ಗುಬ್ಬಿ ವೀರಣ್ಣನವರ ಖಾಸಾ ಸಂಬಂಧಿಗಳೆಂಬಂತೆ’ ಅವರ ಮರಿ ಗಿರಿ ಮೊಮ್ಮಕ್ಕಳೆಂದು ತಲೆಮಾರುಗಳ ನಂಟಿನ ‘ಗಂಟುಹಾಕಿ’ ಹೇಳುವುದನ್ನು ಕೇಳಿದ್ದೇವೆ. ಎಷ್ಟೋಬಾರಿ ಅವರ ಮೂಲ ಕುಟುಂಬಸ್ಥರಿಗೇ ಅವು ಗೊತ್ತಿರದ ಮುಜುಗರದ ಸಂಬಂಧಗಳಾಗಿರುತ್ತವೆ.

ಅಂಥದಕ್ಕೆ ಅವಕಾಶವೇ ಬೇಡ ಎನ್ನುವುದಕ್ಕಾಗಿ ಚನ್ನಬಸಯ್ಯ ಗುಬ್ಬಿ ಅದನ್ನು ಕರಾರುವಾಕ್ಕಾಗಿ ಎಂಬಂತೆ ತಮ್ಮ ಹೆಸರಿನ ಪರಿಚಯದ ಆರಂಭಕ್ಕೇ ಅದನ್ನು ಹೇಳಿ ನಿರಾಳರಾಗುತ್ತಾರೆ. ಗುಬ್ಬಿ ವೀರಣ್ಣನವರ ಹೆಸರಿಗೆ ಮುಕ್ಕು ಬಾರದಿರುವ ಕಳಕಳಿ ಅವರದು. ಅಷ್ಟು ಮಾತ್ರವಲ್ಲ ಚನ್ನಬಸಯ್ಯ ಗುಬ್ಬಿ ಅವರಿಗೆ ನಾಟಕರತ್ನ ಗುಬ್ಬಿ ವೀರಣ್ಣನವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ.

ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರಿಗೀಗ ಬರೋಬ್ಬರಿ ನೂರರ ತುಂಬು ಹರೆಯ. ಕಳೆದ ಮೇ 6ರಂದು ತುಮಕೂರು ಮತ್ತು ಬೆಂಗಳೂರಿನ ಅಭಿಮಾನಿಗಳು ಚನ್ನಬಸಯ್ಯನವರ ನೂರನೇ ಜನ್ಮದಿನ ಖುಷಿಯಿಂದ ಆಚರಿಸಿದರು. ಅವರು ತಮ್ಮ ಐವತ್ತನೇ ವಯಸಿನಲ್ಲಿ ಅದೆಷ್ಟು ಗಟ್ಟಿಮುಟ್ಟಾಗಿದ್ದರೋ ಈಗಲೂ ಅಷ್ಟೇ ಸದೃಢಶಾಲಿ. ಶತಮಾನದ ಹೊಸ್ತಿಲಲ್ಲಿಯೂ ಅವರ ರಂಗೋಲ್ಲಾಸ, ಜೀವನೋತ್ಸಾಹ ಕಿಂಚಿತ್ತೂ ಕುಂದಿಲ್ಲ. ಅದು ಅಕ್ಷರಶಃ ಅಚ್ಚರಿ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಾವಣಗೆರೆಗೆ ಬಂದಿದ್ದರು. ಆಗ ಇಲ್ಲಿ ಮೊಕ್ಕಾಂ ಹೂಡಿದ್ದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕುಮಾರ ವಿಜಯ ನಾಟಕ ಕಂಪನಿಗೆ ಭೇಟಿ ಕೊಟ್ಟರು. ಚಿತ್ತರಗಿ ಕಂಪನಿ ಚನ್ನಬಸಯ್ಯರಿಗೆ ಗಟ್ಟಿ ಬದುಕು ಕಟ್ಟಿಕೊಟ್ಟ ಅವರ ಪಾಲಿನ ವಿಶ್ವವಿದ್ಯಾಲಯ. ಅಷ್ಟಕ್ಕೂ ಚಿತ್ತರಗಿ ಶಾಸ್ತ್ರಿಗಳ ಕಂಪನಿಗೆ ವೃತ್ತಿರಂಗಭೂಮಿ ಚರಿತ್ರೆಯಲ್ಲಿ ಮಹತ್ತರ ಸ್ಥಾನಮಾನ. ಗುಣಾತ್ಮಕ ರಂಗ ಪರಂಪರೆಗಳ ಮೇಲ್ಪಂಕ್ತಿ.

ಅಂದು ದಾವಣಗೆರೆಯಲ್ಲಿ ಚಿತ್ತರಗಿ ಕಂಪನಿಯ ಕಲಾವಿದರಿಗೆ ಚನ್ನಬಸಯ್ಯ ತಾವೇ ಖುದ್ದು ಶಾಲು ಹೊದಿಸಿ ಸನ್ಮಾನ ಮಾಡಿ, ಕೈಲಾದ ಕಾಣಿಕೆ ನೀಡಿ ಹದುಳ ಪ್ರೀತಿಯಿಂದ ಹಾರೈಸಿದರು. ಸೊಗಸಾಗಿ ಓಡಾಡಿ, ಮಾತಾಡಿ, ವೃತ್ತಿನಾಟಕ ಕಂಪನಿಗಳ ಶತಮಾನದ ರಂಗಸಂಸ್ಕೃತಿಯ ತಮ್ಮ ಅನುಭವ ಹಂಚಿಕೊಂಡ ರಂಗಚೈತನ್ಯ ಪರಮ ಬೆರಗಿನದು. ನೂರರ ಪ್ರಾಯದಲ್ಲೂ ಯಾರ ನೆರವಿಲ್ಲದೇ ದೂರದ ಊರುಗಳಿಗೆ ಅವರು ಸರ್ಕಾರಿ ಕೆಂಪು ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅವಕಾಶ ದೊರಕಿದರೆ ರಂಗಮಂಟಪದಲ್ಲಿ ಅಭಿನಯಿಸುವುದು, ಅಸ್ಖಲಿತವಾಗಿ ಸಂಭಾಷಣೆ ಹೇಳುವುದು... ಹೀಗೆ ಅವರ ಚುರುಕಿನ ರಂಗಚಟುವಟಿಕೆ ಸೋಜಿಗದ್ದು.

ಸಿದ್ರಾಮಯ್ಯ, ಲಕ್ಷ್ಮಿದೇವಮ್ಮ‌ ಇವರ ಅಪ್ಪ– ಅಮ್ಮ. ಬಾಲ್ಯದಲ್ಲಿಯೇ ಅಲೆಮಾರಿ ಬದುಕು. ಹತ್ತು ವರ್ಷದ ಬಾಲಕನಿದ್ದಾಗಲೇ ರೈಲು ಹತ್ತಿ ಹುಬ್ಬಳ್ಳಿಗೆ ಹೋಗಿ ಹೋಟೆಲೊಂದರಲ್ಲಿ ಚಹದ ಕಪ್ಪುಬಸಿ ತೊಳೆಯುವ ಕಾಯಕ.‌‌ ಆಗಲೇ ಅಲ್ಲಿ ಕ್ಯಾಂಪ್ ಮಾಡಿದ್ದ ಚಿತ್ತರಗಿ ನಾಟಕ ಮಂಡಳಿಯ ಮಾಲಿಕ ಗಂಗಾಧರ ಶಾಸ್ತ್ರಿಗಳ ಕಣ್ಣಿಗೆ ಬಿದ್ದ ಈ ಬಾಲಕ.

ಚಿಕ್ಕಹುಡುಗ ಚನ್ನಬಸಯ್ಯನ ಕ್ರಿಯಾಶೀಲತೆ ಶಾಸ್ತ್ರಿಗಳ ಅಂತಃಕರಣ ಸೆಳೆಯಿತು. ಅವನ ಸೂಕ್ಷ್ಮ ಸಂವೇದನೆ ಶಾಸ್ತ್ರಿಗಳ ಅಂತರಂಗದಲ್ಲಿ ಅದಮ್ಯವಾದ ಕಕ್ಕುಲತೆ ಹುಟ್ಟಿಸಿತು. ತಡಮಾಡದೇ ಹುಡುಗನ ಮೈದಡವಿ ಅವನಲ್ಲಿ ಮಾತೃತ್ವದ ಪ್ರೀತಿ ಹಂಚಿದರು. ‘ನಮ್ ಕಂಪ್ನಿಗೆ ಬರ್ತಿಯಾ’ ಅಂತ ಶಾಸ್ತ್ರಿಗಳು ಕೇಳುತ್ತಿದ್ದಂತೆ, ಒಂದೇ ಮಾತಿಗೆ ಬಾಲಕ ಚನ್ನಬಸಯ್ಯ ಹೋಟೆಲಿನಿಂದ ಸಿದ್ಧಗೊಂಡವರಂತೆ ಎದ್ದು ನಿಂತ. ಶಾಸ್ತ್ರಿಗಳ ತಾಯ್ತನದ ಪ್ರೀತಿ ಬಾಲಕನನ್ನು ನಾಟಕ ಕಂಪನಿಗೆ ಕರೆದೊಯ್ದಿತು. ಅಂದಿನಿಂದ ಇಂದಿನವರೆಗೂ ಶಾಸ್ತ್ರಿಗಳ ನಂತರವೂ ಅವರ ಕಂಪನಿ ಮೇಲಿನ ಮಮಕಾರ ತಾಯ್ತನದ ಪ್ರೀತಿಯ ನಂಟಿಗೆ ಧಕ್ಕೆ ಉಂಟಾಗಿಲ್ಲ.

ಗುಬ್ಬಿ ವೀರಣ್ಣನವರ ಸಮಕಾಲೀನರಾದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳಿಗೆ ವೀರಣ್ಣನವರ ಬಗ್ಗೆ ಎಲ್ಲಿಲ್ಲದ ಪ್ರೀತಿ. ಪ್ರೀತಿಯ ದ್ಯೋತಕವಾಗಿ ಅದೇ ಗುಬ್ಬಿ ತಾಲ್ಲೂಕಿನ ಚನ್ನಬಸಯ್ಯಗೆ ‘ಗುಬ್ಬಿ’ ಹೆಸರಿನಿಂದಲೇ ಕರೆಯುವುದು ಶಾಸ್ತ್ರಿಗಳಿಗೆ ರೂಢಿಯಾಗುತ್ತದೆ. ‘ಎಲೋ ಮಗಾ ಗುಬ್ಬಿ’ ಅಂತಲೇ ಕರೆದು ಕರೆದು ಇವರ ಹೆಸರು ಗುಬ್ಬಿ ಚನ್ನಬಸಯ್ಯ ಅಂತಾಗಿ ಬಿಟ್ಟಿದೆ. ಆ ಹೆಸರಿಗೀಗ ನೂರರ ಮಹಾಪ್ರಾಯ.

ಮಿಲಿಟರಿ ಶಿಸ್ತಿನ ಚಿತ್ತರಗಿ ಶಾಸ್ತ್ರಿಗಳ ರಂಗ ಗರಡಿಯಲ್ಲಿ ಚನ್ನಬಸಯ್ಯ ಶಿಸ್ತಿನ ರಂಗ ಸಿಪಾಯಿಯಾದರು. ಚಿತ್ತರಗಿ ಕಂಪನಿಯ ಹೆಸರಾಂತ ಬಾಲಚಂದ್ರ, ಸೌಭಾಗ್ಯಲಕ್ಷ್ಮಿ, ಜೀವನಯಾತ್ರೆ ಈ ಎಲ್ಲ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಚನ್ನಬಸಯ್ಯ ಪಳಗಿದರು. ಆ ಪಾತ್ರಗಳು ಅವರಿಗೆ ಹೆಸರು ತಂದವು. ಗಜಾನನ ಸಂಗೀತ ನಾಟಕ ಮಂಡಳಿಯಲ್ಲಿ ಕೆಲಕಾಲ ರಂಗಾನುಭವ. 1981ರಲ್ಲಿ ಅಮರೇಶ್ವರ ವಿಜಯ ನಾಟಕ ಸಂಘ, ಹೆಸರಿನ ಸ್ವಂತ ನಾಟಕ ಕಂಪನಿಯ ಸ್ಥಾಪನೆ. ತನ್ಮೂಲಕ ರಂಗ ಕೈಂಕರ್ಯ.

ಚನ್ನಬಸಯ್ಯರ ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಘಟಿಸಿದವು. ಒಂದಲ್ಲ ಎರಡು ಮದುವೆಗಳು. ಇಂತಹ ಕೆಲವು ಘಟನೆಗಳು ಅವರನ್ನು ಕೊಂಚ ಧೃತಿಗೆಡಿಸಿದವು. ಆದಾಗ್ಯೂ ತಮ್ಮೆಲ್ಲ ಸಂಕಟ, ಸಂತಸಗಳನ್ನು ರಂಗಭೂಮಿಯ ತೊಡಗಿಸಿಕೊಳ್ಳುವಿಕೆ ಮೂಲಕ ಬದುಕು ನಿಭಾಯಿಸಿಕೊಂಡು ನೂರರ ಪ್ರಾಯದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಈ ರಂಗಚೇತನ ಬದುಕಿರುವಾಗಲೇ ಬರಬೇಕಾದ ಪ್ರಶಸ್ತಿ ಗೌರವಗಳು ಅವರ ಮುಡಿಸೇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT