ನಾಡಿನ ಶಕ್ತಿದೇವತೆ ರೇಣುಕಾ ಯಲ್ಲಮ್ಮನ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿಯಾಗಿ ಮೂಡಿಬರಲಿದೆ. ‘ಉಧೋ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಈ ಧಾರಾವಾಹಿಯ ಶೀರ್ಷಿಕೆ. ಜನವರಿ 23ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ಧಾರಾವಾಹಿಯ ಚಿತ್ರೀಕರಣ ಭರ್ಜರಿಯಾಗಿ ನಡೆದಿದೆ. ರೇಣುಕಾ ಹಾಗೂ ಯಲ್ಲಮ್ಮನ ಬಾಲ್ಯದ ಕತೆಯನ್ನು ಚಿತ್ರೀಕರಿಸಲಾಗುತ್ತಿದೆ. ಅಮೋಘ ಸೆಟ್ ಮತ್ತು ಗ್ರಾಫಿಕ್ಸ್ ಅಳವಡಿಸಲಾಗಿದೆ. ಧಾರಾವಾಹಿಯ ಪ್ರೋಮೋ ತುಣುಕುಗಳು ವೀಕ್ಷಕರ ಮನ ಗೆದ್ದಿವೆ.
ಕಥೆ ಏನಿದೆ?
ಪುರಾಣ ಕಾಲದಲ್ಲಿ ಒಮ್ಮೆ ಸುದರ್ಶನ ಚಕ್ರವು ಅಹಂಕಾರದಿಂದ ಮೆರೆಯಿತು. ಆಗ ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವಂತೆ ಭಗವಂತ ಶ್ರೀ ವಿಷ್ಣುವು ಶಾಪ ನೀಡಿ, ನನ್ನಿಂದಲೇ ನಿನ್ನ ಅಂತ್ಯವಾಗುವುದು ಎಂದು ಹೇಳುತ್ತಾನೆ.
ಹೀಗೆ ಭೂಲೋಕದಲ್ಲಿ ಕಾರ್ತವೀರ್ಯಾರ್ಜುನನ ರೂಪದಲ್ಲಿ ಸುದರ್ಶನ ಚಕ್ರವು ಜನ್ಮ ತಾಳುತ್ತದೆ. ಶ್ರೀ ವಿಷ್ಣುವು ಮಾನವ ರೂಪದಲ್ಲಿ ಜನ್ಮತಾಳಲು ಆತನ ತಾಯಿಯಾಗಿ ಪಾರ್ವತಿಯು ರೇಣು ಮಹಾರಾಜನ ಮಗಳಾಗಿ ಜನ್ಮತಾಳುತ್ತಾಳೆ. ರೇಣುಕಾ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದಳು. ಯಲ್ಲಮ್ಮನಿಗೆ ಅದು ರಕ್ತಗತವಾಗಿ ಬಂದಿರುತ್ತದೆ. ರೇಣುಕಾ ಅರಮನೆಯ ಗೋಡೆಗಳ ಮಧ್ಯೆ ಬೆಳೆದರೆ, ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿರುತ್ತಾಳೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ಒಂದೇ ಆತ್ಮದ ಎರಡು ಶಕ್ತಿಗಳು ಒಂದಾಗಿ ಬಂದು ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ ಎಂದಿದೆ ಟಿವಿ ವಾಹಿನಿ.
ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಹರ ಹರ ಮಹಾದೇವ, ಮಹಾಭಾರತ, ರಾಧಾಕೃಷ್ಣ ಹಾಗೂ ಸೀತೆಯ ರಾಮ ಧಾರಾವಾಹಿಗಳಂತಹ ಪುರಾಣ, ಅಧ್ಯಾತ್ಮ ಮತ್ತು ಮೌಲ್ಯಾಧಾರಿತ ಧಾರಾವಾಹಿಗಳನ್ನು ಈ ಹಿಂದೆ ಇದೇ ವಾಹಿನಿ ಪ್ರಸಾರ ಮಾಡಿತ್ತು.