ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಬಾಷಾ ಜ್ಞಾನ

Last Updated 25 ಏಪ್ರಿಲ್ 2019, 12:38 IST
ಅಕ್ಷರ ಗಾತ್ರ

ಸ್ನೇಹಾ ಈಶ್ವರ್‌ ಸ್ಟಾರ್‌ ಸುವರ್ಣದ ಮೌನರಾಗದ ಸಿಂಧು ಅವರ ಸಂದರ್ಶನವಿದು.

* ಪಾತ್ರ ಹೇಗೆನಿಸುತ್ತಿದೆ?

ಸಿಂಧೂ ಓದು– ಬರಹವನ್ನು ಅರಿತಿಲ್ಲ. ಆಧುನಿಕ ತಿಳಿವಳಿಕೆ ಅಷ್ಟು ಇಲ್ಲದಿದ್ದರೂ ತನ್ನ ಒಡಲ ಕನಸಿಗೆ ಆದರ್ಶವಾಗಿ ಮೆರೆಯುವುದು ಆಕೆಯ ಹೆಚ್ಚುಗಾರಿಕೆಯೇ ಸರಿ. ಹಳ್ಳಿ ಹುಡುಗಿಯ ಮುಗ್ಧತೆ ಆಕೆಯಲ್ಲಿ ಸಹಜವಾಗಿ ಕಾಣಿಸುತ್ತದೆ. ತನ್ನ ಗಂಡ ಹಾಗೂ ಅತ್ತೆ ಮಾತನ್ನೂ ಮೀರುವುದಿಲ್ಲ. ಅವರ ಆಣತೆಯಂತೆಯೇ ಬದುಕುತ್ತಾಳೆ. ಆದರೆ, ಅವರ ಕುಟುಂಬಕ್ಕೆ ಗಂಡು ಸಂತಾನದ ಮೋಹ ಹೆಚ್ಚಿರುತ್ತದೆ. ಆಕೆ ಮಾತ್ರ ತಾನು ಹೆತ್ತ ಹೆಣ್ಣು ಶಿಶುವನ್ನು ಕಾಪಾಡುತ್ತಾಳೆ. ತನ್ನ ಗಂಡನ ಮನಸ್ಸನ್ನು ಓಲೈಕೆ ಮಾಡುವ ಪ್ರಯತ್ನ ಮಾಡುತ್ತಾಳೆ. ಆಕೆ ತನ್ನ ಮಗುವನ್ನು ಪೊರೆಯುವ ಬಯಕೆ ಕುಟುಂಬದ ವಿರೋಧದ ಸಂಘರ್ಷ ದೀರ್ಘಕಾಲ ನಡೆಯುತ್ತದೆ. ನಿಜಕ್ಕೂ ಕಥೆಯ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಇಂತಹ ಪಾತ್ರವನ್ನು ನಾನು ಮೆಚ್ಚಿ ಒಪ್ಪಿಕೊಂಡಿದ್ದೇನೆ. ಜಗತ್ತಿನ ಎಲ್ಲಾ ಗಂಡಿಗೂ ಜನ್ಮ ನೀಡಿದ್ದು ಒಬ್ಬ ಹೆಣ್ಣೇ ಅಲ್ವಾ? ಅಂತಹ ಜನ್ಮದಾತೆಯನ್ನು ಮಗಳಾಗಿ ನಿರಾಕರಿಸುವ ಮನೋಸ್ಥಿತಿ ಈಗಲೂ ಇದೆ. ಅಂತಹವರ ವಿರುದ್ಧ ಸಿಂಧೂ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ.

* ವೃತ್ತಿಯಾಗಿ ಆರಂಭವಾಗಿದ್ದು ಹೇಗೆ?

ನಾನು ಪಿಯು ಓದುವ ಹಂತದಲ್ಲಿ ಹರೆಯದ ಮೊಡವೆಯಂತೆ ನಟನೆಯ ಬಯಕೆ ಮನದಲ್ಲಿ ಮೂಡಿ ಮಾಯವಾಗಿತ್ತು. ಆ ಬಗ್ಗೆ ಯಾವ ಪ್ರಯತ್ನವನ್ನೂ ಮಾಡದೆ ನನ್ನ ಪಾಡಿಗೆ ನಾನಿದ್ದೆ. ನನ್ನ ತಂದೆಯ ಸ್ನೇಹಿತರಾದ ಶ್ರೀಶೈಲನ್‌ ಒಮ್ಮೆ ಅಭಿನಯಿಸುವ ಬಗ್ಗೆ ಪ್ರಸ್ತಾಪಿಸಿದರು. ಬಹುಶಃ 2000 ಇಸ್ವಿ ಅನ್ನಿಸುತ್ತೆ. ಚಂದನದ ‘ಹೊಂಗಿರಣ’ದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದೆ. ನನಗೆ ಏನಾಗಬೇಕು ಎನ್ನುವ ಬಗ್ಗೆ ಯಾವ ನಿಖರತೆಯೂ ಇರಲಿಲ್ಲ. ನನ್ನ ತಂದೆಗೆ ಲಾಯರ್‌ ಮಾಡುವ ಬಯಕೆ ಇತ್ತು.

ನನ್ನ ಅಪ್ಪ ಎಂ.ವಿ.ಜಿ. ನಂಬಿಯಾರ್‌ ಶಿಕ್ಷಕರಾಗಿದ್ದರು. ಅವರು ನನ್ನನ್ನು ವಕೀಲಳನ್ನಾಗಿ ರೂಪಿಸಬೇಕಿತ್ತು. ಆಗಾಗ ಮಾಡುತ್ತಿದ್ದವಳಿಗೆ ಇದೇ ಸರಿಯಾದ ವೃತ್ತಿ ಎಂದೆನಿಸಿತು. ಅದಕ್ಕೆ ಅಪ್ಪ ಅಮ್ಮ ಎಲ್ಲರೂ ಒ‍ಪ್ಪಿದರು. ತಾಯಿ ಪ್ರಸನ್ನಾ ನಂಬಿಯಾರ್‌ ಗೃಹಿಣಿ. ಮಾತೃಭಾಷೆ ಮಲೆಯಾಳಂ ಆಗಿದ್ದರೂ ನನಗೆ ತೆಲುಗು, ತಮಿಳು, ಕನ್ನಡ ಚೆನ್ನಾಗಿ ಬರುತ್ತದೆ. ಹಾಗಾಗಿ ತಮಿಳು– ತೆಲುಗಿನಲ್ಲಿ ತುಂಬಾ ಧಾರಾವಾಹಿಗಳನ್ನು ನಿರ್ವಹಿಸಿದೆ. ಹಲವು ವರ್ಷ ಚೆನ್ನೈಯಲ್ಲೇ ಮನೆಮಾಡಿಕೊಂಡು ಉಳಿದಿದ್ದೆ.

* ವೃತ್ತಿ ಜೀವನವನ್ನು ನೆನಪಿಸಿಕೊಳ್ಳುವುದಾದರೆ?

ನಾನು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ಅಷ್ಟೊಂದು ಬಂಧು ಬಳಗವೂ ಇಲ್ಲಿ ನನಗೆ ಇರಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ಮಧ್ಯದಲ್ಲಿ ಬಿಡುವು ತೆಗೆದುಕೊಳ್ಳುತ್ತಿದ್ದೆ. ಭಾಷಾ ಶುದ್ಧತೆ ಚೆನ್ನಾಗಿದ್ದಿದ್ದರಿಂದ ಅವಕಾಶಗಳು ಹೆಚ್ಚಾಗಿಯೇ ಸಿಕ್ಕಿವೆ. ಆರ್ಥಿಕ ಸ್ಥಿತಿಗತಿ ಸೇರಿದಂತೆ ಸಾಮಾಜಿಕ ಮನ್ನಣೆಯೂ ಸಿಕ್ಕಿದೆ. ಎಲ್ಲೇ ಹೋದರು ನಾಲ್ಕಾರು ಜನ ನನ್ನನ್ನು ಗುರುತಿಸುತ್ತಾರೆ ಎಂದರೆ ಅದಕ್ಕೆ ನನ್ನ ಬಣ್ಣದ ಹಾದಿಯ ಪಯಣವೇ ಕಾರಣ. ನನ್ನ ಜನಪ್ರಿಯಂತೆಯನ್ನು ಕೊಂಡಾಡುವ ಪತಿ, ತಂದೆ–ತಾಯಿ ಪ್ರೋತ್ಸಾಹ ಇದಕ್ಕೆಲ್ಲಾ ಕಾರಣ.

* ಮುಜುಗರವನ್ನು ಉಂಟು ಮಾಡಿದ ಸಂದರ್ಭಗಳು ಇವೆಯಾ?

ಟಿವಿಯಲ್ಲಿ ಅಂತಹ ಅನುಭವ ಇಲ್ಲವೇ ಇಲ್ಲ. ದೀರ್ಘಕಾಲ ಒಂದೇ ವಾತಾವರಣ, ಒಂದೇ ಕಥೆಯಲ್ಲಿ ತೊಡಗಿರುವುದರಿಂದ ಬಹುತೇಕ ಎಲ್ಲರಲ್ಲೂ ಅನೋನ್ಯತೆ ಬಂದಿರುತ್ತದೆ. ಒಂದೇ ಕುಟುಂಬದವರಂತೆ ಅನ್ನಿಸಿಬಿಡುತ್ತದೆ. ಸಿನಿಮಾದಲ್ಲಿ ಆ ರೀತಿ ನನಗೇಕೋ ಅನ್ನಿಸಿಲ್ಲ. ಅದೇ ಕಾರಣಕ್ಕೋ ಏನೋ ಕಿರುತೆರೆಯೇ ನನಗೆ ಚೆಂದ ಅನ್ನಿಸಿದೆ. ಸಿನಿಮಾದಲ್ಲಿ ಅಷ್ಟು ಇಷ್ಟಪಡುವುದಿಲ್ಲ.

*ಪಾತ್ರದ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತೀರಿ?

ಸಿಂಧೂವಿನಂತಹ ಪಾತ್ರಗಳೇ ನನಗೆ ಇಷ್ಟ. ‘ಜೀವನ್ಮುಖಿ’ ‘ಉಯ್ಯಾಲೆ’ಯಲ್ಲಿ ಇರುವಂತಹ ಕೌಟುಂಬಿಕ ವಾತಾವರಣವನ್ನು ಪೋಷಿಸುವ ಪಾತ್ರಗಳೇ ನನಗಿರಬೇಕು ಎಂದು ಅನ್ನಿಸುತ್ತದೆ. ನನ್ನ ಮನೋಸ್ಥಿತಿ ಕಾರಣಕ್ಕೋ, ಏನೋ ನನಗೆ ನೆಗೆಟಿವ್‌ ಪಾತ್ರಗಳು ಇಷ್ಟ ಆಗುವುದಿಲ್ಲ. ಅಂತಹ ಅವಕಾಶಗಳನ್ನು ಸಾಕಷ್ಟು ನಿರಾಕರಿಸಿದ್ದೇನೆ. ‘ಮೌನರಾಗ’ದಲ್ಲಿ ಆದರ್ಶ ಗುಣಗಳ ಪಾತ್ರ ದೀರ್ಘಕಾಲದ ಬಿಡುವಿನ ನಂತರ ನಟಿಸಲು ಪ್ರೇರಣೆಯಾಗಿದೆ. ನನ್ನ ತಂದೆಯವರ ಜೊತೆ ಸೇರಿ ಒಂದು ಶಾಲೆಯನ್ನು ನಡೆಸುತ್ತಿದ್ದೇನೆ. ಅದರ ಕೆಲಸವೂ ಇರುವುದರಿಂದ ಎರಡು ವರ್ಷ ನಟನೆಯತ್ತ ಮುಖವನ್ನೇ ತೋರಿಸಿರಲಿಲ್ಲ. ನನ್ನ ತಂದೆಗೆ ತೆರೆಯಲ್ಲಿ ತನ್ನ ಮಗಳನ್ನು ಕಾಣಬೇಕು ಎನ್ನುವ ಬಯಕೆ ಕೂಡ ಮತ್ತೆ ಮತ್ತೆ ನಾನು ನಟಿಸಲು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT