ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌Big Boss 8: ನಾಯಕನಾದ ಮಂಜು, ಆರು ಜನರಲ್ಲಿ ಈ ವಾರ ಯಾರು ಹೊರಕ್ಕೆ?

Last Updated 3 ಏಪ್ರಿಲ್ 2021, 9:04 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯ 33ನೇ ದಿನ ಮನೆಯ ನೆಚ್ಚಿನ ಸ್ಪರ್ಧಿ ಮಂಜು ಪಾವಗಡ ಐದನೇ ವಾರದ ನಾಯಕನ ಪಟ್ಟ ಗಿಟ್ಟಿಸಿದ್ದಾರೆ. ಇನ್ನೂ, ವೈಷ್ಣವಿಯನ್ನು ನೀರಿಗೆ ತಳ್ಳಿ, ಮನೆಯ ಬಹುತೇಕ ಸದಸ್ಯರ ಸಿಟ್ಟಿಗೆ ಗುರಿಯಾಗಿದ್ದ ಶಂಕರ್ ಅಶ್ವತ್ಥ್ ಕಳಪೆ ಪಟ್ಟ ಹೊತ್ತು, ಜೈಲು ಸೇರಿದ್ದಾರೆ.

ಕೊನೆಗೂ ನಾಯಕನಾದ ಮಂಜು: ಮನೆಯ ಟಾಸ್ಕ್‌ಗಳಲ್ಲಿ ತಮ್ಮ ಜೊತೆಗಿದ್ದವರನ್ನು ಅತ್ಯುತ್ತಮವಾಗಿ ಲೀಡ್ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿರುವ ಮಂಜು ಪಾವಗಡ ಅವರಿಗೆ ನಾಯಕನ ಪಟ್ಟ ಮಾತ್ರ ಸಿಕ್ಕಿರಲಿಲ್ಲ. ಈ ವಾರ ಆ ಸ್ಥಾನವೂ ಅವರ ಕೈಸೇರಿದೆ. ಹಲಗೆ ಮೇಲೆ ಪ್ಲೇಟ್ ಮತ್ತು ಕಪ್ ಜೋಡಿಸುವ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಎಲ್ಲರಿಗಿಂತ ಹೆಚ್ಚು ಏಕಾಗ್ರತೆ ಕಾಯ್ದುಕೊಂಡ ಮಂಜು, ಗೆಲುವು ಸಾಧಿಸುವ ಮೂಲಕ ನಾಯಕನ ಪಟ್ಟಕೇರಿದ್ದಾರೆ.

ನಾಯಕನಿಗೆ ಸವಾಲ್: ಈ ಮಧ್ಯೆ, ಮಂಜು ನಾಯಕನಾಗಿ ಆಯ್ಕೆಯಾದಾಗ ಪ್ರಶಂಸೆ ಮಾಡಿದ್ದ ಚಕ್ರವರ್ತಿ ಚಂದ್ರಚೂಡ್, ತಡರಾತ್ರಿವರೆಗೆ ಮಂಜು ಎಲ್ಲರ ಜೊತೆ ಕಾಮಿಡಿ ಮಾಡುತ್ತಾ ಮಲಗುವುದಕ್ಕೆ ತೊಂದರೆ ಮಾಡಿದನೆಂದು ಗರಂ ಆಗಿದ್ದಾರೆ. ನಡುರಾತ್ರಿವರೆಗೆ ಸ್ಪರ್ಧಿಗಳಾದ ಶುಭಾ ಪೂಂಜಾ, ನಿಧಿ, ವಿಶ್ವನಾಥ್ ಜೊತೆ ಮಂಜು ಮಾತನಾಡುತ್ತಿದ್ದರಿಂದ ಬೇಸರಗೊಂಡ ಚಂದ್ರಚೂಡ್, ದಿಂಬು, ಬೆಡ್ ಶೀಟ್ ತೆಗೆದುಕೊಂಡು ಲಿವಿಂಗ್ ಏರಿಯಾಗೆ ಬಂದು ಸೋಫಾ ಮೇಲೆ ಮಲಗಿದರು. ಇದನ್ನು ನೋಡಿದ ಶುಭಾ, ನಮ್ಮದು ತಪ್ಪಾಯಿತು. ಬೆಡ್ ರೂಮಲ್ಲಿ ಮಲಗಿ ಎಂದು ಕೇಳಿಕೊಂಡರು. ಈ ಸಂದರ್ಭ, ನೀವು ಏಕೆ ಕ್ಷಮೆ ಕೇಳ್ತಿದ್ದೀರಿ? ತಪ್ಪು ಮಾಡಿರುವುದು ನಾಯಕ ಮಂಜು. ಅವನೇ ಬರಲಿ ಎಂದು ಹಠ ಹಿಡಿದರು. ಸ್ವಲ್ಪ ಸಮಯದ ಬಳಿಕ, ಸರಿ ಬರುತ್ತೇನೆ. ಆದರೆ ಅವನನ್ನು ಮಾತ್ರ ಬಿಡೋದಿಲ್ಲ. ಬುದ್ಧಿ ಕಲಿಸುತ್ತೇನೆ ಎಂದಿದ್ದಾರೆ.

ಜೈಲು ಸೇರಿದ ಶಂಕರ್ ಅಶ್ವತ್ಥ್: ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ಟೂಲ್ ಮೇಲೆ ನಿಲ್ಲುವ ಕ್ಯಾಪ್ಟನ್ಸಿ ಕಂಟೆಂಡರ್ ಟಾಸ್ಕ್ ವೇಳೆ ವೈಷ್ಣವಿಯನ್ನು ನೀರಿಗೆ ತಳ್ಳಿ ಮನೆ ಮಂದಿಗೆ ಶಾಕ್ ನೀಡಿದ್ದ ಶಂಕರ್ ಅಶ್ವತ್ಥ್ ಕಳಪೆ ಪಟ್ಟ ಹೊತ್ತುಕೊಂಡಿದ್ದಾರೆ. 24 ಗಂಟೆ ನೀರಿನಲ್ಲಿ ಸ್ಟೂಲ್ ಮೇಲೆ ನಿಂತಿದ್ದ ಹೆಣ್ಮಕ್ಕಳನ್ನು ಹೊರತರುವ ಅವರ ಉದ್ಧೇಶ ಒಳ್ಳೆಯದೇ ಆಗಿತ್ತಾದರೂ ಅವರು ಆಯ್ದುಕೊಂಡ ಮಾರ್ಗ ಸರಿಯಾಗಿರಲಿಲ್ಲ. ಬಟ್ಟೆಯಿಂದ ಅವರನ್ನು ಎಳೆಯಬಹುದಿತ್ತು. ಅದನ್ನು ಬಿಟ್ಟು, ವೈಷ್ಣವಿ ಅವರ ಮೇಲೆ ಜಿಗಿದಿದ್ದು ಸರಿಯಲ್ಲ. ಸ್ವಲ್ಪ ಯಾಮಾರಿದ್ದರೂ ಇಬ್ಬರಿಗೂ ತುಂಬಾ ಗಾಯವಾಗುವ ಸಾಧ್ಯತೆ ಇತ್ತು ಎಂದು ಮನೆಯ ಸದಸ್ಯರು ಅಭಿಪ್ರಾಯಪಟ್ಟರು. ಹೀಗಾಗಿ, ಬಹುತೇಕರು ಅವರ ಹೆಸರನ್ನು ಕಳಪೆ ಪಟ್ಟಕ್ಕೆ ಸೂಚಿಸಿದರು.

ಇನ್ನೂ, ಸ್ವಿಮ್ಮಿಂಗ್ ಪೂಲ್‌ ಟಾಸ್ಕ್ ವೇಳೆ ಎದುರಾಳಿ ತಂಡದ ಹಿಂಸೆಗೆ ಜಗ್ಗದೆ ನಿಂತಿದ್ದ ದಿವ್ಯಾ ಸುರೇಶ್ ಬೆಸ್ಟ್ ಪರ್ಫಾಮರ್ ಆದರು. 11 ಸ್ಪರ್ಧಿಗಳು ದಿವ್ಯಾ ಸುರೇಶ್ ಅವರ ಹೆಸರು ಸೂಚಿಸಿದ್ದು, ವಿಶೇಷವಾಗಿತ್ತು.

ಈ ವಾರ ಯಾರು ಹೊರಕ್ಕೆ?: ಬಿಗ್ ಬಾಸ್ ಮನೆಯ ಐದನೇ ವಾರ ಆರು ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಶಂಕರ್ ಅಶ್ವತ್ಥ್, ಶಮಂತ್, ಪ್ರಶಾಂತ್ ಸಂಬರಗಿ, ಅರವಿಂದ್, ನಿಧಿ ಸುಬ್ಬಯ್ಯ ಮತ್ತು ಶುಭಾ ಫೂಂಜಾ ಅವರು ಈ ಪಟ್ಟಿಯಲ್ಲಿದ್ದಾರೆ. ದಿವ್ಯಾ ಸುರೇಶ್ ಅವರ ಹೆಸರು ಸಹ ನಾಮಿನೇಟ್ ಆಗಿತ್ತಾದರೂ ನಾಯಕ ವಿಶ್ವನಾಥ್ ವಿಶೇಷ ಅಧಿಕಾರ ಬಳಸಿ ಅವರನ್ನು ಸೇಫ್ ಮಾಡಿದ್ದಾರೆ. ಉಳಿದ ಆರು ಮಂದಿಯಲ್ಲಿ ಒಬ್ಬರು ಪ್ರೇಕ್ಷಕರ ಮತಗಳ ಆಧಾರದ ಮೇಲೆ ಮನೆ ಬಿಡಬೇಕಾಗುತ್ತದೆ.

ಶನಿವಾರ ಮತ್ತು ಭಾನುವಾರದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ಗಳಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT