ಬೆಂಗಳೂರು: ‘ಕಸ್ತೂರಿ’ ಕನ್ನಡ ವಾಹಿನಿಯಲ್ಲಿ ಇದೇ 12ರಿಂದ ಹೊಸದಾಗಿ ನಾಲ್ಕು ಧಾರಾವಾಹಿಗಳು ಪ್ರಸಾರ ಆರಂಭಿಸಲಿವೆ.
ಹೊಸ ಹುರುಪು, ನವ ಚೈತನ್ಯ, ವಿಭಿನ್ನವಾದ ಆಲೋಚನೆ ಹಾಗೂ ಜನರ ಬದುಕಿಗೆ ಹತ್ತಿರವಾದ ವಿಷಯಗಳನ್ನು ಇಟ್ಟುಕೊಂಡು ಮೂಡಿಬರಲಿರುವ ‘ನಾಗಮಂಡಲ’, ‘ಮಮತೆಯ ಕರೆಯೋಲೆ’, ‘ಶ್ರೀನಿ ಲವ್ಸ್ ಪದ್ದು’ ಹಾಗೂ ‘ಏಟು ಎದುರೇಟು’ ಧಾರಾವಾಹಿಗಳು ಪ್ರೇಕ್ಷಕರನ್ನು ಮನರಂಜಿಸಲಿವೆ.
ವಾಹಿನಿ ಸಂಸ್ಥಾಪಕಿ ಅನಿತಾ ಕುಮಾರಸ್ವಾಮಿ ಅವರ ಮುಂದಾಳತ್ವದಲ್ಲಿ ಶ್ರುತಿ ನಾಯ್ಡು ಅವರ ಮೇಲ್ವಿಚಾರಣೆಯಲ್ಲಿ ಪರಿಣಿತ ಕಲಾವಿದರ ತಾರಾಂಗಣದಲ್ಲಿ ಧಾರಾವಾಹಿಗಳು ಮೂಡಿಬರಲಿವೆ.
‘ನಾಗಮಂಡಲ‘ ಧಾರಾವಾಹಿಯು ಗ್ರಾಮೀಣ ಭಾಗದ ಕಥೆ ಹೊಂದಿದೆ. ಮೂಢನಂಬಿಕೆ, ದೈವಭಕ್ತಿ, ಕೂಡು ಕುಟುಂಬ, ಮುಗ್ಧಪ್ರೇಮ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಮಹಾತ್ಮೆ ಧಾರವಾಹಿಯಲ್ಲಿ ಇರಲಿದೆ.
‘ಶ್ರೀನಿ ಲವ್ಸ್ ಪದ್ದು’ ಧಾರಾವಾಹಿಯ ಕಥಾವಸ್ತು ಆಧುನಿಕ ಪ್ರೇಮಕಥೆ. ಇಂದಿನ ಪೀಳಿಗೆಯವರು ಮದುವೆ ಎಂಬ ಸಮಾಜದ ಕಟ್ಟುಪಾಡನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿದ್ದರಿಂದಾಗಿ ಅನುಭವಿಸುತ್ತಿರುವ ಅವಾಂತರಗಳು ಹಾಗೂ ಒಬ್ಬರಿಗಾಗಿ ಒಬ್ಬರು ಬದುಕುವುದೇ ಸತ್ಯ ಎಂಬುದನ್ನು ಈ ಧಾರಾವಾಹಿ ಚಿತ್ರೀಕರಿಸಲಾಗಿದೆ.
‘ಏಟು ಎದುರೇಟು’ ಧಾರಾವಾಹಿ, ಎರಡು ಕುಟುಂಬಗಳ ನಡುವಿನ ದ್ವೇಷದ ಕಥೆ ಹೊಂದಿದೆ. ದೊಡ್ಡವರ ಸಂಚಿಗೆ, ಮಕ್ಕಳ ಪ್ರೀತಿ ಹೇಗೆ ನಲಗುತ್ತದೆ ಎಂಬುದನ್ನು ಧಾರಾವಾಹಿಯಲ್ಲಿ ಕಾಣಬಹುದು.
’ಮಮತೆಯ ಕರೆಯೋಲೆ’ ಧಾರಾವಾಹಿ, ತಾಯಿ ಮತ್ತು ಮಗಳ ಕಥೆಯುಳ್ಳದ್ದು. ತಂದೆ–ತಾಯಿ, ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಾರೆ. ಆದರೆ, ಈ ಧಾರಾವಾಹಿಯಲ್ಲಿ ಮಗಳೇ ತಾಯಿಗೆ ಹೊಸ ಬದುಕು ಕಟ್ಟಿಕೊಡುತ್ತಾಳೆ.