ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುತ, ಕುಣಿಯುತ ಬಾಲ ಕೋಗಿಲೆ...

Last Updated 16 ಮೇ 2019, 19:30 IST
ಅಕ್ಷರ ಗಾತ್ರ

ಪ್ರೈಜ್‌ ಟ್ಯಾಗ್ ತಗೆಯದ ಹೊಚ್ಚ ಹೊಸ ಕನ್ನಡಕ ತೊಟ್ಟು, ಹೆಚ್ಚು ಕಡಿಮೆ ತನ್ನಷ್ಟೇ ಉದ್ದದ ಮೈಕ್‌ ಹಿಡಿದು, ವೇದಿಕೆ ಏರುವ ಏಳು ವರ್ಷ ವಯಸ್ಸಿನ ಈ ಪೋರ ಶೃತಿ ತಪ್ಪದಂತೆ ಗಾಯನದೊಂದಿಗೆ ಕುಣಿಯುತ, ಅಭಿನಯಿಸುತ, ರಂಜಿಸುವ ಮೋಡಿಗಾರ.

‘ಕಲರ್ಸ್‌ ಸೂಪರ್’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಹಾಡುತ್ತಿರುವ ಬಾಲ ಕೋಗಿಲೆ ‘ಅರ್ಜುನ್‌ ಇಟಗಿ’ಯ ವಿಶಿಷ್ಟ ಶೈಲಿಯನ್ನು ಮೆಚ್ಚದವರಿಲ್ಲ.

‘ಹೋಗುಮ, ಹೋಗುಮಾ, ಲಾಂಗು ಡ್ರೈವು ಹೋಗುಮಾ’ ಎನ್ನುತ್ತಾ ಕನ್ನಡ ಕೋಗಿಲೆಯ ವೇದಿಕೆ ಹತ್ತಿದ್ದ ಈತ ಮೊನ್ನೆ ಅಮ್ಮಂದಿರ ದಿನದಂದು ಹಾಡಿದ ‘ಅಮ್ಮಾ ನಾ ಫೇಲಾದೆ, ಅಮೆರಿಕ ಪಾಲಾದೆ’ ಹಾಡಿನವರೆಗೆ ಒಂದಕ್ಕಿಂತ ಮತ್ತೊಂದು ಜನಪ್ರಿಯವಾಗಿವೆ. ಜನಪದ ಗೀತೆಗಳ ಸುತ್ತಿನಲ್ಲಿ ಹಾಡಿದ ‘ನನ ಗೆಳತಿ, ನನ ಗೆಳತಿ ನನ ನೋಡಿ ನೀ ನಗತಿ’ ಗೀತೆಯನ್ನು ಕೇಳಿದವರೆಲ್ಲಾ ಗುನುಗುವಂತೆ ಹಾಡಿದ್ದ.

ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಅರ್ಜುನ್‌ ಎರಡನೇ ತರಗತಿ ವಿದ್ಯಾರ್ಥಿ. ಶಾಸ್ತ್ರೀಯವಾಗಿ ಸಂಗೀತ ಕಲಿಯದ ಈತನಿಗೆ ತಂದೆಯೇ ಸ್ಫೂರ್ತಿ. ರಂಗಭೂಮಿ ಹಾಗೂ ಸಂಗೀತದಲ್ಲಿ ಒಲವು ಹೊಂದಿರುವ ಅರ್ಜುನ್‌ ತಂದೆ ಚೆನ್ನಬಸಪ್ಪ ಮಗನ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಅರ್ಜುನನ ಪ್ರತಿಭೆಯ ಅನಾವರಣಕ್ಕೆ ಅವರ ತಂದೆ ಖರೀದಿಸಿದ್ದ ಸೌಂಡ್‌ ಬಾಕ್ಸ್‌ ಮತ್ತು ಮೈಕ್‌ ಮೊದಲ ವೇದಿಕೆಯಾಗಿತ್ತು. ಯಲಬುರ್ಗಾದಲ್ಲಿ ಜೆರಾಕ್ಸ್‌ ಅಂಗಡಿ ‌ಇಟ್ಟುಕೊಂಡಿರುವ ಚೆನ್ನಬಸಪ್ಪ ಅವರು ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸುತ್ತಿದ್ದರು. ಇದನ್ನೇ ಅನುಸರಿಸಿದ ಅರ್ಜುನ್‌ ಸಹ ಅಂಗಡಿಯಲ್ಲೇ ಮೈಕ್‌ ಹಿಡಿದು ಹಾಡಲಾರಂಭಿಸಿದ. ‘ಬೊಂಬೆ ಹೇಳುತೈತೆ’ ಸಾರ್ವಜನಿಕವಾಗಿ ಈತ ಹಾಡಿದ ಮೊದಲ ಹಾಡು. ನಂತರ ಕೆಲ ಸಮಾರಂಭಗಳಲ್ಲಿ ಅನೇಕ ಗೀತೆಗಳಿಗೆ ದನಿಯಾಗಿದ್ದಾನೆ.

ಮಗನ ಆಸಕ್ತಿಗೆ ನೀರೆರೆಯಲು ಪಣತೊಟ್ಟ ಚೆನ್ನಬಸಪ್ಪ ಅವರಿಗೆ ವೇದಿಕೆಗಳ ಕೊರತೆ ಕಾಡತೊಡಗಿತು. ಛಲಬಿಡದ ಅವರು ಅರ್ಜುನ್‌ ಇಟಗಿ ಹೆಸರಿನಲ್ಲಿ ಫೇಸ್‌ಬುಕ್‌ ಪೇಜ್‌ನ್ನು ತೆರೆದರು. ಮನೆಯ ಕೋಣೆಯೊಂದನ್ನು ವೇದಿಕೆ ರೂಪದಲ್ಲಿ ಸಜ್ಜುಗೊಳಿಸಿ ಮಗನ ಕೈಗೆ ಮೈಕ್‌ ನೀಡಿ ಹಾಡಿಸಿದರು. ಮೊಬೈಲ್‌ನಲ್ಲಿಯೇ ಅದನ್ನು ಚಿತ್ರೀಕರಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದರು. ಕೆಲವೇ ದಿನಗಳಲ್ಲಿ ಫಾಲೋವರ್ಸ್‌ಗಳ ಸಂಖ್ಯೆ 10 ಸಾವಿರ ದಾಟಿತು. ಫೇಸ್‌ಬುಕ್‌ನಲ್ಲಿ ಅರ್ಜುನ್‌ನ ಅಭಿಮಾನಿಯೊಬ್ಬರು ನೀಡಿದ ಸಲಹೆಯಂತೆ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಕೋಗಿಲೆ ಆಡಿಷನ್‌ಗೆ ಕರೆದೊಯ್ದ ಚನ್ನಬಸಪ್ಪ ಮಗನಿಗೊಂದು ಬೃಹತ್ ವೇದಿಕೆ ದೊರಕಿಸಿಕೊಡುವಲ್ಲಿ ಸಫಲರಾದರು.

ಈಗಲೂ ಪ್ರತಿವಾರ ಕಾರ್ಯಕ್ರಮ ಆಯೋಜಕರು ನೀಡುವ ಗೀತೆಯನ್ನು ಅಚ್ಚುಕಟ್ಟಾಗಿ ಮಗನಿಗೆ ಕಲಿಸುವ ಜವಾಬ್ದಾರಿಯನ್ನು ಸ್ವತಃ ಚೆನ್ನಬಸಪ್ಪ ಅವರೇ ವಹಿಸಿಕೊಂಡಿದ್ದಾರೆ.

ವರನಟ ರಾಜ್‌ಕುಮಾರ್‌ ಅವರ ಅಭಿಮಾನಿಯಾಗಿರುವ ಅರ್ಜುನ್‌, ಅವರಂತೆಯೇ ಮೇರುನಟ ಹಾಗೂ ಅಪ್ರತಿಮ ಗಾಯಕನಾಗಬೇಕು ಎನ್ನುವ ಕನಸು ಹೊತ್ತಿದ್ದಾನೆ. ಹಾಗಾಗಿಯೇ ಆತ ಹಾಡಿರುವ ಗೀತೆಗಳಲ್ಲಿಯೇ ‘ಯಾರೇ ಕೂಗಾಡಲಿ’ ಆವನ ಮೆಚ್ಚಿನ ಗೀತೆ.

‘ಮಗನಿಗೆ ಯಾವುದೇ ಹಾಡನ್ನು ಕಲಿಸುವಾಗ ಮೊದಲು ಸಾಹಿತ್ಯದ ಅರ್ಥವನ್ನು ಹೇಳುತ್ತೇನೆ. ಅದನ್ನು ಗ್ರಹಿಸುವ ಆತ ತಾನಾಗಿಗೇ ಅಭಿನಯಿಸುತ್ತಾ ಹಾಡುತ್ತಾನೆ’ ಎನ್ನುತ್ತಾ ಮಗನ ಗ್ರಹಿಕೆಯ ಸಾಮರ್ಥ್ಯವನ್ನು ಮೆಚ್ಚಿಕೊಳ್ಳುವ ಚೆನ್ನಬಸಪ್ಪ ಅವರು, ಅರ್ಜುನ ಮಿಮಿಕ್ರಿ, ಸಂಗೀತ, ನೃತ್ಯ, ನಟನೆ ಯಾವುದರಲ್ಲಿ ತೊಡಗಿಸಿಕೊಂಡರು ಪ್ರೋತ್ಸಾಹಿಸುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT