ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದ ಸರಕಿನಾಗ ನೀತಿ ಸೋತಾಗ...

Last Updated 26 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ವರ್ತಮಾನದ ರಂಗಭೂಮಿ, ಸಿನೆಮಾ, ಕಿರುತೆರೆ, ಸಾಮಾಜಿಕ ಜಾಲತಾಣ ಹೀಗೆ ಬಹುಪಾಲು ದೃಶ್ಯಮಾಧ್ಯಮಗಳು ಹೊರಳು ಹಾದಿಯಲ್ಲಿವೆ. ಅವು ಸಾಂಸ್ಕೃತಿಕ ಸ್ವಾಯತ್ತತೆ ಕಳೆದುಕೊಳ್ಳುತ್ತಿವೆ. ದುರಂತವೆಂದರೆ ಅದನ್ನು ಅಭಿವ್ಯಕ್ತಿ ಮಾಧ್ಯಮದ ಕ್ರಾಂತಿಯಂತೆ ಬಿಂಬಿಸಲಾಗುತ್ತಿದೆ. ಜನಾಭಿರುಚಿ ಜಲಪಾತದಂತೆ ಜರ್ರನೆ ಜರಿದು ಪತನದ ಹಾದಿ ಹಿಡಿಯುವಲ್ಲಿ ಅವುಗಳ ಪಾತ್ರ ಹಿರಿದು. ಅದಕ್ಕಾಗೇ ಕೆಲವು ಮಾಧ್ಯಮಗಳು ಟೊಂಕಕಟ್ಟಿ ನಿತಾಂತ ನಿಂತಿರುವುದು ನಿಗೂಢವೇನಲ್ಲ.

ಒಂದು ಕಾಲದಲ್ಲಿ ಅವಿಭಜಿತ ಕುಟುಂಬ ಪ್ರೀತಿ, ಖರೇ ಖರೇ ದೇಶಭಕ್ತಿ, ಸಮಷ್ಟಿ ಗೌರವ, ರಸಾನುಭೂತಿ, ಅಂತಃಕರಣಗಳ ಭಾವಾಭಿವ್ಯಕ್ತಿಯಂತಿದ್ದ ಲೋಕಪ್ರಿಯ ನಾಟಕಗಳು ಹೃದಯಸ್ಪರ್ಶಿ ಸಂವೇದನೆಗಳನ್ನು ಕಳಕೊಂಡು ಸದಭಿರುಚಿ ಸಂಸ್ಕೃತಿಯಿಂದ ದೂರ ಸರಿದಿವೆ. ಅರ್ಥದ ಅಪಮೌಲ್ಯದಿಂದ ಅವುಗಳ ಆತ್ಮದ ಸ್ವರೂಪ ಸೊರಗಿ ಸುಣ್ಣವಾಗಿದೆ. ಅವಕ್ಕೆ ಅಸ್ಮಿತೆಯ ಸವಾಲು ಒಂದೆಡೆಯಾದರೆ, ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅವಲೋಕಿಸಿದಾಗ ಜಾಗತೀಕರಣದ ಘೋರ ಪರಿಣಾಮಗಳು ರಂಗಭೂಮಿಯನ್ನು ಧೃತಿಗೆಡಿಸಿರುವುದು ದೃಗ್ಗೋಚರ. ವಿದ್ಯುನ್ಮಾನ ಮಾಧ್ಯಮ ‘ಷೋ’ಗಳ ಜತೆಗಿನ ಪೈಪೋಟಿಗಿಳಿದು ಡಿಜಿಟಲ್‌ ತಲ್ಲಣದ ಸುಂಟರಗಾಳಿಗೆ ಸಿಲುಕಿವೆ.

ಆ ಕುರಿತು ಅಧ್ಯಯನಗಳ ಅಗತ್ಯವಿದೆ. ಇದುವರೆಗಿನ ಅಧ್ಯಯನಗಳು ವೃತ್ತಿರಂಗ ಪ್ರಕಾರ (form) ಕುರಿತಾದ ಚಾರಿತ್ರಿಕ ಅಂಶಗಳು, ಬಯೋಪಿಕ್ ಮಾದರಿಯ ಕಥನಗಳು ಮಾತ್ರ. ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಂವಾದಗಳು ಜರುಗಿಲ್ಲ. ವೃತ್ತಿ ರಂಗಭೂಮಿಯ ‘ಚೈತನ್ಯ’ ಗುರುತಿಸುವ ವೈಜ್ಞಾನಿಕ ಅಧ್ಯಯನ ಆಗಿಲ್ಲ. ನಾನಾ ಜ್ಞಾನಸಾರ ಶಿಸ್ತುಗಳ ಚಾಳೀಸು ಮೂಲಕ ನೋಡುವುದು ದುಸ್ತರದ ಮಾತೇ ಸರಿ. ವಿಶ್ವವಿದ್ಯಾಲಯಗಳ ಪಿ. ಎಚ್‌ಡಿ. ಪ್ರಬಂಧಗಳು ನೌಕರಿಗೆ ಮೀಸಲಾದ ಅವಾರ್ಡುಗಳಷ್ಟೇ.

ವೃತ್ತಿ ರಂಗನಾಟಕಗಳನ್ನು ಪ್ರಯೋಗ - ಪ್ರದರ್ಶನಗಳಿಗೆ ಮಿತಿಗೊಳಿಸಿ ಅವುಗಳ ಮಹತ್ವ ನಿರ್ಧರಿಸಲಾಗದು. ಅದರಾಚೆ ಅವುಗಳಿಗೆ ಸಾಮಾಜಿಕವಾದ ಬಹುದೊಡ್ಡ ಆಯಾಮಗಳಿವೆ. ಸಾಂಸ್ಕೃತಿಕ ಅಂತರ್ ಸಂಬಂಧಗಳಿವೆ. ಜನಸಾಮಾನ್ಯರ ಬದುಕಿನೊಳಗೆ ಹಾಸುಹೊಕ್ಕಾದ ಪ್ರಜಾಸತ್ತಾತ್ಮಕ ಬಾಹುಳ್ಯದ ಪ್ರೀತ್ಯಾದರಗಳಿವೆ. ಲೋಕಸಂಸ್ಕೃತಿಯ ದಟ್ಟಪ್ರಭಾವದ ಬೇರುಗಳಿವೆ. ಅಂತಹ ಅಸ್ಮಿತೆಯ ಹುಡುಕಾಟ, ಸಂಶೋಧನೆ ಅಗತ್ಯವಿದೆ.

ವಚನ ಚಳವಳಿ ಕಾಲದ ಬಹುರೂಪಿ ಚೌಡಯ್ಯನ ಕಾಯಕವೇ ಬಹುರೂಪದ ರಂಗವೃತ್ತಿ. ಆತ ಪ್ರಪಂಚದ ಪ್ರಪ್ರಥಮ ವೃತ್ತಿ ರಂಗಕರ್ಮಿ. ಇಂತಹ ಬಹುಳ ಪ್ರಜ್ಞೆಯ ಕಾಯಕ ಪ್ರಕಾರವನ್ನು ರಂಗೇತಿಹಾಸಕಾರರು ಪ್ರಧಾನ ಸಂಸ್ಕೃತಿ ಧಾರೆಗೆ ನೇರ್ಪುಗೊಳಿಸಲಿಲ್ಲ. ವಿಸ್ತೃತ ಚರ್ಚೆಗಳು ಜರುಗಲಿಲ್ಲ. ಅಷ್ಟೇ ಯಾಕೆ ಕನ್ನಡದ ಸಮಗ್ರ ರಂಗಸಂಸ್ಕೃತಿಯ ಅರಿವು, ಆಲೋಚನೆಗಳನ್ನು ಕಟ್ಟುವ ಗಂಭೀರ ಚಿಂತನೆಗಳು ಇದುವರೆಗೂ ನಡೆದಿಲ್ಲ.

ಅಚ್ಚರಿಯೆಂದರೆ ಮೀಮಾಂಸಕರು ಅಂಥದ್ದೊಂದು ಸಾಂಸ್ಕೃತಿಕ ಚಿಂತನೆಯನ್ನೇ ಸಂದೇಹಿಸಿದರು. ಇನ್ನೊಂದೆಡೆ ಪ್ರಯೋಗಶೀಲ, ವೈಚಾರಿಕ ನೆಲೆಗಟ್ಟಿನ ಹೊಸ ಅಲೆಯ ಬಹುಪಾಲು ನಾಟಕಗಳು (ಎಲೈಟ್ ಮಂದಿಯ ತಲಸ್ಪರ್ಶಿ ಥಿಯೇಟರ್) ಬೌದ್ಧಿಕ ತಂತ್ರಗಳ ಸಾಹಚರ್ಯದಲ್ಲಿ ಕಳೆದು ಹೋದವು. ಜನಮಾನಸಕ್ಕೆ ಮುಟ್ಟದಿರುವುದೇ ಪ್ರಸ್ತಾಪಿತ ಅಧ್ಯಯನಗಳ ಅಗತ್ಯಗಳನ್ನು ಒತ್ತಿ ಹೇಳುತ್ತದೆ. ಇಂತಹ ಹತ್ತು ಹಲವು ಅಪಸವ್ಯಗಳ ನಡುವೆಯೂ ವೃತ್ತಿರಂಗಭೂಮಿ ಬಗ್ಗೆ ಗ್ರಾಮೀಣ ಜನಸಾಮಾನ್ಯರು ಉತ್ಕಟ ಪ್ರೀತಿ, ಭರವಸೆ ಉಳಿಸಿಕೊಂಡಿದ್ದಾರೆ. ಆದರೆ ಅದೊಂದು ಕಲಾರಂಗ ಪ್ರಕಾರವಾಗಿ ಸಾಂಸ್ಕೃತಿಕ ಸ್ವಾಯತ್ತತೆ ಕಳೆದುಕೊಂಡಿದೆ. ಡೈಲ್ಯೂಟ್ ಆಗುತ್ತಿರುವ ಅದರ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುತ್ತಲಿದೆ.

ಬದಲಾದ ಕಾಲಘಟ್ಟದಲ್ಲಿ ವೃತ್ತಿರಂಗ ನಾಟಕಗಳ ಸ್ವರೂಪ, ವೃತ್ತಿಪರತೆ ಮತ್ತು ವೃತ್ತಿನಿರತೆ ಬದಲಾಗಿವೆ. ಈ ಬದಲಾವಣೆ ಸಾಂಸ್ಕೃತಿಕ ಸ್ಥಿತ್ಯಂತರವಲ್ಲ. ಬದಲಾಗಿ ಅದೊಂದು ಅಸ್ವಾಸ್ಥ್ಯ ಬೆಳವಣಿಗೆ. ಗಲ್ಲಾಪೆಟ್ಟಿಗೆ ಕೇಂದ್ರಿತ ಏಕ ಶಿಲಾಕೃತಿಯ ತೇಜೀ ಮಂದೀ ಪ್ರವಾಹದಾಟ. ಯಾವುದೇ ಕಲೆಗಳು ಕಮರ್ಷಿಯಲ್‌ ಆದಾಗ ಸಾಂಸ್ಕೃತಿಕ ಮಾಧುರ್ಯ, ಅಂತಃಸ್ಫುರಣದ ಸೃಜನಶೀಲತೆ ಕಳಕೊಳ್ಳುತ್ತವೆ.

ವೃತ್ತಿರಂಗ ನಟಿಯೊಬ್ಬಳು ನಿರ್ದೇಶಿಸಿ, ನಟಿಸಿದ ಅರಿಶಿಣಗೋಡಿಯವರ ‘ಬಸ್ ಕಂಡಕ್ಟರ್’ ಎಂಬ ಸಾಮಾಜಿಕ ಕಾಳಜಿಯ ಸುಂದರ ನಾಟಕವನ್ನು ಅವರು ತಮ್ಮ ಶಕ್ತಿಮೀರಿ ವಿಕೃತಗೊಳಿಸಿದ್ದಾರೆ. ಸಖೇದಾಶ್ಚರ್ಯ ಎಂದರೆ ಸ್ಟುಡಿಯೋವೊಂದು ಇದರ ಕ್ಯಾಸೆಟ್ ತಯಾರಿಸಿ ಯಥೇಚ್ಛ ಹಣ ಗಳಿಸಿದೆ. ಇಂತಹ ಹತ್ತಾರು ನಿದರ್ಶನಗಳಿವೆ.

ಲೋಕೋಪಯೋಗಿ ಸರಕಿನಂತೆ ಕ್ಯಾಸೆಟ್ಟುಗಳು ಹವ್ಯಾಸಿ ರಂಗಭೂಮಿಯ ಗ್ರಾಮೀಣರಿಗೆ ರೋಲ್ ಮಾಡೆಲ್. ಇಂತಹ ಹತ್ತಾರು ದುರ್ಚಾಳಿಯ ಮಾಡೆಲ್ಲುಗಳಿವೆ. ತನ್ಮೂಲಕ ಕವಿ ಮತ್ತು ರಂಗಸಂಸ್ಕೃತಿಗೆ ಅಪಚಾರ. ಈಗಲೂ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ವರ್ಷಕ್ಕೆ ಅಜಮಾಸು ಹದಿನೈದು ಸಾವಿರಕ್ಕೂ ಹೆಚ್ಚು ಇಂತಹ ರಂಗನಾಟಕಗಳ ಪ್ರದರ್ಶನ. ದುರಂತವೆಂದರೆ ಅದಕ್ಕಾಗಿ ಗ್ರಾಮೀಣ ಹವ್ಯಾಸಿ ಕಲಾವಿದರು ಸರ್ಕಾರದ ಕಿಲುಬು ಕಾಸಿಗೆ ಜೋತುಬೀಳದೇ ಸ್ವಂತ ಖರ್ಚಿನಲ್ಲೇ ಇಂತಹ ಸಡಗರ ಮೆರೆಯುತ್ತಾರೆ.

ಅಭಿನಯ, ರಂಗಸಂಗೀತ, ರಂಗಸಜ್ಜಿಕೆಯ ಪ್ರಮುಖ ಪರಂಪರೆಗೆ ಕೊಡಲಿಪೆಟ್ಟು. ಬದಲಿಗೆ ಚಲನಚಿತ್ರಗಳ ಅತಿರೇಕದ ಅನುಕರಣೆ. ಅಲ್ಲೆಲ್ಲೂ ಕಂದಪದ್ಯ, ರಂಗಗೀತೆಗಳ ಸುಳಿವಿಲ್ಲ. ಅಧಿಕಾರಿಗಳ ಕೆಂಗಣ್ಣಿನಿಂದಾಗಿ ಐಟಂ ನೃತ್ಯಗೀತೆಗಳಿಲ್ಲವಷ್ಟೇ. ಆ ಕೆಲಸ ಸುಲಭದಲ್ಲೇ ಹಾಸ್ಯನಟಿಯೋ, ಇಲ್ಲವೆ ಹೀರೋಯಿನ್ ಅನಾಯಾಸ ನಿಭಾಯಿಸುತ್ತಾರೆ. ಇಂತಹ ಅನೇಕಾನೇಕ ಸವಾಲುಗಳ ನಡುವೆಯೂ ಗದುಗಿನ ಗವಾಯಿಗಳ ಕಂಪನಿ, ಒಂದೆರಡು ಕಂಪನಿಗಳು ಪರಂಪರೆಯ ದ್ಯೋತಕವಾಗಿವೆ. ಕೆಲವು ಜಾತ್ರೆಗಳ ಕ್ಯಾಂಪುಗಳಲ್ಲಿ ನಾಟಕ ಕಂಪನಿಗಳು ಪರಾಧೀನ. ಅಲ್ಲೆಲ್ಲ ಖಾಸಗಿ ಕಲ್ಚರಲ್ ಮಾಫಿಯಾಗಳದ್ದೇ ಕಪಿಮುಷ್ಟಿ. ಇದರಿಂದ ಕಂಪನಿಗಳಿಗೆ ತೀವ್ರ ಹಿನ್ನಡೆ. ಮುಖ್ಯವಾಗಿ ಕಲಾವಿದರ ಹೊಟ್ಟೆಪಾಡಿನ ಪ್ರಶ್ನೆ. ಹೀಗಿರುವಾಗ ಸಾಂಸ್ಕೃತಿಕ ಸ್ವಾಯತ್ತತೆ ಸಾಧ್ಯವೇ.? ಹೊಸ ಅಲೆಯ ಪ್ರಯೋಗಶೀಲ ರಂಗಭೂಮಿ, ಕಿರುತೆರೆ, ಸಿನೆಮಾಗಳು ಸಹಿತ ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಳ್ಳಲಾಗಿಲ್ಲ.

ಇತ್ತೀಚೆಗೆ ಮೇಲುಗೈ ಸ್ಥಾಪಿಸುತ್ತಿರುವ ಕಿರುತೆರೆಯ ಕೆಲವು ಕಾಮೆಡಿ ಶೋಗಳದು ಇಂಥದೇ ಮಲಿನ ಮಾತುಕತೆ. ಕಾಮಿಡಿ ಷೋಗಳ ಒಂದೆರಡು ಸ್ಯಾಂಪಲ್ ಆನುಷಂಗಿಕವಾಗಿ ಓದಲೇಬೇಕು:

‘ನಿಮ್ಮಣ್ಣ ನಿನಗ ಖರ್ಚಿಗೆ ಹಣ ಕೊಡ್ಲಿಲ್ಲಂತ, ನೀನು ಅವನ ಒಂದ್ ಕೈ ಕಟ್ ಮಾಡಿದಿ. ಅಕಸ್ಮಾತ್ತಾಗಿ ನಿಮ್ಮಣ್ಣಗ ಮಕ್ಕಳಾಗದಿದ್ರ ಏನ್ ಕಟ್ ಮಾಡ್ತಿದ್ದಿ....’

‘ಜಗ್ಗಣ್ಣ ಒಂದ್ ವಿಷಯ ಗೊತ್ತಾ.? ಮದುವಿಗಿಂತ ಮೊದ್ಲು ನನ್ ಬಂದೂಕು ಹೀಂಗ ನೆಟ್ಟಗ ನಿಂತ್ಕೊತಿತ್ತು ಅಂತ ಮುಷ್ಟಿ ಮಾಡಿದ ಮೊಳದುದ್ದ ಕೈ ನೆಟ್ಟಗೆ ನಿಲ್ಲಿಸಿ, ಮದುವಿ ಆದಮ್ಯಾಲ ನನ್ನ ಬಂದೂಕ ಠುಸ್ಸಂತ ಮಲಗಿತು’ ಎಂದು ನೆಟ್ಟಗಿನ ಮುಷ್ಟಿ ಕೆಳಗಿಳಿಸುತ್ತಾನೆ ಆ ಕಲಾವಿದ.
ಸದ್ಯ ಇವೆರಡೇ ಉದಾಹರಣೆ ಸಾಕು.

ನಾಟಕಕಾರನ ರಂಗಕೃತಿಯ ಮೂಲ ಆಶಯಗಳೆಲ್ಲ ಮಣ್ಣುಪಾಲಾಗುತ್ತಿವೆ. ಔಚಿತ್ಯವನ್ನೇ ಕಂಗೆಡಿಸುವ ಕೈಗಂಟು ಸಂಭಾಷಣೆಗಳ ಕಿಲುಬಾಟ. ಪಾತ್ರ ಮತ್ತು ಪೂರ್ಣಪ್ರಮಾಣದ ರಂಗಪಠ್ಯ ಆವಾಹನೆ ಮಾಡಿಕೊಂಡು ಅಭಿನಯ ಬದುಕುವುದನ್ನು ಅರಿಯದಿದ್ದರೆ ಅದು ನಟನೆ ಆಗಬಹುದೇ ಹೊರತು ಅಭಿನಯವಲ್ಲ. ಅಭಿನಯವೆಂಬುದು ನಟನು ವಿನಯವಂತನಾಗುವುದು. ಮತ್ತೊಂದು ಉಲ್ಲೇಖಾರ್ಹ ಕಮೆಂಟ್ ಏನೆಂದರೆ: ಯಾವುದೋ ಕಾಲದ ಸವಕಲಾದ ರಂಗಧಾತುಗಳ ಮರುಕಳಿಕೆ.

ಪ್ರತಿನಾಯಕನ ಬದಲಿಗೆ ಖಳನಾಯಕನ ಖದರ್. ಅತಿರೇಕದ ಆಗರ. ಅಬ್ಬಾ! ಅಲ್ಲಿ ಖಳನಾಯಕನ ಆಗಮನವೆಂದರೆ ಥೇಟ್ ಸಿನೆಮಾ ವಿಲನ್ ಎಂಟ್ರಿಯೇ. ತುಟಿಯಂಚಲಿ ಸಿಗರೇಟಂತೂ ಕಾಯಂ. ಅಪ್ಡೇಟ್ ಏನೆಂದರೆ ಇತ್ತೀಚಿನ ತೆಲುಗು, ಹಿಂದಿ ವಿಲನ್ ಸ್ಟೈಲ್. ಪ್ರೇಕ್ಷಕರ ಕಿವಿಗಡಚಿಕ್ಕುವ ವಾದ್ಯಗಳ ಕಿರುಚಾಟ. ಖಳನಾಯಕನ ದೇಹ ಮತ್ತು ಧ್ವನಿಗಳ ಕಲಾತ್ಮಕತೆ ನೆಗೆದು ಬಿದ್ದು ಹುಳಿಗಟ್ಟುವ ಆರ್ಭಟ.

ಸಕಾರಾತ್ಮಕವಾದ ಸಾಂಸ್ಕೃತಿಕ ಸ್ಥಿತ್ಯಂತರಗಳ ಕೊರತೆ ಢಾಳಾಗಿ ಕಾಣುತ್ತಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಪೌರಾಣಿಕ ನಾಟಕಗಳು ಸೃಜನಶೀಲತೆ ಮತ್ತು ರಂಗಶಿಸ್ತು ಕಾಪಿಟ್ಟುಕೊಂಡಿರುವುದು ಖಂಡಿತಾ ಶ್ಲಾಘನೀಯ.

ವೃತ್ತಿ ನಾಟಕಕಾರರೆಂದರೆ ಕರುಳಿನ ಕಥೆಗಾರರು. ಹಾಗಾಗಿ ಅವರನ್ನು ಕವಿಗಳೆಂದು ಕರೆಯಲಾಯಿತು. ಅವರು ವೃತ್ತಿರಂಗಭೂಮಿಯ ಪೂರ್ವಸೂರಿಗಳು. ಅವರ ಗಂಭೀರ ಓದು ಮತ್ತು ಸಾಹಿತ್ಯಾಧ್ಯಯನ ಸಮಕಾಲೀನ ಕವಿಗಳಲ್ಲಿ ಇಲ್ಲ.ಹೀಗಾಗಿ ಇಂದಿನವರು ಸಿದ್ಧಸಾಹಿತ್ಯ ಸೂತ್ರದ ನಾಟಕಕಾರರು. ಕುವೆಂಪು, ಅನಕೃ, ತರಾಸು, ಬೇಂದ್ರೆ, ಬೀಚಿಯಂತಹ ವಾಙ್ಮಯ ಲೋಕದ ಪ್ರಾಜ್ಞರು, ವಿದ್ವಜ್ಜನರು, ಸಾಹಿತಿಗಳು ವೃತ್ತಿ ನಾಟಕಗಳಿಗೆ ಮುಖಾಮುಖಿಗೊಂಡು ಪರಂಪರೆಯನ್ನು ಪ್ರೀತಿಸಿ ಪೊರೆದ ಕಾಲವಿತ್ತು. ಈಗ ಯಾಕಿಲ್ಲವೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಹಳೆಯ ನಾಟಕಗಳಿಂದ ಚೂರುಪಾರು ಎತ್ತಿಕೊಂಡು, ಉಳಿದಂತೆ ತೆಳುಹಾಸ್ಯವೆಲ್ಲ ಕಲಾವಿದರ ಕೊಡುಗೆ. ಇದು ಸಮಕಾಲೀನ ಕೆಲವರ ನಾಟಕ ರಚನೆಯ ತಂತ್ರಗಾರಿಕೆ. ಇಷ್ಟಕ್ಕೆ ಸಮಾಧಾನಗೊಳ್ಳದೆ, ಹಳೆಯ ನಾಟಕಗಳಿಗೇ ಕೆಟ್ಟ ಕೆಟ್ಟದಾದ ಹೊಸ ಹೆಸರಿಡುವ ಪೊಗರಿನ ಪರಿಪಾಟ.

‘ಮಾವ ಮಂದ್ಯಾಗ ಸೊಸೆ ಸಂದ್ಯಾಗ’, ‘ನೋಡ್ಯಾಳ ರೊಕ್ಕ ಬಂದಾಳ ಪಕ್ಕ’, ‘ಹೆಣ್ಣಿಗೆ ಹಟ ಗಂಡಿಗೆ ಚಟ’, ‘ಹೌದಲೇ ರಂಗಿ ಊದಲೇನ ಪುಂಗಿ’, ‘ನಿಶೆ ಏರಿಶ್ಯಾಳ ನವರಂಗಿ’, ‘ಮಬ್ಬ ಹಿಡಿಸ್ಯಾಳ ಮದರಂಗಿ’, ‘ಸಾರಾಯಿ ಅಂಗಡಿ ಸಂಗವ್ವ’... ಇವು ಕೆಲವು ಹೊಸ ನಾಟಕಗಳ ಹೊಸ ಹೆಸರುಗಳು. ಈ ಹೆಸರುಗಳಲ್ಲಿ ಅಕ್ಷರಶಃ ಬಳಕೆಗಮ್ಯ ಗ್ರಾಹಕತ್ವದ ಗುಣವಿದೆ. ನಾಟಕದ ಹೆಸರಲ್ಲೇ ಹೆಣ್ಣಿನ ಶೋಷಣೆಯ ಧ್ವನಿ ಇದೆ. ಹೆಣ್ಣಿನ ಹೆಸರನ್ನು ಸರಕಿನಂತೆ ಬಳಸುತ್ತಿರುವುದು ಖಂಡನೀಯ. ಅತಿರೇಕಗಳ ಭಾರಕ್ಕೆ ಥಿಯೇಟರ್ ಎಥಿಕ್ಸ್ ಕುಸಿಯುತ್ತಿದೆ. ಸಹಪಾತ್ರಗಳಿಗೆ ಅವಕಾಶವಿಲ್ಲದ ಹಾಸ್ಯಪಾತ್ರಗಳ ಪುರುಷಾಧಿಪತ್ಯ.

ಹಾಸ್ಯ ಋಷಿಗಳ ಕಾಲಬೇಡ. ನಮ್ಮ ಕಾಲಮಾನದ ಮಾಸ್ಟರ್ ಹಿರಣ್ಣಯ್ಯ, ತೀರ್ಥಹಳ್ಳಿ ಶಾಂತಕುಮಾರ್, ವರವಿ ಫಕೀರಪ್ಪ, ಬಿ. ಓಬಳೇಶ್ ಅಂಥವರು ನಿರಂತರ ಓದಿನಿಂದ ಆರ್ಜಿಸಿಕೊಂಡ ರಾಜಕೀಯ ಪ್ರಜ್ಞೆಯ ಮೊನಚು ಮರೆಯಲುಂಟೇ.? ಅಂದಂದಿನ ಸಮಾಜೋಧಾರ್ಮಿಕ, ರಾಜಕೀಯ ಸಂಗತಿಗಳ ಮೇಲೆ ಅವರ ‘ಕ್ಷ’ ಕಿರಣ, ಕುಟುಕುವ ವಿಡಂಬನೆ, ಹಾಸ್ಯದ ಚುರುಕುತನವಿತ್ತು.

ಕೊರೊನಾ ದುರಿತಕಾಲದ ಸಂಕಟಗಳು, ದಿಲ್ಲಿಯ ಐತಿಹಾಸಿಕ ರೈತ ಚಳವಳಿ, ಬಹುತ್ವ ಭಾರತದ ಇತರೆ ಸಂಗತಿಗಳ ಕುರಿತು ಸದಭಿರುಚಿಯ ಸತ್ವಯುತ ನಾಟಕಗಳು ಹುಟ್ಟಬೇಕೆಂದರೆ ನಾಟಕ ಕಾರನಿಗೆ ವರ್ತಮಾನದ ವೃತ್ತಾಂತಗಳ ಅರಿವು, ಸಾಮಾಜಿಕ ಎಚ್ಚರ, ಜನಚಳವಳಿಗಳ ಅಧ್ಯಯನ, ಅನುಸಂಧಾನಗಳಾಗಬೇಕು. ಮಹಾನ್ ನಾಟಕಕಾರರ ಪ್ರತಿಭೆಯ ಕಡಲು ಆಗಿದ್ದ ಅದೀಗ ಬತ್ತಿದ ಒಡಲಾಗಿದೆ. ಸೋಜಿಗವೆಂದರೆ ವೃತ್ತಿರಂಗದಲ್ಲಿ ಪ್ರತಿಭಾಶಾಲಿ ಕಲಾವಿದರಿದ್ದಾರೆ. ಅಂತಹ ಪ್ರತಿಭೆಗಳ ಸದ್ಬಳಕೆಗೆ ತೋರಬೇಕಾದ ವಿವೇಕ, ನುರಿತ ನಿರ್ದೇಶನದ ತೀವ್ರಕೊರತೆ. ಇಂತಹ ಬಿಕ್ಕಟ್ಟುಗಳಿಗೆ ಪರಿಹಾರ ದೊರಕಿಸಬೇಕಿದ್ದ ರಂಗಪ್ರಜ್ಞೆ ಗಡದ್ದಾಗಿ ಉಂಡು ಮಲಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT