<blockquote><em>ಶಕೀಲ್ ಅಹ್ಮದ್ ತಮ್ಮ ನಾಟಕಗಳಲ್ಲಿ ಪ್ರೇಕ್ಷಕರನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸುವುದಿಲ್ಲ; ಅವರನ್ನು ಚಿಂತನೆಗೆ, ಸಂವಾದಕ್ಕೆ ಹಚ್ಚುತ್ತಾರೆ. ಸಮಾಜದ ಪ್ರಸಕ್ತ ಸಮಸ್ಯೆಗಳಿನ್ನಿಟ್ಟುಕೊಂಡು ನಾಟಕ ಸಿದ್ಧಪಡಿಸುವ ಇವರು ರಂಗಭೂಮಿಗೆ ಹೊಸ ಆಲೋಚನೆಗಳನ್ನು ತರುತ್ತಿದ್ದಾರೆ.</em></blockquote>.<p>ಧಾರವಾಡದಲ್ಲಿ ಶಕೀಲ್ ಅಹ್ಮದ್ ಅವರ ‘ಫಾರ್ ಎ ಬೈಟ್ ಆಫ್ ಫುಡ್’ ಏಕವ್ಯಕ್ತಿ ನಾಟಕ ಪ್ರದರ್ಶನ ಮುಗಿದ ಕ್ಷಣದಲ್ಲೇ ಸಭಾಂಗಣದಲ್ಲಿ ಜೋರಾದ ಕರತಾಡನ ಮೊಳಗಿತು. ಆದರೆ ಆ ಚಪ್ಪಾಳೆಯ ನಂತರ ಏಕಾಏಕಿ ಮೌನ ನೆಲಸಿತು. ನಾಟಕ ಮುಗಿದರೂ ಪ್ರೇಕ್ಷಕರು ತಮ್ಮ ಸ್ಥಾನಗಳಿಂದ ಕದಲಲಿಲ್ಲ. ಕೆಲವೇ ಕ್ಷಣಗಳಲ್ಲಿ ಆ ಮೌನ ಚರ್ಚೆಯಾಗಿ ಮಾರ್ಪಟ್ಟಿತು. ಆಹಾರ ಆಯ್ಕೆಯ ಹಕ್ಕಿನ ಬಗ್ಗೆ ಗಂಭೀರ ಸಂವಾದ ಆರಂಭವಾಯಿತು. ಉತ್ತರ ಪ್ರದೇಶದ ದಾದ್ರಿ ಗುಂಪು ಹತ್ಯೆ ಘಟನೆಯನ್ನು ಆಧರಿಸಿದ ಈ ನಾಟಕ, ಪ್ರೇಕ್ಷಕರ ಮನಸ್ಸಿನಲ್ಲಿ ಅಸಹಜವಾದರೂ ಅಗತ್ಯವಾದ ಪ್ರಶ್ನೆಗಳನ್ನು ಎಸೆದಿತ್ತು. ನಾಟಕದ ನಿಜವಾದ ಯಶಸ್ಸು ಇದೇ.</p><p>ಇಂತಹ ಪ್ರತಿಕ್ರಿಯೆಗಳನ್ನು ಹುಟ್ಟಿಸುವುದು ಶಕೀಲ್ ಅವರ ನಾಟಕಗಳ ವಿಶಿಷ್ಟ ಗುಣ. ನಲ್ವತ್ತು ವರ್ಷದ ಈ ರಂಗಕರ್ಮಿ, ಪ್ರೇಕ್ಷಕರನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸುವುದಿಲ್ಲ; ಅವರನ್ನು ಚಿಂತನೆಗೆ, ಸಂವಾದಕ್ಕೆ ಹಚ್ಚುತ್ತಾರೆ. ಸರ್ಕಾರದ ನೀತಿಗಳು, ಸಾಂಸ್ಕೃತಿಕ ಆಚರಣೆಗಳು, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಕಠಿಣ ಪ್ರಶ್ನೆಗಳನ್ನು ವೇದಿಕೆಯ ಮೇಲೆ ಇಡುವುದು ಅವರ ನಾಟಕಗಳ ಧ್ಯೇಯ. ಅವರ ದೃಷ್ಟಿಯಲ್ಲಿ ರಂಗಭೂಮಿ ಕೇವಲ ಮನರಂಜನೆಯ ವೇದಿಕೆ ಅಲ್ಲ; ಅದು ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಯ ಜೀವಂತ ತಾಣ.</p><p>ತೆರಿಗೆ ಮತ್ತು ಬೆಲೆ ಏರಿಕೆ ಕುರಿತು ‘ಕೊಡಲ್ಲ ಅಂದ್ರೆ ಕೊಡಲ್ಲ’, ಅತೋಲ್ ಫುಗಾರ್ಡ್ ಅವರ ಕೃತಿಯ ಅನುವಾದ ‘ಅನಾಮಿಕನ ಸಾವು’, ಮತ್ತು ಅಡಾಲ್ಫ್ ಹಿಟ್ಲರ್ ಅಧಿಕಾರಾರೋಹಣವನ್ನು ವ್ಯಂಗ್ಯವಾಗಿ ಚಿತ್ರಿಸುವ ‘ತಿಂಡಿಗೆ ಬಂದ ತುಂಡೇರಾಯ’–ಈ ನಾಟಕಗಳು ಅವರ ಚಿಂತನೆಯ ವೈವಿಧ್ಯತೆಯನ್ನು ತೋರಿಸುತ್ತವೆ.</p><p>ಖ್ಯಾತ ರಂಗಕರ್ಮಿ ಮಂಗಳಾ ಎನ್., ‘ಫಾರ್ ಎ ಬೈಟ್ ಆಫ್ ಫುಡ್ ನಾಟಕ ನನ್ನನ್ನು ಹಲವು ತಿಂಗಳು ಕಾಡಿತು. ಆಹಾರದ ಆಯ್ಕೆಯ ಕಾರಣಕ್ಕಾಗಿ ಒಬ್ಬನನ್ನು ಕೊಲ್ಲುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಅದು ನಮ್ಮ ಮುಂದೆ ಇಡುತ್ತದೆ. ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ದೈನಂದಿನ ಆರ್ಥಿಕ ಆತಂಕಗಳನ್ನು ವಿಭಿನ್ನ ಶೈಲಿಯಲ್ಲಿ ತೀಕ್ಷ್ಣವಾಗಿ ವಿಮರ್ಶಿಸುತ್ತದೆ’ ಎನ್ನುತ್ತಾರೆ.</p><p>ಪ್ರೇಕ್ಷಕರಲ್ಲೊಬ್ಬರಾದ ಶಂಕರ ಎನ್.ಕೆ. ಹೇಳುವಂತೆ, ‘ಅನಾಮಿಕನ ಸಾವು ನಾಟಕ ಈಗಿನ ಸನ್ನಿವೇಶಕ್ಕೆ ಬಹಳ ಸೂಕ್ತ. ಎನ್ಆರ್ಸಿ ಹಿನ್ನೆಲೆ, ಗುರುತು ಸಾಬೀತುಪಡಿಸುವ ಭೀತಿ, ಆರ್ಥಿಕ ಶೋಷಣೆ–ಇವುಗಳನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ.’</p><p>ಸಮಾಜದ ಸಂಕೀರ್ಣ ಪ್ರಶ್ನೆಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ರಂಗಕ್ಕೆ ಇಳಿಸುವುದು ಶಕೀಲ್ ಅವರ ಶಕ್ತಿ. 2015ರಲ್ಲಿ ವಿಜಯಪುರ ಜಿಲ್ಲೆಯ ಲೋಣಿ ಬಿ.ಕೆ. ಗ್ರಾಮದಲ್ಲಿ ‘ದಿ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ’ಯನ್ನು ಸ್ಥಾಪಿಸಿದ ಅವರು, ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದ ‘ನಿರ್ದಿಗಂತ’ ಸೇರಿದಂತೆ ಹಲವು ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ದೈಹಿಕ ಚಲನವಲನಗಳಿಗೆ ಪ್ರಾಮುಖ್ಯತೆ ನೀಡುವ ಅವರ ಪ್ರದರ್ಶನ ಶೈಲಿ, ಪಾತ್ರಧಾರಿಗಳನ್ನು ಹೆಚ್ಚು ನೈಜವಾಗಿಸುತ್ತದೆ.</p><p>ತಂಡದ ಸದಸ್ಯ ದಿನೇಶ್ ನಾಯ್ಕ್ ವಿವರಿಸುವಂತೆ, ‘ನಟರ ದೈಹಿಕ ಚಲನವಲನಗಳ ಅಧ್ಯಯನ ಮತ್ತು ಪ್ರಾದೇಶಿಕ ಉಪಭಾಷೆಗಳ ಬಳಕೆಯಿಂದ ತಾಲೀಮು ಆರಂಭವಾಗುತ್ತದೆ. ಕಠಿಣ ದೈಹಿಕ ತರಬೇತಿ ಅವರ ಅಭಿನಯವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.’</p><p>ಮೂಕಾಭಿನಯ, ತೈ ಚಿ (ಚೀನಾದ ಸಮರ ಕಲೆ) ಮತ್ತು ಇತರ ರಂಗ ಅಂಶಗಳನ್ನು ಸಂಯೋಜಿಸುವ ಮೂಲಕ, ಕಲಾವಿದರು ಅಮೂರ್ತ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವಂತೆ ಶಕೀಲ್ ರೂಪಿಸುತ್ತಾರೆ.</p><p>ನಟ ವಿಶಾಲ್ ಅವರ ಪ್ರಕಾರ, ‘ಈ ವಿಧಾನಗಳು ಉಸಿರಾಟ ನಿಯಂತ್ರಣ ಮತ್ತು ದೈಹಿಕ ಸಮತೋಲನಕ್ಕೂ ಸಹಕಾರಿಯಾಗುತ್ತವೆ.’</p><p>ಆದರೆ, ಕೋಮು ಮತ್ತು ರಾಜಕೀಯವಾಗಿ ಸೂಕ್ಷ್ಮ ವಿಷಯಗಳನ್ನು ಹೇಳುವುದರಿಂದ ಪ್ರತಿರೋಧವೂ ಎದುರಾಗುತ್ತದೆ. ‘ಕೆಲವೆಡೆ ನಾಟಕದ ಪೋಸ್ಟರ್ಗಳನ್ನು ಕಿತ್ತುಹಾಕಲಾಗಿದೆ. ಕೆಲವೆಡೆ ಪ್ರದರ್ಶನದ ನಂತರ ಗಲಾಟೆಗಳು ನಡೆದಿವೆ’ ಎಂದು ಶಕೀಲ್ ನೆನಪಿಸಿಕೊಳ್ಳುತ್ತಾರೆ. ಆದರೂ ಅವರು ಸುಮ್ಮನಿಲ್ಲ. ‘ಪ್ರಜಾಪ್ರಭುತ್ವಕ್ಕೆ ಮೌನವಲ್ಲ, ಬೌದ್ಧಿಕ ಸಂವಾದವೇ ಅಗತ್ಯ’ ಎನ್ನುವುದು ಅವರ ನಿಲುವು.</p><p><strong>ವೇದಿಕೆಯಾಚೆಯ ಸಂವಾದ</strong></p><p>ಶಕೀಲ್ ಅವರ ಸಂವಾದ ಕೇವಲ ವೇದಿಕೆಗೆ ಸೀಮಿತವಾಗಿಲ್ಲ. ಕಾಲೇಜುಗಳಲ್ಲಿ ಪ್ರದರ್ಶನ ನೀಡಿದ ನಂತರ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುವುದು ಅವರ ಅಭ್ಯಾಸ. ‘ವಿದ್ಯಾರ್ಥಿಗಳು ತಮ್ಮ ನಾಗರಿಕ ಹಕ್ಕುಗಳನ್ನು ಅರಿತುಕೊಳ್ಳಬೇಕು, ಪ್ರಶ್ನಿಸುವುದನ್ನು ಕಲಿಯಬೇಕು. ಅವರೇ ಪ್ರಜಾಪ್ರಭುತ್ವದ ಭವಿಷ್ಯ’ ಎಂದು ಅವರು ಹೇಳುತ್ತಾರೆ.</p><p>ಶಕೀಲ್, ಬಾಲ್ಯದಲ್ಲೇ ರಂಗಭೂಮಿಯತ್ತ ಆಕರ್ಷಿತರಾದರು. ಶಾಲಾ ನಾಟಕಗಳು ಅವರ ಮೊದಲ ಪಾಠಶಾಲೆ. ಪಿಯುಸಿ ಓದುವಾಗ ಇಂಗ್ಲಿಷ್ ಮೇಲಿನ ಹಿಡಿತದ ಕೊರತೆಯಿಂದ ಆತ್ಮವಿಶ್ವಾಸ ಕುಂದಿದರೂ, ಅದೇ ಅವಧಿಯಲ್ಲಿ ಅವರು ರಂಗಭೂಮಿಯತ್ತ ಮುಖ ಮಾಡಿದರು. ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಸೇರುವ ಕನಸು ಸಾಧ್ಯವಾಗದಿದ್ದರೂ, ಮೈಸೂರಿನ ರಂಗ ಸಂಸ್ಕೃತಿ ಅವರನ್ನು ಬೆಳೆಸಿತು. ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ ‘ನೀನಾಸಂ’ನಲ್ಲಿ ರಂಗ ಶಿಕ್ಷಣ ಪಡೆದ ಅವರು, 2011ರಲ್ಲಿ ಪೂರ್ಣಾವಧಿ ರಂಗಭೂಮಿಗೆ ಕಾಲಿಟ್ಟರು.</p><p>ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯಲ್ಲೂ ತರಬೇತಿ ಪಡೆದ ಅವರು, ನಂತರ ಸಿಂಗಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ನಲ್ಲಿ ಏಷ್ಯನ್ ರಂಗ ಪ್ರಕಾರಗಳನ್ನು ಅಧ್ಯಯನ ಮಾಡಿದರು. ‘ನೀನಾಸಂ ರಂಗಭೂಮಿಯ ವ್ಯಾಕರಣ ಕಲಿಸಿದರೆ, ಸಿಂಗಪುರದ ಅನುಭವ ದೇಹಭಾಷೆಯ ಮಹತ್ವ ತಿಳಿಸಿತು’ ಎಂದು ಅವರು ಹೇಳುತ್ತಾರೆ.</p><p>ಕೆಂಟ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಶಕೀಲ್, ರಂಗಾಯಣ, ಸಾಣೇಹಳ್ಳಿ ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಂತಹ ಸಂಸ್ಥೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ ವಿಶ್ವದಾದ್ಯಂತ ಪ್ರದರ್ಶನ ನೀಡಿದ್ದರೂ, ಅವರ ಗಮನ ಮಾತ್ರ ಉತ್ತರ ಕರ್ನಾಟಕದ ಹಳ್ಳಿಗಳ ಮೇಲಿದೆ. ‘ಜಾನಪದ ಸಂಸ್ಕೃತಿಯಿಂದ ಸಮೃದ್ಧ ಈ ಪ್ರದೇಶ ಅರ್ಥಪೂರ್ಣ ರಂಗಭೂಮಿಗೆ ಸಿದ್ಧವಾಗಿದೆ’ ಎನ್ನುತ್ತಾರೆ ಅವರು.</p><p>ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳುವಂತೆ, ‘ಶಕೀಲ್ ರಂಗಭೂಮಿಗೆ ಹೊಸ ಆಲೋಚನೆಗಳನ್ನು ತರುವ ಅಪರೂಪದ ಪ್ರತಿಭೆ.’ ಎಸ್. ರಘುನಂದನ ಶಕೀಲ್ ಅವರ ರಾಜಕೀಯ ಜವಾಬ್ದಾರಿ ಮತ್ತು ಭಾಷಾ ಪ್ರಯೋಗವನ್ನು ಶ್ಲಾಘಿಸುತ್ತಾರೆ. ಕುಟುಂಬದ ಬಲ, ತಮ್ಮ ಪ್ರೌಢಶಾಲಾ ಶಿಕ್ಷಕ ರಾಜಶೇಖರ್ ಅವರ ಪ್ರೇರಣೆಯನ್ನು ಸ್ಮರಿಸುತ್ತಾ, ಶಕೀಲ್ ಹೇಳುತ್ತಾರೆ: ‘ಮಾನವೀಯತೆಯನ್ನು ಜೀವಂತವಾಗಿಟ್ಟುಕೊಳ್ಳುವುದು ನನ್ನ ರಂಗಭೂಮಿಯ ಗುರಿ.’</p>.<blockquote><strong>ಅನುವಾದ</strong>: ಅಬ್ದುಲ್ ರಹಿಮಾನ್</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಶಕೀಲ್ ಅಹ್ಮದ್ ತಮ್ಮ ನಾಟಕಗಳಲ್ಲಿ ಪ್ರೇಕ್ಷಕರನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸುವುದಿಲ್ಲ; ಅವರನ್ನು ಚಿಂತನೆಗೆ, ಸಂವಾದಕ್ಕೆ ಹಚ್ಚುತ್ತಾರೆ. ಸಮಾಜದ ಪ್ರಸಕ್ತ ಸಮಸ್ಯೆಗಳಿನ್ನಿಟ್ಟುಕೊಂಡು ನಾಟಕ ಸಿದ್ಧಪಡಿಸುವ ಇವರು ರಂಗಭೂಮಿಗೆ ಹೊಸ ಆಲೋಚನೆಗಳನ್ನು ತರುತ್ತಿದ್ದಾರೆ.</em></blockquote>.<p>ಧಾರವಾಡದಲ್ಲಿ ಶಕೀಲ್ ಅಹ್ಮದ್ ಅವರ ‘ಫಾರ್ ಎ ಬೈಟ್ ಆಫ್ ಫುಡ್’ ಏಕವ್ಯಕ್ತಿ ನಾಟಕ ಪ್ರದರ್ಶನ ಮುಗಿದ ಕ್ಷಣದಲ್ಲೇ ಸಭಾಂಗಣದಲ್ಲಿ ಜೋರಾದ ಕರತಾಡನ ಮೊಳಗಿತು. ಆದರೆ ಆ ಚಪ್ಪಾಳೆಯ ನಂತರ ಏಕಾಏಕಿ ಮೌನ ನೆಲಸಿತು. ನಾಟಕ ಮುಗಿದರೂ ಪ್ರೇಕ್ಷಕರು ತಮ್ಮ ಸ್ಥಾನಗಳಿಂದ ಕದಲಲಿಲ್ಲ. ಕೆಲವೇ ಕ್ಷಣಗಳಲ್ಲಿ ಆ ಮೌನ ಚರ್ಚೆಯಾಗಿ ಮಾರ್ಪಟ್ಟಿತು. ಆಹಾರ ಆಯ್ಕೆಯ ಹಕ್ಕಿನ ಬಗ್ಗೆ ಗಂಭೀರ ಸಂವಾದ ಆರಂಭವಾಯಿತು. ಉತ್ತರ ಪ್ರದೇಶದ ದಾದ್ರಿ ಗುಂಪು ಹತ್ಯೆ ಘಟನೆಯನ್ನು ಆಧರಿಸಿದ ಈ ನಾಟಕ, ಪ್ರೇಕ್ಷಕರ ಮನಸ್ಸಿನಲ್ಲಿ ಅಸಹಜವಾದರೂ ಅಗತ್ಯವಾದ ಪ್ರಶ್ನೆಗಳನ್ನು ಎಸೆದಿತ್ತು. ನಾಟಕದ ನಿಜವಾದ ಯಶಸ್ಸು ಇದೇ.</p><p>ಇಂತಹ ಪ್ರತಿಕ್ರಿಯೆಗಳನ್ನು ಹುಟ್ಟಿಸುವುದು ಶಕೀಲ್ ಅವರ ನಾಟಕಗಳ ವಿಶಿಷ್ಟ ಗುಣ. ನಲ್ವತ್ತು ವರ್ಷದ ಈ ರಂಗಕರ್ಮಿ, ಪ್ರೇಕ್ಷಕರನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸುವುದಿಲ್ಲ; ಅವರನ್ನು ಚಿಂತನೆಗೆ, ಸಂವಾದಕ್ಕೆ ಹಚ್ಚುತ್ತಾರೆ. ಸರ್ಕಾರದ ನೀತಿಗಳು, ಸಾಂಸ್ಕೃತಿಕ ಆಚರಣೆಗಳು, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಕಠಿಣ ಪ್ರಶ್ನೆಗಳನ್ನು ವೇದಿಕೆಯ ಮೇಲೆ ಇಡುವುದು ಅವರ ನಾಟಕಗಳ ಧ್ಯೇಯ. ಅವರ ದೃಷ್ಟಿಯಲ್ಲಿ ರಂಗಭೂಮಿ ಕೇವಲ ಮನರಂಜನೆಯ ವೇದಿಕೆ ಅಲ್ಲ; ಅದು ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಯ ಜೀವಂತ ತಾಣ.</p><p>ತೆರಿಗೆ ಮತ್ತು ಬೆಲೆ ಏರಿಕೆ ಕುರಿತು ‘ಕೊಡಲ್ಲ ಅಂದ್ರೆ ಕೊಡಲ್ಲ’, ಅತೋಲ್ ಫುಗಾರ್ಡ್ ಅವರ ಕೃತಿಯ ಅನುವಾದ ‘ಅನಾಮಿಕನ ಸಾವು’, ಮತ್ತು ಅಡಾಲ್ಫ್ ಹಿಟ್ಲರ್ ಅಧಿಕಾರಾರೋಹಣವನ್ನು ವ್ಯಂಗ್ಯವಾಗಿ ಚಿತ್ರಿಸುವ ‘ತಿಂಡಿಗೆ ಬಂದ ತುಂಡೇರಾಯ’–ಈ ನಾಟಕಗಳು ಅವರ ಚಿಂತನೆಯ ವೈವಿಧ್ಯತೆಯನ್ನು ತೋರಿಸುತ್ತವೆ.</p><p>ಖ್ಯಾತ ರಂಗಕರ್ಮಿ ಮಂಗಳಾ ಎನ್., ‘ಫಾರ್ ಎ ಬೈಟ್ ಆಫ್ ಫುಡ್ ನಾಟಕ ನನ್ನನ್ನು ಹಲವು ತಿಂಗಳು ಕಾಡಿತು. ಆಹಾರದ ಆಯ್ಕೆಯ ಕಾರಣಕ್ಕಾಗಿ ಒಬ್ಬನನ್ನು ಕೊಲ್ಲುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಅದು ನಮ್ಮ ಮುಂದೆ ಇಡುತ್ತದೆ. ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ದೈನಂದಿನ ಆರ್ಥಿಕ ಆತಂಕಗಳನ್ನು ವಿಭಿನ್ನ ಶೈಲಿಯಲ್ಲಿ ತೀಕ್ಷ್ಣವಾಗಿ ವಿಮರ್ಶಿಸುತ್ತದೆ’ ಎನ್ನುತ್ತಾರೆ.</p><p>ಪ್ರೇಕ್ಷಕರಲ್ಲೊಬ್ಬರಾದ ಶಂಕರ ಎನ್.ಕೆ. ಹೇಳುವಂತೆ, ‘ಅನಾಮಿಕನ ಸಾವು ನಾಟಕ ಈಗಿನ ಸನ್ನಿವೇಶಕ್ಕೆ ಬಹಳ ಸೂಕ್ತ. ಎನ್ಆರ್ಸಿ ಹಿನ್ನೆಲೆ, ಗುರುತು ಸಾಬೀತುಪಡಿಸುವ ಭೀತಿ, ಆರ್ಥಿಕ ಶೋಷಣೆ–ಇವುಗಳನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ.’</p><p>ಸಮಾಜದ ಸಂಕೀರ್ಣ ಪ್ರಶ್ನೆಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ರಂಗಕ್ಕೆ ಇಳಿಸುವುದು ಶಕೀಲ್ ಅವರ ಶಕ್ತಿ. 2015ರಲ್ಲಿ ವಿಜಯಪುರ ಜಿಲ್ಲೆಯ ಲೋಣಿ ಬಿ.ಕೆ. ಗ್ರಾಮದಲ್ಲಿ ‘ದಿ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ’ಯನ್ನು ಸ್ಥಾಪಿಸಿದ ಅವರು, ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದ ‘ನಿರ್ದಿಗಂತ’ ಸೇರಿದಂತೆ ಹಲವು ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ದೈಹಿಕ ಚಲನವಲನಗಳಿಗೆ ಪ್ರಾಮುಖ್ಯತೆ ನೀಡುವ ಅವರ ಪ್ರದರ್ಶನ ಶೈಲಿ, ಪಾತ್ರಧಾರಿಗಳನ್ನು ಹೆಚ್ಚು ನೈಜವಾಗಿಸುತ್ತದೆ.</p><p>ತಂಡದ ಸದಸ್ಯ ದಿನೇಶ್ ನಾಯ್ಕ್ ವಿವರಿಸುವಂತೆ, ‘ನಟರ ದೈಹಿಕ ಚಲನವಲನಗಳ ಅಧ್ಯಯನ ಮತ್ತು ಪ್ರಾದೇಶಿಕ ಉಪಭಾಷೆಗಳ ಬಳಕೆಯಿಂದ ತಾಲೀಮು ಆರಂಭವಾಗುತ್ತದೆ. ಕಠಿಣ ದೈಹಿಕ ತರಬೇತಿ ಅವರ ಅಭಿನಯವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.’</p><p>ಮೂಕಾಭಿನಯ, ತೈ ಚಿ (ಚೀನಾದ ಸಮರ ಕಲೆ) ಮತ್ತು ಇತರ ರಂಗ ಅಂಶಗಳನ್ನು ಸಂಯೋಜಿಸುವ ಮೂಲಕ, ಕಲಾವಿದರು ಅಮೂರ್ತ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವಂತೆ ಶಕೀಲ್ ರೂಪಿಸುತ್ತಾರೆ.</p><p>ನಟ ವಿಶಾಲ್ ಅವರ ಪ್ರಕಾರ, ‘ಈ ವಿಧಾನಗಳು ಉಸಿರಾಟ ನಿಯಂತ್ರಣ ಮತ್ತು ದೈಹಿಕ ಸಮತೋಲನಕ್ಕೂ ಸಹಕಾರಿಯಾಗುತ್ತವೆ.’</p><p>ಆದರೆ, ಕೋಮು ಮತ್ತು ರಾಜಕೀಯವಾಗಿ ಸೂಕ್ಷ್ಮ ವಿಷಯಗಳನ್ನು ಹೇಳುವುದರಿಂದ ಪ್ರತಿರೋಧವೂ ಎದುರಾಗುತ್ತದೆ. ‘ಕೆಲವೆಡೆ ನಾಟಕದ ಪೋಸ್ಟರ್ಗಳನ್ನು ಕಿತ್ತುಹಾಕಲಾಗಿದೆ. ಕೆಲವೆಡೆ ಪ್ರದರ್ಶನದ ನಂತರ ಗಲಾಟೆಗಳು ನಡೆದಿವೆ’ ಎಂದು ಶಕೀಲ್ ನೆನಪಿಸಿಕೊಳ್ಳುತ್ತಾರೆ. ಆದರೂ ಅವರು ಸುಮ್ಮನಿಲ್ಲ. ‘ಪ್ರಜಾಪ್ರಭುತ್ವಕ್ಕೆ ಮೌನವಲ್ಲ, ಬೌದ್ಧಿಕ ಸಂವಾದವೇ ಅಗತ್ಯ’ ಎನ್ನುವುದು ಅವರ ನಿಲುವು.</p><p><strong>ವೇದಿಕೆಯಾಚೆಯ ಸಂವಾದ</strong></p><p>ಶಕೀಲ್ ಅವರ ಸಂವಾದ ಕೇವಲ ವೇದಿಕೆಗೆ ಸೀಮಿತವಾಗಿಲ್ಲ. ಕಾಲೇಜುಗಳಲ್ಲಿ ಪ್ರದರ್ಶನ ನೀಡಿದ ನಂತರ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುವುದು ಅವರ ಅಭ್ಯಾಸ. ‘ವಿದ್ಯಾರ್ಥಿಗಳು ತಮ್ಮ ನಾಗರಿಕ ಹಕ್ಕುಗಳನ್ನು ಅರಿತುಕೊಳ್ಳಬೇಕು, ಪ್ರಶ್ನಿಸುವುದನ್ನು ಕಲಿಯಬೇಕು. ಅವರೇ ಪ್ರಜಾಪ್ರಭುತ್ವದ ಭವಿಷ್ಯ’ ಎಂದು ಅವರು ಹೇಳುತ್ತಾರೆ.</p><p>ಶಕೀಲ್, ಬಾಲ್ಯದಲ್ಲೇ ರಂಗಭೂಮಿಯತ್ತ ಆಕರ್ಷಿತರಾದರು. ಶಾಲಾ ನಾಟಕಗಳು ಅವರ ಮೊದಲ ಪಾಠಶಾಲೆ. ಪಿಯುಸಿ ಓದುವಾಗ ಇಂಗ್ಲಿಷ್ ಮೇಲಿನ ಹಿಡಿತದ ಕೊರತೆಯಿಂದ ಆತ್ಮವಿಶ್ವಾಸ ಕುಂದಿದರೂ, ಅದೇ ಅವಧಿಯಲ್ಲಿ ಅವರು ರಂಗಭೂಮಿಯತ್ತ ಮುಖ ಮಾಡಿದರು. ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಸೇರುವ ಕನಸು ಸಾಧ್ಯವಾಗದಿದ್ದರೂ, ಮೈಸೂರಿನ ರಂಗ ಸಂಸ್ಕೃತಿ ಅವರನ್ನು ಬೆಳೆಸಿತು. ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ ‘ನೀನಾಸಂ’ನಲ್ಲಿ ರಂಗ ಶಿಕ್ಷಣ ಪಡೆದ ಅವರು, 2011ರಲ್ಲಿ ಪೂರ್ಣಾವಧಿ ರಂಗಭೂಮಿಗೆ ಕಾಲಿಟ್ಟರು.</p><p>ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯಲ್ಲೂ ತರಬೇತಿ ಪಡೆದ ಅವರು, ನಂತರ ಸಿಂಗಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ನಲ್ಲಿ ಏಷ್ಯನ್ ರಂಗ ಪ್ರಕಾರಗಳನ್ನು ಅಧ್ಯಯನ ಮಾಡಿದರು. ‘ನೀನಾಸಂ ರಂಗಭೂಮಿಯ ವ್ಯಾಕರಣ ಕಲಿಸಿದರೆ, ಸಿಂಗಪುರದ ಅನುಭವ ದೇಹಭಾಷೆಯ ಮಹತ್ವ ತಿಳಿಸಿತು’ ಎಂದು ಅವರು ಹೇಳುತ್ತಾರೆ.</p><p>ಕೆಂಟ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಶಕೀಲ್, ರಂಗಾಯಣ, ಸಾಣೇಹಳ್ಳಿ ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಂತಹ ಸಂಸ್ಥೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ ವಿಶ್ವದಾದ್ಯಂತ ಪ್ರದರ್ಶನ ನೀಡಿದ್ದರೂ, ಅವರ ಗಮನ ಮಾತ್ರ ಉತ್ತರ ಕರ್ನಾಟಕದ ಹಳ್ಳಿಗಳ ಮೇಲಿದೆ. ‘ಜಾನಪದ ಸಂಸ್ಕೃತಿಯಿಂದ ಸಮೃದ್ಧ ಈ ಪ್ರದೇಶ ಅರ್ಥಪೂರ್ಣ ರಂಗಭೂಮಿಗೆ ಸಿದ್ಧವಾಗಿದೆ’ ಎನ್ನುತ್ತಾರೆ ಅವರು.</p><p>ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳುವಂತೆ, ‘ಶಕೀಲ್ ರಂಗಭೂಮಿಗೆ ಹೊಸ ಆಲೋಚನೆಗಳನ್ನು ತರುವ ಅಪರೂಪದ ಪ್ರತಿಭೆ.’ ಎಸ್. ರಘುನಂದನ ಶಕೀಲ್ ಅವರ ರಾಜಕೀಯ ಜವಾಬ್ದಾರಿ ಮತ್ತು ಭಾಷಾ ಪ್ರಯೋಗವನ್ನು ಶ್ಲಾಘಿಸುತ್ತಾರೆ. ಕುಟುಂಬದ ಬಲ, ತಮ್ಮ ಪ್ರೌಢಶಾಲಾ ಶಿಕ್ಷಕ ರಾಜಶೇಖರ್ ಅವರ ಪ್ರೇರಣೆಯನ್ನು ಸ್ಮರಿಸುತ್ತಾ, ಶಕೀಲ್ ಹೇಳುತ್ತಾರೆ: ‘ಮಾನವೀಯತೆಯನ್ನು ಜೀವಂತವಾಗಿಟ್ಟುಕೊಳ್ಳುವುದು ನನ್ನ ರಂಗಭೂಮಿಯ ಗುರಿ.’</p>.<blockquote><strong>ಅನುವಾದ</strong>: ಅಬ್ದುಲ್ ರಹಿಮಾನ್</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>