ಇಂದೋರ್: ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅಮೋಘ ಸಾಮರ್ಥ್ಯ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದವರು ಹೋಳ್ಕರ್ ಕ್ರೀಡಾಂಗಣದಲ್ಲಿ ಜಯದ ತೋರಣ ಕಟ್ಟಿದರು.
ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ತಂಡದ ಬ್ಯಾಟಿಂಗ್ ಬಳಗವನ್ನು ಸುಲಭವಾಗಿ ಕಟ್ಟಿ ಹಾಕಿದ ಕೊಹ್ಲಿ ಬಳಗ 10 ವಿಕೆಟ್ಗಳ ಗೆಲುವು ಸಾಧಿಸಿತು.
89 ರನ್ಗಳ ಜಯದ ಗುರಿ ಬೆನ್ನತ್ತಿದ ತಂಡದ ನಾಯಕ ವಿರಾಟ್ ಕೊಹ್ಲಿ (48; 28 ಎ, 2 ಸಿ, 6 ಬೌಂ) ಮತ್ತು ಎಡಗೈ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ (40; 22 ಎ, 7 ಬೌಂ) ಅವರಿಗೆ ಎದುರಾಳಿ ಬೌಲರ್ಗಳು ಸಾಟಿಯಾಗಲೇ ಇಲ್ಲ. ಮೋಹಕ ಹೊಡೆತಗಳ ಮೂಲಕ ಇವರಿಬ್ಬರು 10 ಓವರ್ಗಳ ಒಳಗೆ ತಂಡಕ್ಕೆ ಗೆಲುವು ತಂದುಕೊಟ್ಟರು.
ಉಮೇಶ್ ಯಾದವ್ ಮಿಂಚಿನ ದಾಳಿ: ಪ್ಲೇ ಆಫ್ ಹಂತದ ಕನಸು ಜೀವಂತ ವಾಗಿರಿಸಿಕೊಳ್ಳಬೇಕಾದರೆ ಜಯ ಅನಿ ವಾರ್ಯವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಸ್ಫೋಟಕ ಬ್ಯಾಟ್ಸ್ಮನ್ಗಳಾದ ಕೆ.ಎಲ್.ರಾಹುಲ್ ಮತ್ತು ಕ್ರಿಸ್ ಗೇಲ್ ಜೋಡಿಯನ್ನು ಮೊದಲ ಓವರ್ನಲ್ಲೇ ಕಟ್ಟಿ ಹಾಕುವಲ್ಲಿ ಉಮೇಶ್ ಯಾದವ್ ಯಶಸ್ವಿಯಾದರು.
ಆದರೆ ಟಿಮ್ ಸೌಥಿ ಹಾಕಿದ ಎರಡನೇ ಓವರ್ನಿಂದ ಇವರಿಬ್ಬರು ಚೇತರಿಸಿಕೊಂಡರು. ಎರಡನೇ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗೆ ಎತ್ತಿದ ರಾಹುಲ್ ಮೂರನೇ ಓವರ್ನಲ್ಲಿ ಉಮೇಶ್ ಯಾದವ್ ಅವರನ್ನು ಕೂಡ ಗ್ಯಾಲರಿಗೆ ಅಟ್ಟಿದರು. ನಾಲ್ಕನೇ ಓವರ್ನಲ್ಲಿ ಗೇಲ್ ಮೂರು ಬೌಂಡರಿ ಸಿಡಿಸಿದರು.
ನಂತರ ಪಂದ್ಯ ಸಂಪೂರ್ಣವಾಗಿ ಆರ್ಸಿಬಿ ಕಡೆಗೆ ವಾಲಿತು. ಉಮೇಶ್ ಯಾದವ್ ಹಾಕಿದ ಐದನೇ ಓವರ್ನ ಮೂರನೇ ಎಸೆತದಲ್ಲಿ ರಾಹುಲ್ ಔಟಾ ದರು. ಕೊನೆಯ ಎಸೆತದಲ್ಲಿ ಗೇಲ್ ಕೂಡ ಮರಳಿದರು.
ಕರುಣ್ ನಾಯರ್ ಕೇವಲ ಒಂದು ರನ್ ಗಳಿಸಿ ವಾಪಸಾದರು. ಮಾರ್ಕಸ್ ಸ್ಟೋಯಿನಿಸ್, ಮಯಂಕ್ ಅಗರವಾಲ್, ನಾಯಕ ರವಿಚಂದ್ರನ್ ಅಶ್ವಿನ್ ಒಳಗೊಂಡಂತೆ ಯಾರಿಗೂ ಆರ್ಸಿಬಿ ಬೌಲರ್ಗಳಿಗೆ ಉತ್ತರ ನೀಡಲು ಆಗಲಿಲ್ಲ. ಅಂತಿಮ ಏಳು ಬ್ಯಾಟ್ಸ್ಮನ್ಗಳು ಸೇರಿದಂತೆ ಒಟ್ಟು ಎಂಟು ಮಂದಿ ಎರಡಂಕಿ ಮೊತ್ತ ದಾಟಲಾಗದೆ ಮರಳಿದರು. ಕೊನೆಯ ಏಳು ವಿಕೆಟ್ಗಳು 47 ರನ್ಗಳಿಗೆ ಉರುಳಿದವು.
ಫಿಂಚ್ ತಾಳ್ಮೆಯ ಆಟ: ನಾಲ್ಕನೇ ಕ್ರಮಾಂಕದ ಆಟಗಾರ ಆ್ಯರನ್ ಫಿಂಚ್ ತಾಳ್ಮೆಯಿಂದ ಆಡಿದರು. 23 ಎಸೆತಗಳಲ್ಲಿ ಅವರು 26 ರನ್ ಗಳಿಸಿದರು. ಆರನೇ ವಿಕೆಟ್ ರೂಪದಲ್ಲಿ ಫಿಂಚ್ ಔಟಾದ ನಂತರ 20 ಎಸೆತಗಳ ಅಂತರದಲ್ಲಿ 10 ರನ್ ಗಳಿಸಿ ಉಳಿದೆಲ್ಲ ಬ್ಯಾಟ್ಸ್ಮನ್ಗಳು ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.