ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಪ ಭಾರತ’ 102ನೇ ಪ್ರದರ್ಶನ

Last Updated 5 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಕನ್ನಡದ ಮಹತ್ವದ ನಾಟಕಕಾರರಲ್ಲಿ ಒಬ್ಬರಾದ ಡಾ.ಕೆ.ವೈ.ನಾರಾಯಣಸ್ವಾಮಿ ಅವರ ನಾಟಕಗಳು ವಿಭಿನ್ನ ಬಗೆಯ ಪ್ರಯೋಗಕ್ಕೆ ಒಡ್ಡಿಕೊಂಡಿರುವುದಲ್ಲದೇ ಪ್ರಶಂಸೆ, ಪ್ರತಿಕ್ರಿಯೆ, ವಿಮರ್ಶೆಗೆ ಒಳಪಡುತ್ತಲೇ ಬಂದಿದೆ. ಕಾರಣ ಪುರಾಣ ಪ್ರಸಿದ್ಧ ಪಾತ್ರಗಳು ಹಾಗೂ ಐತಿಹಾಸಿಕ ಕಥಾನಕಗಳನ್ನು ತೆಗೆದುಕೊಂಡು ಅದರಲ್ಲಿನ ಪುರೋಹಿತಶಾಹಿ ವ್ಯವಸ್ಥೆಯ ಕರಾಳ ಪರಿಣಾಮಗಳು, ರಾಜಕೀಯ ಸಂಘರ್ಷವನ್ನು ಸೂಕ್ಷ್ಮವಾಗಿ ಪುನರ್ ವ್ಯಾಖ್ಯಾನ ಮಾಡುವ ಮೂಲಕ ವರ್ತಮಾನ ಸ್ಥಿತಿಗತಿಗಳನ್ನು ಅವಲೋಕಿಸುತ್ತಾರೆ. ಆ ನಿಟ್ಟಿನಲ್ಲಿ ಅವರ ‘ಪಂಪಭಾರತ' ಒಂದು ಸಾರ್ಥಕ ಪ್ರಯತ್ನ.

ಆದಿಕವಿ ಪಂಪನ ಶಾಸನ ಹುಡುಕ ಹೊರಟ ಸಂಶೋಧಕರ ಸತ್ಯ ಶೋಧನೆಗೆ ಸೆಡ್ಡು ಹೊಡೆದಂತೆ ಬಲಪಂಥೀಯರು ಎದುರಾಗಿ ಪ್ರತಿರೋಧ ಒಡ್ಡುತ್ತಾರೆ. ಹೀಗೆ ವರ್ತಮಾನದಲ್ಲಿ ನಿಂತು ಮಾತನಾಡುವ ಪಾತ್ರಗಳ ಮಧ್ಯೆ ಭೂತಕಾಲದ ಪಾತ್ರಗಳು ಶಾಸನಗಳಿಂದ ಎದ್ದು ಬಂದು ಪ್ರಸ್ತುತ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಒಳನೋಟಗಳನ್ನು ಭೇದಿಸುತ್ತಾ ಹೋಗುತ್ತವೆ.

ಸಾವಿರಾರು ವರ್ಷಗಳ ಹಿಂದೆ ಬ್ರಾಹ್ಮಣನಾಗಿದ್ದ ಪಂಪ ಕವಿ ಜೈನ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಅರಸನಾದ ಅರಿಕೇಸರಿಯ ಹಂಗಿನ ಆಶ್ರಯ ಪಡೆದು ಮಹಾಭಾರತದಂಥ ಪುರಾಣ ಕಾವ್ಯವನ್ನು ಪುನರ್ ವಿಮರ್ಶಿಸಿ ಅರ್ಜುನನನ್ನು ಅರಿಕೇಸರಿಗೆ ಸಮೀಕರಿಸಿ ಚಿತ್ರಿಸುತ್ತಾನೆ. ಕರ್ಣ ಸುಯೋಧನರ ಮಿತ್ರತ್ವಕ್ಕೆ ಹೊಸ ಮೌಲ್ಯ ಪ್ರತಿಷ್ಠಾಪಿಸುತ್ತಾನೆ. ಇವೆಲ್ಲವನ್ನೂ ಪ್ರಶ್ನಿಸುವ ಭೂತಕಾಲದ ಕರ್ಣ ಸ್ವತಃ ಪಂಪನ ಆತ್ಮವಿಮರ್ಶೆಗೆ ಒಳಪಡಿಸುವ ತಾಕಲಾಟಕ್ಕೆ ಪಂಪನನ್ನು ಸಿಲುಕುವಂತೆ ಮಾಡುತ್ತಾನೆ. ಕಥಾಹಂದರದಲ್ಲಿ ದ್ರೌಪದಿ-ಕರ್ಣ, ಯುದ್ಧಭೂಮಿಯಲ್ಲಿ ಬಂದು ಕರ್ಣನನ್ನು ಭೇಟಿ ಮಾಡುವ ದ್ರೌಪದಿ, ಹೀಗೆ ಪುರಾಣ ಪ್ರಸಂಗಗಳಿಗೆ ಪಂಪ ಹಾಗೂ ಕರ್ಣರ ಸಂವಾದ ಏರ್ಪಟ್ಟು ಕರ್ಣನು ಎತ್ತುವ ತಕರಾರುಗಳಿಗೆ ಪಂಪ ಸಮರ್ಥನೆಯನ್ನು ಕೊಡುತ್ತಾ ಹೋಗುವ ಮೂಲಕ ವಿಕ್ರಮಾರ್ಜುನ ವಿಜಯವು ಸಮಕಾಲೀನ ಜಗತ್ತಿಗೆ ಕನ್ನಡಿಯಂತೆ ಪ್ರತಿಫಲಿಸುತ್ತದೆ.

‘ಪಂಪಭಾರತ’ ನಾಟಕ ಪ್ರದರ್ಶನ: ಪ್ರಸ್ತುತಿ–ಸಮುದಾಯ ಬೆಂಗಳೂರು. ರಚನೆ–ಡಾ.ಕೆ.ವೈ. ನಾರಾಯಣ ಸ್ವಾಮಿ. ನಿರ್ದೇಶನ–ಪ್ರಮೋದ್ ಶಿಗ್ಗಾಂವ್. ಸಂಗೀತ–ಗಜಾನನ ಟಿ. ನಾಯ್ಕ. ಪ್ರಸಾದನ– ರಾಮಕೃಷ್ಣ ಬೆಳ್ತೂರ್. ಸ್ಥಳ–ರಂಗಶಂಕರ, ಜೆ.ಪಿ.ನಗರ ಎರಡನೇ ಹಂತ. ಬುಧವಾರ ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT