ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಿಂಬಿಸುವ’ಸ್ವರಾಜ್ ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ‘ ಕುರಿತ ಧಾರಾವಾಹಿ ದೂರದರ್ಶನ–ಚಂದನದಲ್ಲಿ ಇದೇ 20ರಿಂದ ಪ್ರಸಾರವಾಗಲಿದೆ.
‘ಇದು 75 ಕಂತುಗಳ ಮೆಗಾ ಧಾರಾವಾಹಿ. ವಾಸ್ಕೋ–ಡ–ಗಾಮ ಭಾರತಕ್ಕೆ ಬಂದ ಘಟನೆಯಿಂದ ಆರಂಭಿಸಿ, 15ನೇ ಶತಮಾನದ ನಂತರದ ಭಾರತದ ಸ್ವಾತಂತ್ರ್ಯ ಹೋರಾಟದ ವೈಭವದ ಇತಿಹಾಸವನ್ನು ಈ ಧಾರಾವಾಹಿ ವಿವರಿಸುತ್ತದೆ' ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಮಾಹಿತಿ ಬ್ಯೂರೊ(ಪಿಐಬಿ) ಹೆಚ್ಚುವರಿ ಮಹಾನಿರ್ದೇಶಕ ಎಸ್.ಜೆ. ರವೀಂದ್ರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕನ್ನಡ ಸೇರಿ 20 ಭಾಷೆಗಳಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಮುಖ್ಯವಾಗಿ ಅನಾಮಧೇಯವಾಗಿ ಉಳಿದಿರುವ ಅನೇಕ ಸ್ವಾತಂತ್ರ್ಯ ವೀರರ ಜೀವನ ಹಾಗೂ ತ್ಯಾಗವನ್ನು ಈ ಧಾರಾವಾಹಿ ಬಿಂಬಿಸುತ್ತದೆ. ಇತಿಹಾಸಕಾರರ ತಂಡದ ಸಂಶೋಧನೆ ಗಳ ಆಧಾರದ ಮೇಲೆ ಈ ಧಾರಾವಾಹಿ ಯನ್ನು ಪ್ರಸ್ತುತಪಡಿಸಲಾಗಿದೆ. ಚಲನ ಚಿತ್ರ ನಟ ಮನೋಜ್ ಜೋಶಿ ಅವರು ಸೂತ್ರಧಾರನ ಪಾತ್ರದಲ್ಲಿ ಇದನ್ನು ನಿರೂಪಿಸಿದ್ದಾರೆ’ ಎಂದು ವಿವರಿಸಿದರು.
ಕಾರ್ಯಕ್ರಮ ಮುಖ್ಯಸ್ಥರಾದ ನಿರ್ಮಲಾ ಸಿ. ಯಲಿಗಾರ್ ಮಾತನಾಡಿ, ‘ಈ ಧಾರಾವಾಹಿಯು ರಾಣಿ ಅಬ್ಬಕ್ಕ, ಚನ್ನಬೈರಾದೇವಿ, ಶಿವಪ್ಪನಾಯಕ, ರಾಮರಾಯರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬೆಳಕು ಚೆಲ್ಲಲಿದೆ. ಶ್ರೇಷ್ಠ ಗುಣಮಟ್ಟ ಮತ್ತು ದೃಶ್ಯ ವೈಭವದಿಂದ ಈ ಧಾರಾವಾಹಿ ನಿರ್ಮಿಸಲಾಗಿದೆ’ ಎಂದುವಿವರಿಸಿದರು.
ಚಂದನದಲ್ಲಿ ಪ್ರಸಾರವಾಗುವ ಸಮಯ *ಪ್ರತಿ ಶನಿವಾರ ರಾತ್ರಿ 8ಗಂಟೆಯಿಂದ 9ರವರೆಗೆ * ಪ್ರತಿ ಸೋಮವಾರ ಸಂಜೆ 5ಗಂಟೆಯಿಂದ 6ರವರೆಗೆ ಮರುಪ್ರಸಾರ * ಪ್ರತಿ ಬುಧವಾರ ರಾತ್ರಿ 8ಗಂಟೆಯಿಂದ 9ರವರೆಗೆ ಮರುಪ್ರಸಾರ * ಪ್ರತಿ ಶುಕ್ರವಾರ ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ಮರುಪ್ರಸಾರ
ಆಕಾಶವಾಣಿಯಲ್ಲಿ ಪ್ರಸಾರದ ಸಮಯ * ಪ್ರತಿ ಶನಿವಾರ ಬೆಳಿಗ್ಗೆ 11 ಗಂಟೆಯಿಂದ 12ರವರೆಗೆ * ಪ್ರತಿ ಭಾನುವಾರ ಸಂಜೆ 3 ರಿಂದ 4 ರವರೆಗೆ ಮರುಪ್ರಸಾರ