ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಪರಿವರ್ತನೆ...

Last Updated 18 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ರಂಗಭೂಮಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾಮಾಜಿಕ ಸಮಸ್ಯೆಗಳು, ಮಹಿಳೆಯರ ಮತ್ತು ಮಕ್ಕಳ ನೋವುಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡುತ್ತ ಹಿಂದುಳಿದ ಸಮುದಾಯ ಜಾಗೃತಿಗೊಳಿಸುತ್ತಿರುವ ಶೀಲಾ ಹಾಲ್ಕುರಿಕೆ ಕೊಪ್ಪಳ ಜಿಲ್ಲೆಯಲ್ಲಿ ತಮ್ಮದೇ ಮಾರ್ಗದ ಮೂಲಕ ಸಾಮಾಜಿಕ ಬದಲಾವಣೆಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ಸಮಾಜದಲ್ಲಿ ತನ್ನ ಸಕಾರಾತ್ಮಕ ಬದಲಾವಣೆಗಾಗಿ ’ಡೆಕ್ಕನ್‌ ಹೆರಾಲ್ಡ್‌’ನಿಂದ ’ಚೇಂಜ್‌ ಮೇಕರ್ಸ್‌ 2023’ ಗೌರವಕ್ಕೂ ಪಾತ್ರರಾಗಿದ್ದಾರೆ.

ಶೀಲಾ ಅವರ ಹೋರಾಟದ ಹಾದಿಯಲ್ಲಿ ಸಮುದಾಯಗಳು ಒಳಗೊಳ್ಳುವುದರಿಂದ ನೊಂದವರ ನೋವುಗಳು ಅನಾವರಣಗೊಳ್ಳುತ್ತಿವೆ. ನಾಟಕಗಳ ಮೂಲಕ ನಡೆಸಿದ ಜಾಗೃತಿ ಕಾರ್ಯಕ್ರಮಗಳು ಬಾಲ್ಯವಿವಾಹಗಳನ್ನು ತಡೆದಿವೆ. ಬೀದಿನಾಟಕಗಳು ಅಲೆಮಾರಿ ಸಮುದಾಯದ ಜನರಲ್ಲಿ ಅರಿವು ಮೂಡಿಸಿವೆ.

ಅವನತಿ ಅಂಚಿಗೆ ಸಾಗುತ್ತಿರುವ ರಂಗಭೂಮಿಯನ್ನು ಉಳಿಸುವುದು ಮತ್ತು ಇದೇ ಮಾರ್ಗ ಬಳಸಿಕೊಂಡು ಸಾಮಾಜಿಕ ಸಮಸ್ಯೆಗಳನ್ನು ದೂರ ಮಾಡುವುದು ಶೀಲಾ ಅವರ ಗುರಿ. ಅಲೆಮಾರಿ, ಬುಡಕಟ್ಟು ಸಮುದಾಯಗಳಾದ ದುರ್ಗಮುರಗಿ, ಸಿಂದೋಳಗಿ, ಶಿಳ್ಳೆಕ್ಯಾತ, ಮಲ್ಲ (ಪಾರ್ತ ಮಲ್ಲಯ್ಯ), ಸುಡುಗಾಡು ಸಿದ್ಧ, ಭಜಂತ್ರಿ, ವೇಷಗಾರರು, ಹಕ್ಕಿಪಿಕ್ಕಿ ಸಮುದಾಯದವರನ್ನು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿದ್ದಾರೆ. ಮಹಿಳೆಯರು ಮತ್ತು ನಿರ್ದಿಷ್ಟವಾಗಿ ಅಲೆಮಾರಿ ಮಹಿಳೆಯರು ದಿನನಿತ್ಯ ಎದುರಿಸುತ್ತಿರುವ ತಾರತಮ್ಯ ಪ್ರಶ್ನಿಸುವ ಧೈರ್ಯ ತುಂಬುತ್ತಿದ್ದಾರೆ.

ಅಲೆಮಾರಿ ಸಮುದಾಯಗಳಿಗೆ ಅವರ ಮೂಲ ಸಂಸ್ಕೃತಿ ಮತ್ತು ಆಚರಣೆಗಳೇ ಸಂಪತ್ತು. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ದೇವದಾಸಿ ಮತ್ತು ಅಲೆಮಾರಿಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಲು ಎಲ್ಲರಿಗೂ ಮರೆತೇ ಹೋಗಿರುವ ಗಂಗೆ ಗೌರಿ ಕಲಾ ಪ್ರಕಾರ ಬಳಸಿದ್ದು ವಿಶೇಷ. ಭಿಕ್ಷೆಗಾಗಿ ನುಡಿಸುತ್ತಿದ್ದ ವಾದ್ಯವನ್ನು ಅಂದು ಹಕ್ಕಿಗಾಗಿ ನುಡಿಸಿದ್ದರು.

ನೊಂದವರು, ದಮನಿತರು ಭರವಸೆಯಿಟ್ಟು ಸಮಸ್ಯೆ ಹೇಳಿದಾಗ ’ಶೀಲಕ್ಕ’ ಕಾಳಜಿ ತೋರಿದ್ದಾರೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಅವರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿದ್ದಾರೆ. ತಮ್ಮ ಕಾಲೊನಿ ಮಕ್ಕಳ ತಂಡ ಕಟ್ಟಿ ನಾಟಕ ಹಾಗೂ ಕಿರುನಾಟಕಗಳನ್ನು ಪ್ರದರ್ಶಿಸಿದ್ದಾರೆ.

ಒಂದೂವರೆ ದಶಕದ ಹಿಂದೆ ಶೀಲಾ ಸಮಾನ ಮನಸ್ಕರ ಸ್ವಯಂಸೇವಕರ ಜೊತೆ ‘ಸಹಜ ಕಲಾತಂಡ’ ಕಟ್ಟಿದರು. ಜಾತಿ ತಳಹದಿಯ ತಾರತಮ್ಯ, ಕಮರಿಹೋಗುವ ಮಹಿಳೆಯರ ಕನಸು, ಲೈಂಗಿಕ ಕಿರುಕುಳ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಮುಟ್ಟಿನ ನೈರ್ಮಲ್ಯದ ಅರಿವಿನ ಅಭಾವ, ಬಾಲ್ಯ ವಿವಾಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.

ನೋವುಗಳೇ ಪ್ರೇರಣೆ: ಶೀಲಾ ಅವರ ಸಾಮಾಜಿಕ ಹೋರಾಟದ ಹಿಂದೆ ನೋವಿನ ಕಥನಗಳಿವೆ. ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಕಷ್ಟ ಅವರನ್ನು ಗಟ್ಟಿಗೊಳಿಸಿದೆ. ಇವುಗಳನ್ನು ಯಾವ ಹಿಂಜರಿಕೆ ಇಲ್ಲದೇ ಹೇಳಿಕೊಳ್ಳುತ್ತಾರೆ. ವೈಯಕ್ತಿಕ ಜೀವನದ ಪಾಠಗಳು ನೋವುಂಡವರ ಮುಂದೆ ಶೀಲಾ ಅವರನ್ನು ’ಶಿಕ್ಷಕಿ’ಯಾಗಿ ಮಾಡಿವೆ.

ಕೊಡಗಿನ ಸುಂಟಿಕೊಪ್ಪದಲ್ಲಿ ತಮಿಳುನಾಡಿನ ಅಂತರ್ ಧರ್ಮೀಯ ಕೂಲಿ ಕಾರ್ಮಿಕ ದಂಪತಿಗೆ ಜನಿಸಿದ ಶೀಲಾ ಬಾಲ್ಯದಿಂದಲೂ ನಿಷ್ಠುರ ಮತ್ತು ಅಧ್ಯಯನಶೀಲರಾಗಿದ್ದರು. ತಮ್ಮ ತಂದೆಯ ಮದ್ಯದ ಚಟ ಮತ್ತು ನಿಂದನೆಯಿಂದಾಗಿ ತಾಯಿ ಬಳಲುತ್ತಿರುವುದನ್ನು ಸಾಕ್ಷಾತ್‌ ನೋಡಿದ್ದರು. ಇದೆಲ್ಲವನ್ನೂ ಸಹಿಸಿಕೊಂಡು ಮಹಿಳೆಯರು ಏಕೆ ಮೌನವಾಗಿ ನರಳಬೇಕು? ಗಟ್ಟಿ ಧ್ವನಿಯಲ್ಲಿ ಯಾಕೆ ವಿರೋಧಿಸಬಾರದು ಎನ್ನುವ ಮನೋಭಾವ ಬೆಳೆಸಿಕೊಂಡರು. ಬಾಲ್ಯದಲ್ಲಿ ಅವರನ್ನು ಕಾಡಿದ ಈ ಜಿಜ್ಞಾಸೆಯೇ ಸಾಹಿತ್ಯ ಮತ್ತು ರಂಗಭೂಮಿಗೆ ಕರೆತಂದಿತು. ಶೀಲಾ ಅವರ ನಾಟಕಗಳು ಜಾತಿ ತಾರತಮ್ಯ, ಕಿರುಕುಳ ಮತ್ತು ಸಾಮಾಜಿಕ ಅನಿಷ್ಟಗಳ ಬಗ್ಗೆ ಸಮಾಜಕ್ಕೆ ಕಠಿಣವಾದ ಸಂದೇಶ ನೀಡುತ್ತವೆ.

ಎಲ್ಲಿಯೂ ಅಸಭ್ಯತೆ ಬಳಸದೆ ಅಥವಾ ಮಹಿಳೆಯನ್ನು ಆಕ್ಷೇಪಿಸದೆ ನಾಟಕ ಪ್ರದರ್ಶನ ಮಾಡಬಹುದು. ಅಶ್ಲೀಲತೆ ನಾಟಕಗಳ ಜೀವಾಳವಲ್ಲ. ಅದು ರಂಗಭೂಮಿಯ ಭಾಗವೂ ಅಲ್ಲ ಎನ್ನುವ ಸಂದೇಶವನ್ನು ಶೀಲಾ ನೀಡುತ್ತಿದ್ದಾರೆ. ಅಲೆಮಾರಿ ಜನರನ್ನು ವೇದಿಕೆಯ ಮೇಲೆ ಕರೆತರುವ ಮೂಲಕ ಅವರ ಕಲೆಯನ್ನು ಪರಿಣಾಮಕಾರಿ ಮಾಧ್ಯಮ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಬಾಲ್ಯದಿಂದಲೇ ಕಷ್ಟದ ಹಾದಿಯಲ್ಲಿ ಸಾಗಿ ಬಂದ ಶೀಲಾ ಅವರಿಗೆ ನೀನಾಸಂಗೆ ಬಂದಾಗ ಬದುಕು ಬದಲಾಯಿತು. ಅಲ್ಲಿ ಸಿಕ್ಕ ಹೆಸರಾಂತ ನಾಟಕಕಾರ ಹಾಲ್ಕುರಿಕೆ ಶಿವಶಂಕರ್ ಬಾಳ ಸಂಗಾತಿಯಾದರು. ಶೀಲಾ ರಂಗಭೂಮಿ ಆಸಕ್ತಿಗೆ ಮತ್ತಷ್ಟು ಚೈತನ್ಯ ಸಿಕ್ಕಂತಾಯಿತು. ಜಟಿಲವಲ್ಲದ ದೇಹ ಭಾಷೆ, ಧ್ವನಿ ಮಾಡ್ಯುಲೇಶನ್ ಪ್ರಮುಖ ಪಾತ್ರಗಳನ್ನು ಗಳಿಸಲು ಸಹಾಯ ಮಾಡಿತು.

ಕೆ.ವಿ. ಅಕ್ಷರ ನಿರ್ದೇಶನದ ‘ಸಂಸಾರದಲ್ಲಿ ಸನಿದಪ’, ವಿಲಿಯಂ ಷೇಕ್ಸ್‌ಪಿಯರ್‌ ರಚನೆಯ 'ದ ಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌' ನಾಟಕದ ಕನ್ನಡ ರೂಪಾಂತರ 'ದಿ ಪ್ರಮೀಳಾರ್ಜುನೀಯಂ’, ಚಂದ್ರಶೇಖರ್‌ ಕಂಬಾರರು ಬರೆದ ‘ಸಿಂಗಾರೆವ್ವ ಮತ್ತು ಅರಮನೆ’, ಪಿ. ಲಂಕೇಶ ಅವರ ‘ದೇವೀರಿ’ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದು ಕಾಲದಲ್ಲಿ ಮನೆಮನೆ ಮಾತಾಗಿದ್ದ ವಠಾರ, ಕದನ, ವನಿತಾ ಧಾರವಾಹಿಗಳು ಖ್ಯಾತಿಯನ್ನು ತಂದುಕೊಟ್ಟಿವೆ.

ಅಲೆಮಾರಿ ಮಕ್ಕಳ ಜೊತೆ ಶೀಲಾ ಹಾಲ್ಕುರಿಕೆ
ಅಲೆಮಾರಿ ಮಕ್ಕಳ ಜೊತೆ ಶೀಲಾ ಹಾಲ್ಕುರಿಕೆ

ಬೆಂಗಳೂರಿನಲ್ಲಿ ಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಎನ್‌ಜಿಒಗಳಲ್ಲಿ ಮಾಡಿದ ಕೆಲಸ ಇದೇ ಕ್ಷೇತ್ರದ ಹೊಸ ಮಗ್ಗಲು ಪರಿಚಯಿಸಿತು. ನೊಂದ ಮಕ್ಕಳು ಮತ್ತು ಹೆತ್ತವರು ಈ ವೇದಿಕೆಯಲ್ಲಿ ತೋಡಿಕೊಳ್ಳುತ್ತಿದ್ದ ನೋವು, ಆಳವಾದ ಭಯ ಹಾಗೂ ಆತಂಕ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನೆರವಾಯಿತು. ಹವ್ಯಾಸಿ ಕಲಾವಿದರಿಗೆ, ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ನಾಟಕಗಳನ್ನು ಪ್ರದರ್ಶಿಸಲು ಶೀಲಾ ತರಬೇತಿ ನೀಡುತ್ತಿದ್ದಾರೆ. ಬೇರೆ ಕಡೆಯ ನಾಟಕಗಳನ್ನು ಗ್ರಾಮೀಣ ಭಾಗದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಜನಕೇಂದ್ರದ ವಕಾಲತ್ತು ಶೀಲಾ ಮೂಲ ಉದ್ದೇಶ. ಸೀಮಿತ ಆರ್ಥಿಕ ಸಂಪನ್ಮೂಲಗಳ ನಡುವೆಯೂ ಕಲಾವಿದರಿಗೆ ಅದರಲ್ಲೂ ಮಹಿಳೆಯರಿಗೆ 2014ರಿಂದ ‘ಸಹಜ ರಂಗಪುರಸ್ಕಾರ’ ಪ್ರಶಸ್ತಿ ನೀಡುತ್ತಿದ್ದಾರೆ.

ಮದ್ಯವ್ಯಸನಿ ಗಂಡಂದಿರಿಂದ ಹಣಕ್ಕಾಗಿ ಹಲ್ಲೆಗೆ ಈಡಾಗುವುದು, ಹೆಣ್ಣುಮಕ್ಕಳ ಓದಿಗೆ ಸೀಮಿತ ಅವಕಾಶಗಳಷ್ಟೇ ಇರುವುದು, ಕುಟುಂಬದಲ್ಲಿ ಲಿಂಗ ತಾರತಮ್ಯ ಮುಂದುವರೆದಿರುವುದು– ಇಂತಹ ಎಲ್ಲ ನೋವಿನ ಕಥೆಗಳಿಗೆ ಧ್ವನಿಯಾಗುವ ಶೀಲಾ ಹಾಲ್ಕುರಿಕೆ, ನೊಂದವರ ಕಣ್ಣೀರು ಒರೆಸುತ್ತಾರೆ. ಸಾಹಿತ್ಯ ಹಾಗೂ ರಂಗಭೂಮಿ ಮೂಲಕ ಶೀಲಾ ಸಾಮಾಜಿಕ ಸಮಸ್ಯೆಗಳಿಗೆ ಮುಲಾಮು ನೀಡುತ್ತಾರೆ. ‘ಈ ಬದಲಾವಣೆ ನಿಧಾನವಾಗಿಯಾದರೂ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಕೊಡುತ್ತದೆ. ಪರ್ಯಾಯ ಜೀವನ ತೋರಿಸದೆ ಜೀವನಕ್ಕಾಗಿ ಭಿಕ್ಷೆ ಬೇಡಬೇಡಿ ಎಂದು ನಾವು ಮಕ್ಕಳಿಗೆ ಹೇಳಲು ಸಾಧ್ಯವಿಲ್ಲ. ಅದು ಸರ್ಕಾರದ ಜವಾಬ್ದಾರಿ’ ಎಂದು ಶೀಲಾ ಹೇಳುತ್ತಾರೆ. ಸಂವಿಧಾನದ ಮೊದಲಪದ ’ನಾವು’ ಎನ್ನುವುದೇ ಬದುಕು ಎನ್ನುತ್ತಾರೆ.

ಹೀಗೆ ಒಂದೂವರೆ ದಶಕದಿಂದ ನಾಟಕಗಳ ಮೂಲಕ ಬದಲಾವಣೆ ಗಾಳಿ ಹರಡಲು ಪ್ರಯತ್ನಿಸುತ್ತಿರುವ ಶೀಲಾ ಕೊಪ್ಪಳದ ಕೊಳೆಗೇರಿ ಗಾಂಧಿನಗರದ ದೇವಸ್ಥಾನದ ಮುಂಭಾಗದಲ್ಲಿ ನಿಂತು ನೊಂದ ಮಹಿಳೆಯರ ಎದುರು ‘ಗಂಡಸರಿಗೆ ಒಂದು ರೀತಿ, ಹೆಂಗಸರಿಗೆ ಇನ್ನೊಂದು ದಾರಿ ಯಾಕೆ ಗೊತ್ತಾ?’ ಎನ್ನುವ ಹಾಡು ಹಾಡುತ್ತಿದ್ದರೆ ಸಮಾಜದಲ್ಲಿ ಬೇರುಬಿಟ್ಟ ಲಿಂಗ ಅಸಮಾನತೆ, ದೌರ್ಜನ್ಯ, ಕಿರುಕುಳ ಮತ್ತು ನಿಂದನೆ ಮುಖವಾಡಗಳು ಕಳಚುತ್ತಲೇ ಹೋಗುತ್ತವೆ. ‘ನಿರಂತರ ಪ್ರಯತ್ನವೊಂದೇ ಇದಕ್ಕೆ ಉತ್ತಮ ಮಾರ್ಗ’ ಎನ್ನುವ ಅವರ ಗಟ್ಟಿ ನಂಬಿಕೆ ಮತ್ತೆ ಮತ್ತೆ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT