ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನಾ ಗುರುವಾರ ಹೇಳಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವಿನ ನಿರ್ಣಾಯಕ ಮಾತುಕತೆಯ ಮರುದಿನ ಶಿವಸೇನಾ ಈ ಹೇಳಿಕೆ ನೀಡಿದೆ.
‘ಏಕಾಂಗಿಯಾಗಿ ಸ್ಪರ್ಧಿಸುವ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ತೆಗೆದುಕೊಂಡಿದೆ. ಇನ್ನೊಂದು ಪಕ್ಷದ ಅಧ್ಯಕ್ಷರಿಗೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
‘ಪಕ್ಷದ ತೀರ್ಮಾನವನ್ನು ಉದ್ಧವ್ ಠಾಕ್ರೆ ಅಧಿಕೃತವಾಗಿ ಪ್ರಕಟಿಸಲಿದ್ದಾರೆ’ ಎಂದಿದ್ದಾರೆ.
ಅಮಿತ್ ಶಾ ಹಾಗೂ ಉದ್ಧವ್ ಠಾಕ್ರೆ ಅವರು ಬಾಂದ್ರಾದಲ್ಲಿರುವ ಉದ್ಧವ್ ನಿವಾಸ ಮಾತೋಶ್ರೀಯಲ್ಲಿ ಬುಧವಾರ ಎರಡು ಗಂಟೆ ಮಾತುಕತೆ ನಡೆಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಉಪಸ್ಥಿತರಿದ್ದರು.
ಬಿಜೆಪಿ ಜೊತೆ ಶಿವಸೇನಾ ಮೈತ್ರಿ ಮುಂದುವರಿಸುವಂತೆ ಈ ವೇಳೆ ಶಾ ಒತ್ತಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.