ವಾಸ್ತವ ಮತ್ತು ಕಲ್ಪನೆಗಳನ್ನು ಬೆದಕುತ್ತಾ ಸಾಗುವ ಪಾತ್ರಗಳು ನಮ್ಮ ಇಂದಿನ ಸಾಮಾಜಿಕ ಮನೋಲೋಕದ ಪಯಣವನ್ನು ಈ ನಾಟಕ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಈ ಪಯಣದಲ್ಲಿ ಪಾತ್ರಗಳು ತಾವು ಕಂಡುಕೊಂಡ ಅಂತಿಮ ಸತ್ಯವನ್ನು ಪ್ರೇಕ್ಷಕರ ಮುಂದೆ ಇರಿಸುತ್ತವೆ. ವಿಲಕ್ಷಣ ಸಂಗತಿಗಳು ಎದುರಾಗಿ ಪಾತ್ರಗಳನ್ನು ಗೊಂದಲಕ್ಕೀಡು ಮಾಡಿ ತಮ್ಮ ಹುಳುಕನ್ನು ತಾವೇ ಬಹಿರಂಗಪಡಿಸಿಕೊಂಡು ಒದ್ದಾಡುವಂತೆ ಮಾಡುತ್ತವೆ. ಕಟ್ಟುವ ಮತ್ತು ಕೆಡವುವ ಪ್ರಕ್ರಿಯೆ ಸಾಂಕೇತಿಕವಾಗಿ ನಾಟಕದುದ್ದಕ್ಕೂ ನಡೆದು ಪಾತ್ರಗಳ ಮನಸ್ಸು ನುಚ್ಚು ನೂರಾಗುತ್ತದೆ. ಪಾತ್ರಗಳು ತಮ್ಮ ಮನದ ಚೂರುಗಳನ್ನು ಜೋಪಾನವಾಗಿ ಆರಿಸಿ ಮತ್ತೆ ತಮ್ಮ ಮನಸ್ಸನ್ನು ಅಸ್ತಿತ್ವವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ, ಅಂತರಾಳದ ಬೇಗುದಿಗೆ ಸುಂದರ ಚೌಕಟ್ಟನ್ನು ನಿರ್ಮಿಸುತ್ತದೆ.