ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 53ನೇ ದಿನ ಮತ್ತೆ ಗದ್ದಲ, ಕೋಲಾಹಲ ಆರಂಭವಾಗಿದೆ. ಬಿಗ್ ಬಾಸ್ ಹೇಳಿದ ಮಾತೊಂದು ಮನೆಯಲ್ಲಿ ಜಗಳಕ್ಕೆ ಎಡೆಮಾಡಿದ್ದು, ಚಕ್ರವರ್ತಿ ಚಂದ್ರಚೂಡ್, ನಟಿ ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್ ಸಂಬರಗಿ ನಡುವೆ ಮಾತಿನ ಚಕಮಕಿ ನಡೆದಿದೆ. ನಿಧಿ ಮತ್ತು ಪ್ರಶಾಂತ್ ಪರಸ್ಪರ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸಿಕೊಂಡಿದ್ದಾರೆ.
ಜಗಳಕ್ಕೆ ನಾಂದಿ ಹಾಡಿದ ಬಿಗ್ ಬಾಸ್ ಮಾತು: ಮನೆಯ ಸದಸ್ಯರು ಅಡುಗೆ ಅನಿಲ ಪಡೆದುಕೊಳ್ಳಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಈ ವೇಳೆ, ಅರವಿಂದ್, ಮಂಜು ಮತ್ತು ರಾಜೀವ್ ಟಾಸ್ಕ್ನಲ್ಲಿ ಭಾಗವಹಿಸಿ ಗೆದ್ದರು. ಇದಕ್ಕೂ ಮುನ್ನ, ತನ್ನನ್ನು ಪರಿಗಣಿಸದ ಬಗ್ಗೆ ರಾಘವೇಂದ್ರ ಅವರು ಅಸಮಾಧಾನ ಹೊರಹಾಕಿದರು. ಇತ್ತ, ಮಂಜು, ಅರವಿಂದ್ ಮತ್ತು ರಾಜೀವ್ ಉತ್ತಮ ಸ್ಟಾಮಿನ ಹೊಂದಿರುವುದರಿಂದ ಸ್ಪಾಂಜ್ ಟಾಸ್ಕ್ ಆಡಲು ಅವರೇ ಸೂಕ್ತ ಎಂದು ಮನೆಯ ಬಹುತೇಕ ಸದಸ್ಯರು ನಿರ್ಧರಿಸಿದ್ದರು.
ಈ ಟಾಸ್ಕ್ ಬಳಿಕ ಗ್ಯಾಸ್ ಒದಗಿಸಿದ ಬಿಗ್ ಬಾಸ್ ಒಂದು ಕಂಡೀಶನ್ ಇಟ್ಟರು. ಮನೆಯ ಸದಸ್ಯರೆಲ್ಲರೂ ಮಂಜು, ಅರವಿಂದ್ ಮತ್ತು ರಾಜೀವ್ ಅವರನ್ನು ಸಮರ್ಥರೆಂದು ನಿರ್ಧರಿಸಿದ್ದೀರಿ. ಹೀಗಾಗಿ, ಸಮರ್ಥರಿಗೆ ಸೂಕ್ತ ಪುರಸ್ಕಾರ ಸಿಗಬೇಕಿರುವುದರಿಂದ ಈ ಗ್ಯಾಸನ್ನು ಈ ಮೂವರು ಮಾತ್ರ ಬಳಸಬೇಕು. ಗ್ಯಾಸ್ನಿಂದ ತಯಾರಿಸಿದ ಆಹಾರವನ್ನು ಮನೆಯ ಸದಸ್ಯರು ಸೇವಿಸುವಂತಿಲ್ಲ ಎಂಬ ಷರತ್ತು ಹಾಕಿದರು.
ರೊಚ್ಚಿಗೆದ್ದ ಚಂದ್ರಚೂಡ್: ಬಿಗ್ಬಾಸ್ ಮಾತು ಕೇಳುತ್ತಿದ್ದಂತೆ ರೊಚ್ಚಿಗೆದ್ದ ಚಂದ್ರಚೂಡ್, ಇಲ್ಲಿ ಅವರವರೇ ಸಮರ್ಥರೆಂದು ನಿರ್ಧರಿಸಿಕೊಳ್ಳುತ್ತಾರೆ. ನಾನು ಭಾಗವಹಿಸದಂತೆ ನಿಧಿ ಸುಬ್ಬಯ್ಯ ತಡೆದರು. ರಾಜೀವ್ ಆಡಲಿ ಎಂಬಂತೆ ಮಾತನಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಧಿ ನಾನು ಹೇಳಿಲ್ಲವೆಂದು ಪ್ರತ್ಯುತ್ತರ ನೀಡಿದರು. ನಾನು ಸುಳ್ಳು ಹೇಳಿದರೆ ಚಪ್ಪಲಿಯಿಂದ ಹೊಡೆಯಿರಿ ಎಂದ ಚಕ್ರವರ್ತಿ ಚಪ್ಪಲಿ ಎಸೆದರು. ನೀವು ಹೇಳಿರುವುದು ಸುಳ್ಳು. ನೀವೇ ಹೊಡೆದುಕೊಳ್ಳಿ ಎಂದು ನಿಧಿ ಉತ್ತರ ಕೊಟ್ಟರು.
‘ನೀನೆಷ್ಟು ಚೀಪ್ ಎಂದು ತಿಳಿದಿದೆ’: ಟಾಸ್ಕ್ ವಿಚಾರಕ್ಕೆ ಮಧ್ಯಪ್ರವೇಶಿಸಿದ ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ ಅವರನ್ನು ಟೀಕಿಸಿದರು. ಇದರಿಂದ ಕೋಪಗೊಂಡ ನಿಧಿ, ನೀನು ಎಷ್ಟು ಚೀಪ್ ಎಂದು ತಿಳಿದಿದೆ ಎಂದರು. ಇದರಿಂದ ಆಕ್ರೋಶಗೊಂಡ ಪ್ರಶಾಂತ್, ನಿನ್ನ ಚರಿತ್ರೆ ಗೊತ್ತಿದೆ. ನೀನೆಷ್ಟು ಚೀಪ್ ಎಂದು ಬಿಚ್ಚಿಡಲೆ ಎಂದು ಕಿರುಚಾಡಿದರು. ಮಧ್ಯಪ್ರವೇಶಿಸಿದ ಮನೆಯ ಸದಸ್ಯರು ಪರಿಸ್ಥಿತಿ ತಿಳಿಗೊಳಿಸಿದರು. ಪ್ರಶಾಂತ್ ಸಂಬರಗಿ ತುಂಬಾ ಕೀಳುಮಟ್ಟದಲ್ಲಿ ಮಾತಾಡುತ್ತಾರೆ ಎಂದು ನಿಧಿ ಕಣ್ಣೀರು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.