ಮೂವರು ಯುವ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವು ಜುಲೈ 11ರಿಂದ 14ರವರೆಗೆ ಚಿತ್ರಕಲಾ ಪರಿಷತ್ನ ದೇವರಾಜ್ ಅರಸ್ ಗ್ಯಾಲರಿಯಲ್ಲಿ ನಡೆಯಲಿದೆ.
‘ವಿ ಮೀ’ ಸಂಸ್ಥೆಯು ಆಯೋಜಿಸಿರುವ ಪ್ರದರ್ಶನದಲ್ಲಿ ಅವಿನಾಶ್ ಕಾಮತ್, ಹರಿ ಸೋಮಶೇಖರ್ ಹಾಗೂ ವಿಜಯಕುಮಾರ್ ಪಟ್ಟದಕಲ್ಲು ಸೆರೆ ಹಿಡಿದ ವನ್ಯಜೀವಿಗಳ ಅಪರೂಪದ ಫೋಟೊಗಳಿರಲಿವೆ.
‘ವಿ ಮೀ’ ವನ್ಯಜೀವಿ ಛಾಯಾಚಿತ್ರ ಸಂಗ್ರಹ ಹೊಂದಿದ್ದು, ಜೀವ ವೈವಿಧ್ಯ ಮತ್ತು ಪ್ರಾಣಿ, ಸಸ್ಯಸಂಕುಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
2014ರಲ್ಲಿ ಛಾಯಾಚಿತ್ರವನ್ನು ಹವ್ಯಾಸವನ್ನಾಗಿ ಆರಂಭಿಸಿದ ಅವಿನಾಶ್ ಕಾಮತ್ ಅವರಿಗೆ ಹಕ್ಕಿಗಳು ಮತ್ತು ಅವುಗಳ ಬಣ್ಣಗಳು ಅಚ್ಚುಮೆಚ್ಚು. ಇವರ ಫೋಟೊಗಳು ಸ್ಯಾಂಕ್ಚುರಿ ಏಷ್ಯಾ ಹಾಗೂ
ಬೆಟರ್ ಫೋಟೊಗ್ರಫಿ ಮ್ಯಾಗಜಿನ್ಗಳಲ್ಲಿ ಪ್ರಕಟವಾಗಿವೆ.
ಮತ್ತೊಬ್ಬ ಛಾಯಾಗ್ರಾಹಕ ಹರಿ ಸೋಮಶೇಖರ್ ಪರಿಸರ ಪ್ರೇಮಿ. ಬಾಲ್ಯದ ದಿನಗಳಲ್ಲಿ ಸಂಡೂರು ಮೀಸಲು ಅರಣ್ಯ ಪ್ರದೇಶದಲ್ಲಿನ ಕಾಡನ್ನು ದಾಟಿಕೊಂಡು ಅವರು ಶಾಲೆಗೆ ಹೋಗಬೇಕಾಗಿತ್ತು. ಆಗ ಅವರು ಅನೇಕ ವನ್ಯಜೀವಿ ಹಾಗೂ ಹಕ್ಕಿಗಳ ನೋಡುತ್ತಾ, ಅವುಗಳ ಫೋಟೊ ಸೆರೆ ಹಿಡಿಯುತ್ತಿದ್ದರು. ಹವ್ಯಾಸ ಆರಂಭಿಸಿದ ಅವರು ಅದನ್ನೇ ಉದ್ಯೋಗವಾಗಿಸಿಕೊಂಡರು. ಅವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಪ್ರಾಣಿಗಳಅಪರೂಪದ, ವಿಶೇಷ ಚಲನವಲನಗಳನ್ನು ಸೆರೆಹಿಡಿದಿದ್ದಾರೆ.
ವಿಜಯ್ಕುಮಾರ್ ಪಟ್ಟದಕಲ್ಲು ವನ್ಯಜೀವಿ ಛಾಯಾಗ್ರಹಣಕ್ಕೆ ಹೊಸ ಹೊಳಹುಗಳನ್ನು ತೋರಿಸಿದವರು. ಛಾಯಾಗ್ರಹಣದ ಮೇಲಿನ ಆಸಕ್ತಿಯಿಂದ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ತೆರಳಿ ಅಪರೂಪದ ಫೋಟೊಗಳನ್ನು ಸೆರೆ ಹಿಡಿದಿದ್ದಾರೆ. ಹಿಮಾಲಯದ ಭಾಗಗಳಲ್ಲಿ ಚಿರತೆ, ನರಿಗಳು ಹಾಗೂ ಅನೇಕ ಪ್ರಭೇದದ ಹಕ್ಕಿಗಳ ಫೋಟೊಗಳನ್ನು ತೆಗೆದಿದ್ದಾರೆ.
ಈ ಪ್ರದರ್ಶನದಲ್ಲಿ 60 ಆಯ್ದ, ಅಪರೂಪದ ಫೋಟೊಗಳ ಮಾರಾಟವೂ ಇದೆ. ಈ ಹಣವನ್ನು ನೇಚರ್ ಕನ್ಸರ್ವೇಶನ್ ಫೌಂಡೇಷನ್ಗೆ ದೇಣಿಗೆಯಾಗಿ ನೀಡಲಾಗುತ್ತದೆ.
ಎ.ಜೆ.ಟಿ. ಜಾನ್ಸಿಂಗ್, ಪುನಾಟಿ ಶ್ರೀಧರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸ್ಥಳ– ದೇವರಾಜ್ ಅರಸ್ ಗ್ಯಾಲರಿ, ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.