ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ಮತ್ತೊಂದು ಕಥೆ ಹೇಳಲು ಹೊರಟಿದೆ. ಅದೇ ‘ಮಹಾರಾಣಿ’ ಕಥೆ. ಅಜ್ಜಿ ಮತ್ತು ಮೊಮ್ಮಗಳ ಸುಮಧುರ ಬಾಂಧವ್ಯದ ಅಪರೂಪದ ಕಥೆ ಇದು. ಇದೇ 29ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ದಾಮಿನಿ ಶೆಟ್ಟಿ ಕಥೆ, ಚಿತ್ರಕಥೆ ಬರೆದಿರುವ ಈ ಧಾರಾವಾಹಿಯನ್ನು ಎಟರ್ರನಲ್ ಫ್ಲೇಮ್ಸ್ ಸಂಸ್ಥೆಯಡಿ ರಾಜ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.
ಹೊಸ ಮುಖವನ್ನು ನಾಯಕಿಯಾಗಿ ಪರಿಚಯಿಸುವ ನಿಟ್ಟಿನಲ್ಲಿ ವಾಹಿನಿಯು ‘ನೀವಾ ಮಹಾರಾಣಿ’ ಎಂಬ ಅಭಿಯಾನ ನಡೆಸಿತ್ತು. ಬೆಂಗಳೂರು, ಮೈಸೂರು, ಕಲಬುರ್ಗಿ ಸೇರಿದಂತೆ ರಾಜ್ಯದ ವಿವಿಧೆಡೆ ಮಹಾರಾಣಿಯ ಕ್ಯಾಂಟರ್ ಸಂಚರಿಸಿ ಸಾವಿರಾರು ಪ್ರತಿಭೆಗಳ ಆಡಿಷನ್ ನಡೆಸಿತ್ತು. ಮಂಗಳೂರು ಮೂಲದ ಬೆಡಗಿರಶ್ಮಿತಾ ಚೆಂಗಪ್ಪ ಮಹಾರಾಣಿಯಾಗಿ ಆಯ್ಕೆಯಾಗಿದ್ದಾರೆ.
ನಾಯಕನ ಪಾತ್ರದಲ್ಲಿ ವಿನೋದ್ ಪಾಟೀಲ್ ಅಭಿನಯಿಸುತ್ತಿದ್ದಾರೆ. ಅಜ್ಜಿಯ ಪಾತ್ರದಲ್ಲಿ ವಿಜಯಲಕ್ಷ್ಮಿ ಉಪಾಧ್ಯಾಯ ನಟಿಸುತ್ತಿದ್ದಾರೆ. ಜ್ಯೋತಿ ರೈ, ಪ್ರಕಾಶ್ ಶೆಟ್ಟಿ, ವಿನಯ್ ಕೃಷ್ಣ, ವಿಷ್ಣು, ನಿಧಿ ಚಕ್ರವರ್ತಿ ನಟಿಸುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ನಾರಾಯಣ ಸ್ವಾಮಿ ಮತ್ತು ಗೌತಮಿ ನಟಿಸಿದ್ದಾರೆ.
‘ಕೃಷ್ಣ ತುಳಸಿ’ ಧಾರಾವಾಹಿಯಲ್ಲಿ ನಟ ಶ್ರೀನಗರ ಕಿಟ್ಟಿ, ‘ಸರ್ವ ಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ಶರಣ್, ಆಶಿಕಾ ಅವರನ್ನು ಕರೆತಂದು ವೀಕ್ಷಕರಿಗೆ ಮನರಂಜನೆ ನೀಡಲಾಗಿತ್ತು. ಈ ಧಾರಾವಾಹಿಯೂ ಜನರಿಗೆ ರಂಜನೆ ನೀಡಲಿದೆ ಎಂದು ವಾಹಿನಿ ಹೇಳಿದೆ.