ಕಿರಣ್ ವಟಿ ನಿರ್ದೇಶನದ ‘ಶ್ರದ್ಧಾ ಮತ್ತು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು’ ನಾಟಕ ಜೆ.ಪಿ.ನಗರ ಎರಡನೇ ಹಂತದ ರಂಗಶಂಕರದಲ್ಲಿ ಜನವರಿ 11ರ ಶುಕ್ರವಾರ ಪ್ರದರ್ಶನಗೊಳ್ಳಲಿದೆ. ಸಮಯ– ರಾತ್ರಿ 7.30.
ನಾಟಕ ತಂಡದಲ್ಲಿ ‘ವಟಿಕುಟೀರ’ದ ಗಣೇಶ್ ಶೆಣೈ, ಪ್ರಾಚಿ ರವಿಚಂದ್ರ, ಕೀರ್ತಿಭಾನು, ಹರೀಶ್ ಸೋಮಯಾಜಿ ಮತ್ತು ಅರವಿಂದ ನಾಡಿಗ್ ಅವರಿದ್ದಾರೆ.ನಾಟಕಕ್ಕೆ ಸತೀಶ್ ಕೆ.ಎಸ್. ಸಂಗೀತ, ಸುನಿಲ್ ಕುಮಾರ್ ಬೆಳಕಿನ ನಿರ್ವಹಣೆ ಮಾಡಿದ್ದಾರೆ.
ವಸುಧೇಂದ್ರ ಅವರ ಲಲಿತಪ್ರಬಂಧ ಮತ್ತು ಶ್ರೀನಿವಾಸ ವೈದ್ಯ ಅವರ ಕತೆಯನ್ನು ಆಧರಿಸಿ ರಚಿಸಲಾದ ನಾಟಕವಿದು. ಗಂಡ ಮತ್ತು ಮಕ್ಕಳ ಮೇಲಿನ ಪ್ರೀತಿ ವ್ಯಾಮೋಹದಷ್ಟೇ ಸ್ಟೇನ್ಲೆಸ್ ಸ್ಟೀಲ್ ಪಾತ್ರಗಳ ಮೇಲೂ ಹೊಂದಿರುವ ತಾಯಿಯವ್ಯಕ್ತಿತ್ವದ ಪದರಗಳು ನಾಟಕದುದ್ದಕ್ಕೂ ಹಾಸುಹೊಕ್ಕಾಗಿವೆ. ಮಧ್ಯಮ ವರ್ಗದ ಮನೆಗಳಲ್ಲಿನ ಸರಳತೆ, ಸಂಕೀರ್ಣತೆಗಳನ್ನು ಅತ್ಯಂತ ಸರಳವಾದ ರಂಗಸಜ್ಜಿಕೆ ಹಾಗೂ ಮನಮುಟ್ಟುವ ಸಂಭಾಷಣೆಗಳ ಮೂಲಕ ನೋಡುಗರ ಮನಸ್ಸಿಗೆ ದಾಟಿಸುವುದು ಈ ನಾಟಕದ ವಿಶೇಷ.
‘ಬೇರೆ ಬೇರೆ ಮನೆಗಳಿಂದ ಬಂದು ಒಂದಾದ ಗಂಡ-ಹೆಂಡತಿ ಮುಂದೆ ಅಪ್ಪ-ಅಮ್ಮ ಆಗಿ ಒಂದು ಸಂಸಾರವಾಗುವ ಹಾಗೆ ಎರಡೂ ರಂಗಪ್ರಯೋಗಗಳು ಬೇರೆ ಬೇರೆ ಲೇಖಕರ ಲಲಿತ ಪ್ರಬಂಧಗಳ ಆಧಾರದಿಂದ ಮೂಡಿಬಂದಿದ್ದರೂ ರಂಗದ ಮೇಲೆ ಎರಡೂ ಒಂದೇ ಆಗಿಬಿಡುತ್ತವೆ. ವಸುದೇಂಧ್ರರ ಕಲ್ಪನೆಯಿಂದ ಮೂಡಿದ ಅಮ್ಮ ಹಾಗೂ ಶ್ರೀನಿವಾಸ ವೈದ್ಯರ ತಂದೆಯೊಡೆಗಿನ ‘ಶ್ರದ್ಧೆ’ಯೂ ಇಲ್ಲಿ ಒಂದಾಗಿ ರಂಗದ ಮೇಲೆ ಭಾವನೆಗಳ ಓಕುಳಿ ಎಬ್ಬಿಸುತ್ತವೆ’ ಎಂದು ಹೇಳುತ್ತಾರೆ, ನಿರ್ದೇಶಕ ಕಿರಣ್ ವಟಿ.