ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ | ಯುದ್ಧ ವಿರೋಧಿ ನವಿಲು ಪುರಾಣ

Last Updated 22 ಜನವರಿ 2023, 2:56 IST
ಅಕ್ಷರ ಗಾತ್ರ

ಹಿರೋಷಿಮಾದ ಮೇಲೆ ಅಣು ಬಾಂಬ್ ಬೀಳುವ ಸನ್ನಿವೇಶ ಪರದೆಯ ಮೇಲೆ ಮೂಡುವ ಮೂಲಕ ಆರಂಭವಾಗುತ್ತದೆ ‘ನವಿಲು ಪುರಾಣ’ ನಾಟಕ. ಯುದ್ಧದ ಘೋರ ಪರಿಣಾಮಕ್ಕೆ ತುತ್ತಾಗಿ ಅಂಗವಿಹೀನರಾದ ಮಕ್ಕಳು ತರಗತಿಯೊಂದರಲ್ಲಿ ಕುಳಿತು ಆ ಅಣು ಬಾಂಬ್ ಸೃಷ್ಟಿಸಿದ ನಷ್ಟದ ಕುರಿತು ಪಾಠವನ್ನು ಕೇಳುವ ದಾರುಣ ಪರಿಸ್ಥಿತಿ. ಇದು ವಿಪರ್ಯಾಸವಷ್ಟೇ ಅಲ್ಲ, ಯುದ್ಧದ ಕ್ರೂರ ವ್ಯಂಗ್ಯವೂ ಹೌದು. ಯುದ್ಧ ವಿರೋಧಿ ಅಂಶಗಳನ್ನಿಟ್ಟುಕೊಂಡು ಹೆಣೆದ ‘ನವಿಲು ಪುರಾಣ’ ನಾಟಕ ಪುರಾಣ ಕಾಲದಿಂದಲೂ ಯುದ್ಧಕ್ಕೆ ಜೀವಂತ ಸಾಕ್ಷಿಯಾದ ನವಿಲೊಂದರ ಅಳಲು.

ನಾಟಕದ ಕಥಾ ನಾಯಕ ಲೇಖಕನೂ ಹೌದು, ನಿರೂಪಕನೂ ಹೌದು. ಯುದ್ಧಗಳನ್ನು ನೋಡಿ, ಅದರ ದುಷ್ಪರಿಣಾಮಗಳನ್ನು ಎದುರಿಸಿ ನೊಂದು, ಬೆಂದು, ಬಸವಳಿದವ. ಯುದ್ಧಗಳು ಮನುಷ್ಯನಿಗೆ ಅನಿವಾರ್ಯವೇ ಎಂದು ಪ್ರಶ್ನಿಸುವ ಮೂಲಕ ಪುರಾಣ, ಇತಿಹಾಸ, ವರ್ತಮಾನ ಕಾಲಘಟ್ಟಗಳ ಯುದ್ಧಗಳನ್ನು ಜರಿಯುತ್ತ ವಿಷಾದ ವ್ಯಕ್ತಪಡಿಸುತ್ತಾನೆ. ಮಹಾಭಾರತದ ಕುರುಕ್ಷೇತ್ರ, ರಾಮ-ರಾವಣರ ಯುದ್ಧದ ಪರಿಣಾಮ ಕೊನೆಯಲ್ಲಿ ವಿನಾಶವೇ ಆಗಿದ್ದರೂ ಅದರಿಂದ ಪಾಠವನ್ನು ಕಲಿಯದ ಮಾನವ ಮತ್ತೆ ಮತ್ತೆ ಯುದ್ಧಕ್ಕೆಳೆಸುತ್ತಲೇ ಇದ್ದಾನೆ.

ಸಮುದ್ರ ಮಾರ್ಗವಾಗಿ ಅಮೆರಿಕ, ಇರಾಕ್ ದೇಶವನ್ನು ಸದೆ ಬಡಿಯಲು ಬರುವಾಗ, ಇರಾಕ್ ತನ್ನಲ್ಲಿರುವ ಸಾವಿರ ಸಾವಿರ ಗ್ಯಾಲನ್ ಕಚ್ಚಾ ತೈಲವನ್ನು ಸಮುದ್ರಕ್ಕೆ ಸುರಿದು ವೈರಿ ಪಡೆಯನ್ನು ಹಿಮ್ಮೆಟ್ಟಿಸುತ್ತದೆ. ಆದರೆ ಅದರ ಘೋರ ಪರಿಣಾಮವನ್ನು ಎದುರಿಸಿದ್ದು ಸಮುದ್ರದಲ್ಲಿನ ಮೂಕ ಜಲಚರಗಳು. ಸುಮಾರು 600 ಕಿ.ಮೀ.ಯಷ್ಟು ಉದ್ದದವರೆಗೆ ಸಮುದ್ರದುದ್ದಕ್ಕೂ ತೈಲ ಹರಡಿ ಕೋಟಿ ಕೋಟಿ ಸಮುದ್ರ ಜೀವಿಗಳ ನಿರ್ನಾಮಕ್ಕೂ ಆ ಯುದ್ಧ ಕಾರಣವಾಯಿತು. ಉಳ್ಳವರ ಯುದ್ಧ ದಾಹಕ್ಕೆ ಸದಾ ಬೆಲೆ ತೆರುವುದು ದುರ್ಬಲರು, ಬಡವರು, ಮುಗ್ಧರು.

ಯುದ್ಧವೆಂಬುದು ಯಾವ ದೇಶವನ್ನೂ, ಯಾವ ಸ್ಥಳವನ್ನೂ ಬಿಟ್ಟಿಲ್ಲ ಎಂದು ಹೇಳುತ್ತಾನೆ ಕಥಾ ನಾಯಕ. ರಾಜಸ್ಥಾನದ ಒಂದು ಸುಂದರ ನಗರಿ, ಅಲ್ಲಿನ ಶಾಸ್ತ್ರೀಯ ಸಂಗೀತ, ನೃತ್ಯ, ಉದ್ಯಾನಗಳಲ್ಲಿ ಆಡಿಕೊಂಡಿರುವ ಸುಂದರ ನವಿಲುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು. ಪೋಖ್ರಾಣ್‌ನಲ್ಲಿ 1974ರಲ್ಲಿ ಪರೀಕ್ಷಾರ್ಥ ಅಣು ಬಾಂಬ್ ಸ್ಫೋಟಿಸಿದಾಗ ಬೆದರಿದ ನವಿಲುಗಳು ಆರ್ತನಾದ ಮಾಡುತ್ತ ಗಾಬರಿಯಿಂದ ಎತ್ತರೆತ್ತರಕ್ಕೆ ದಿಕ್ಕು ತಪ್ಪಿ ಹಾರಾಡುತ್ತಿದ್ದವು. ಶಾಂತಿ, ಸೌಹಾರ್ದ, ಸೌಂದರ್ಯದ ಪ್ರತೀಕದಂತಿದ್ದ ನವಿಲುಗಳು ಅಲ್ಲಿ ಈಗ ಬೆರಳೆಣಿಕೆಯಷ್ಟು ಉಳಿದಿವೆ ಎಂದೂ ಆತ ವಿಷಾದ ವ್ಯಕ್ತಪಡಿಸುತ್ತಾನೆ.

ಕುರುಕ್ಷೇತ್ರದ ಯುದ್ಧಾನಂತರ ಪಾಂಡವರನ್ನು ನಿರ್ಮೂಲನೆ ಮಾಡುವ ಪಣತೊಟ್ಟು ಬಸಿರು ಹೊತ್ತ ಹೆಂಗಸರ ಭ್ರೂಣಗಳೆಲ್ಲವನ್ನೂ ತನ್ನ ಬ್ರಹ್ಮಾಸ್ತ್ರದಿಂದ ನಾಶ ಮಾಡುತ್ತಾನೆ ಅಶ್ವತ್ಥಾಮ. ಆಗ ಕುಪಿತನಾದ ಕೃಷ್ಣ ಅಶ್ವತ್ಥಾಮನಿಗೆ ‘ಮೂರು ಸಾವಿರ ವರ್ಷಗಳ ಕಾಲ ಕಾಡು-ಮೇಡು ಅಲೆಯುತ್ತಿರು. ನಿನ್ನ ದೇಹದ ಮೇಲಿನ ಗಾಯಗಳು ಮಾಯದೇ ವೃಣವಾಗಿ, ಯಾರೂ ನಿನ್ನನ್ನು ಹತ್ತಿರ ಸೇರಿಸದಿರಲಿ’ ಎಂದು ಶಪಿಸುತ್ತಾನೆ. ಅದೇ ಅಶ್ವತ್ಥಾಮ ಯುದ್ಧದ ರೂಪ ತಳೆದು ಅಲೆದಾಡುತ್ತಲೇ ಇದ್ದಾನೆ. ಅವನ ಪಾಪ ಪರಿಹಾರದ ಆ ಮೂರು ಸಾವಿರ ವರ್ಷಗಳು ಅದೆಂದು ಕೊನೆಯಾಗುತ್ತವೆ ಎಂಬುದು ನಾಟಕದ ನಾಯಕನ ಯಕ್ಷ ಪ್ರಶ್ನೆ.

ಅತೀ ಸರಳ ರಂಗ ಪರಿಕರಗಳನ್ನು ಒಳಗೊಂಡ ನಾಟಕದಲ್ಲಿ ಆರಂಭದಿಂದ ಅಂತ್ಯದುದ್ದಕ್ಕೂ ಮುಖವಾಡಗಳನ್ನು ಬಳಸಿಕೊಳ್ಳಲಾಗಿದೆ. ಅಣುಬಾಂಬ್, ಪ್ರಾಣಿ-ಪಕ್ಷಿಗಳು, ರಾಜಕೀಯ ನಾಯಕರು, ಮಹಾಭಾರತದ ಪಾತ್ರಗಳ ಮುಖವಾಡಗಳು ನಾಟಕವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿವೆ. ನಾಟಕದುದ್ದಕ್ಕೂ ಬರುವ ನವಿಲಿನ ಹಿಂಡಿನ ಪರಿಕಲ್ಪನೆ ಮತ್ತು ಅವುಗಳ ನೃತ್ಯ ಅನನ್ಯ.

ನಾಟಕದುದ್ದಕ್ಕೂ ಸುರೇಶ ಆನಗಳ್ಳಿ ಅವರ ಚಾಕಚಕ್ಯತೆ ಎದ್ದು ಕಾಣುತ್ತದೆ. ನಿರ್ದೇಶಕರು ನಾಟಕವನ್ನು ಕೇವಲ ಸಂಭಾಷಣೆಗಳ ಮೂಲಕ ಒಪ್ಪಿಸದೇ ಒಂದು ವಿಭಿನ್ನ ಮಾದರಿಯನ್ನು ಬಳಸಿಕೊಂಡಿದ್ದಾರೆ. ಪಂಚತಂತ್ರದ ಕತೆಗಳನ್ನು ಕೇಳುವಾಗ ಮನದ ಪರದೆಯ ಮೇಲೆ ಮೂಡುವ ಪ್ರಾಣಿ-ಪಕ್ಷಿಗಳಂತೆ ಇಡೀ ನಾಟಕದಲ್ಲಿ ಮುಖವಾಡಗಳನ್ನು ಧರಿಸಿದ ಪಾತ್ರಧಾರಿಗಳು ಬಂದು ಹೋಗುತ್ತಾರೆ. ಅಲ್ಲಲ್ಲಿ ಬರುವ ಸುಮಧುರ ಸಂಗೀತ, ನೆರಳು ಬೆಳಕಿನಾಟ, ಸೂಕ್ತ ಪ್ರಸಾಧನ, ಎಲ್ಲರ ಪ್ರಬುದ್ಧ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತದೆ. ಆಗಾಗ ಪರದೆಯ ಮೇಲೆ ಮೂಡುತ್ತಿದ್ದ ಸಾಕ್ಷ್ಯಚಿತ್ರಗಳ ನೈಜಬಿಂಬದ ತುಣುಕುಗಳು ಯುದ್ಧಗಳ ಭೀಕರತೆಯನ್ನು ಹೇಳುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.

ಹೆಸರಾಂತ ಉರ್ದು ಲೇಖಕ ಇಂತಿಜಾರ್ ಹುಸೇನ್‌ ರಚಿಸಿದ ಮೂಲ ಕತೆಯನ್ನಿಟ್ಟುಕೊಂಡು ಪ್ರೊ.ಕೆ.ಇ.ರಾಧಾಕೃಷ್ಣ ಅವರು ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಶಿವಮೊಗ್ಗದ ಸಮುದಾಯದ ಸಹಯೋಗದಲ್ಲಿ ಬೆಂಗಳೂರಿನ ‘ಅನೇಕ’ ರಂಗತಂಡ ಈ ನಾಟಕವನ್ನು ಅಭಿನಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT