ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ 8ನೇ ಆವೃತ್ತಿಗೆ ಜೋಯಿಸರಾಗಿ ಬಂದ ನಟ ಕಿಚ್ಚ ಸುದೀಪ್ ಮುಹೂರ್ತ ನಿಗದಿಗೊಳಿಸಿದ್ದರು. ಫೆ.28ರಿಂದ ಆರಂಭವಾಗಲಿರುವ ಈ ಬಾರಿಯ ಬಿಗ್ಬಾಸ್ನಲ್ಲಿ ಜನಸಾಮಾನ್ಯರು ಇರುವುದಿಲ್ಲ, ಬದಲಾಗಿ ಇದು ಸೆಲೆಬ್ರೆಟಿ ಸೀಸನ್, ರಾಜಕೀಯ ನಾಯಕರೊಬ್ಬರು ಮನೆ ಪ್ರವೇಶಿಸಲಿದ್ದಾರೆ ಎಂದು ‘ವಯಕಾಂ18’ ಕನ್ನಡ ಕ್ಲಸ್ಟರ್ ಬಿಸಿನೆಸ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ತಿಳಿಸಿದರು.
ನಟ ಕಿಚ್ಚ ಸುದೀಪ್ 8ನೇ ಆವೃತ್ತಿಯ ಹ್ಯಾಷ್ಟ್ಯಾಗ್ ಬಿಡುಗಡೆಗೊಳಿಸಿದರು. ‘ಈ ಬಾರಿ 17 ಜನ ಸ್ಪರ್ಧಿಗಳಿದ್ದು, ಸದ್ಯಕ್ಕೆ ಎಲ್ಲರೂ ಕ್ವಾರಂಟೈನ್ನಲ್ಲಿ ಇದ್ದಾರೆ. ಇವರಿಗೆ ಮೂರು ಬಾರಿ ಆರ್ಟಿಪಿಸಿಆರ್ ಪರೀಕ್ಷೆಯಾಗಿದೆ. ಕೊನೆಯ ಪರೀಕ್ಷೆಯಲ್ಲಿ ಯಾರಿಗಾದರೂ ಕೋವಿಡ್ ದೃಢಪಟ್ಟಲ್ಲಿ ಅವರು ಹೊರಹೋಗಲಿದ್ದಾರೆ. ಈ ಬಾರಿ ಕ್ವಾರಂಟೈನ್ ಆಗದೇ ಯಾರಿಗೂ ಮನೆ ಒಳಗೆ ಪ್ರವೇಶವಿಲ್ಲ. ಹೀಗಾಗಿ ಈ ಹಿಂದಿನಂತೆ ವಿಶೇಷ ಅತಿಥಿಗಳು ಮನೆ ಪ್ರತಿ ವಾರ ಮನೆ ಒಳಗೆ ಹೋಗುವುದು ಅನುಮಾನ. ಈ ಬಾರಿ ಲಾಕ್ಡೌನ್ ವಿಷಯಾಧಾರಿತವಾಗಿ ಬಿಗ್ಬಾಸ್ ನಡೆಯಲಿದೆ’ ಎಂದರು.
ರಾಜಕಿಯದವರು ಇದ್ದಾರಾ?
ಸ್ಪರ್ಧಿಗಳಲ್ಲಿ ರಾಜಕೀಯ ನಾಯಕರೊಬ್ಬರು ಇರುತ್ತಾರೆ ಎಂದು ಗುಂಡ್ಕಲ್ ಅವರು ಹೇಳಿದಾಕ್ಷಣ, ಒಂದು ಕ್ಷಣ ಅಚ್ಚರಿಗೊಂಡ ಸುದೀಪ್, ‘ರಾಜಕೀಯದೋರು ಇರ್ತಾರ? ನಾನೇನಾದ್ರೂ ಅವರಿಗೆ ಹೇಳಿದರೆ ಸಮಸ್ಯೆ ಆಗೋದಿಲ್ಲ ತಾನೆ. ರಾಜಕೀಯದವರು ಬಂದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಇರೋರೆ ಬಂದರೆ ಬೆಸ್ಟ್’ ಎಂದರು.
ಕೈಎತ್ತದೇ ಇದ್ರೆ ಹುಚ್ಚ ವೆಂಕಟ್ ಗೆಲ್ಲುತ್ತಿದ್ರು
ಹಿಂದಿನ ಆವೃತ್ತಿಗಳನ್ನು ಮೆಲುಕು ಹಾಕಿದ ಸುದೀಪ್, ‘ಮೊದಲ ಆವೃತ್ತಿ ಆರಂಭವಾದಾಗ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯವಿತ್ತು. ಹೀಗೆ ಎಂಟನೇ ಆವೃತ್ತಿಗೆ ಬಂದಿದ್ದೇವೆ. ಕೈ ಎತ್ತದೇ ಇದ್ದಿದ್ದರೆ ಹುಚ್ಚ ವೆಂಕಟ್ ಗೆಲ್ಲುತ್ತಿದ್ದರು. ಅವರಿಗೆ ಅಷ್ಟು ಮತಗಳನ್ನು ಜನ ನೀಡಿದ್ದರು. ಇನ್ನು ಆರನೇ ಆವೃತ್ತಿ ಸಂದರ್ಭದಲ್ಲಿ ಸಾಕಪ್ಪ ಸಾಕು ಎಂದೆನಿಸಿತ್ತು. ನನಗೂ ಬಿಗ್ಬಾಸ್ ಮನೆ ಒಳಗೆ ಹೋಗೋ ಆಸೆ ಇದೆ. ಆದರೆ ನನ್ನ ಪೇಮೆಂಟ್ ಅನ್ನು ಕಲರ್ಸ್ ಕನ್ನಡದವರಿಗೆ ನಿಭಾಯಿಸಲು ಸಾಧ್ಯವೇ ಎನ್ನುವುದು ಮುಖ್ಯ. ನಟರೆಲ್ಲರೂ ಬಿಗ್ಬಾಸ್ ಮನೆ ಒಳಗೆ ಸೇರಿಕೊಂಡರೆ ಹೇಗಿರುತ್ತದೆ ಎನ್ನುವ ಕಲ್ಪನೆ ಅದ್ಭುತ. ಆದರೆ ಬೀಗ ಹಾಕಬೇಕಾದೀತು’ ಎಂದು ಮುಗುಳ್ನಕ್ಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.