ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿ ಸಿರಿಯ ಮೋಹಕ ಜಾಲ

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿತಾಣಗಳು
Last Updated 20 ಏಪ್ರಿಲ್ 2019, 13:51 IST
ಅಕ್ಷರ ಗಾತ್ರ

ಮೊದಲಿಗೇ ಹೇಳಿಬಿಡುತ್ತೇನೆ. ಬೆಳಿಗ್ಗೆ ಬಂದು ಸಂಜೆ ವಾಪಸಾಗುತ್ತೇನೆ ಎಂದು ಚಿಕ್ಕಮಗಳೂರಿಗೆ ಬರಲೇಬೇಡಿ. ಬಿರುಬೇಸಿಗೆಯಲ್ಲಿ ಒಣಗಿದ ಬಾಯಿಗೆ ಐಸ್‌ಕ್ರೀಮ್‌ ತೋರಿಸಿ ಕೊನೆಗೆ ಅದರ ಮೇಲಿನ ಚೆರ್ರಿ ಹಣ್ಣನ್ನಷ್ಟೇ ಕೊಟ್ಟು ಮುಂದಕ್ಕೆ ಹೋಗಿಬಿಟ್ಟರೆ ಹೇಗಿರುತ್ತದೆ? ಒಂದು ದಿನದಲ್ಲಿ ಚಿಕ್ಕಮಗಳೂರಿಗೆ ಬಂದರೆ ಅಂಥದ್ದೇ ಅನುಭವ ನಿಮ್ಮದಾಗುತ್ತದೆ. ಯಾವುದೋ ಒಂದು ಸ್ಥಳವನ್ನು ನೋಡಿ ವಾಪಸಾಗುವ ನಿಮ್ಮನ್ನು ‘ಐಸ್‌ಕ್ರೀಮ್‌ ಅಬೀ ಬಾಕೀ ಹೈ’ ಎಂದು ಜಿಲ್ಲೆ ಕರೆಯುತ್ತಿರುತ್ತದೆ.

ಕನಿಷ್ಠ ಎರಡು ದಿನ ಬಿಡುವುದು ಮಾಡಿಕೊಂಡು ಬನ್ನಿ. ಇಲ್ಲಿನ ಪ್ರಕೃತಿ ಸಿರಿವಂತಿಕೆಯ ಹಲವು ಜಾಗಗಳನ್ನು ಮನಸಲ್ಲಿ ತುಂಬಿಕೊಂಡು ಹೊಸ ಹುರುಪಿನೊಂದಿಗೆ ವಾಪಸಾಗಿ.

ಎಲ್ಲೆಲ್ಲಿಗೆ ಹೋಗಬಹುದು?

ಮುಖ್ಯ­ವಾಗಿ ಚಿಕ್ಕ­ಮ­ಗ­ಳೂ­ರನ್ನು ಕೇಂದ್ರ­ವಾ­ಗಿ­ಟ್ಟು­ಕೊಂಡು ಎರಡು ದಿನದ ತಿರುಗಾಟದ ಯೋಜನೆಯನ್ನು ರೂಪಿಸಿಕೊಂಡರೆ ಒಳಿತು. ಮೊದಲ ದಿನ ಜಿಲ್ಲಾಕೇಂದ್ರದಿಂದ ಮುಳ್ಳ­ಯ್ಯ­ನ­ಗಿರಿ, ಹೊನ್ನ­ಮ್ಮ­ನ­ಹಳ್ಳ, ಸಗೀರ್- ಝರಿ ಜಲ­ಧಾರೆ, ಬಾಬಾ­ಬು­ಡ­ನ್‌ಗಿರಿ, ಮಾಣಿಕ್ಯಧಾರಗೆ ಹೋಗಿ ಬರಬಹುದು.

ಮುಳ್ಳ­ಯ್ಯ­ನ­ಗಿ­ರಿ­ಯಿಂದ ಬಾಬಾ­ಬು­ಡನ್‌ಗಿರಿಗೆ ತೆರ­ಳಲು ಮತ್ತೆ ಜಿಲ್ಲಾಕೇಂದ್ರಕ್ಕೆ ಬರ­ಬೇ­ಕಾ­ಗಿಲ್ಲ. ಹೋದ ಮಾರ್ಗದಲ್ಲಿಯೇ 8 ಕಿ.ಮೀ. ಹಿಂದಿ­ರುಗಿ ಅಲ್ಲಿ ಎಡಕ್ಕೆ ಸಾಗುವ ರಸ್ತೆ­ಯಲ್ಲಿ ಪಯಣ ಮುಂದು­ವ­ರೆಸಿ. ರಸ್ತೆ ಅಂಚಿನಲ್ಲೇ ಹೊನ್ನ­ಮ್ಮ­ನ­ಹಳ್ಳ ಇದೆ. ಅದನ್ನು ಆಸ್ವಾದಿಸಿ ಮುಂದೆ ಸಾಗಿ. ಸಗೀರ್‌ ಜಲಪಾತ ನಿಮ್ಮನ್ನು ಎದುರುಗೊಳ್ಳುವ ಉತ್ಸುಕತೆಯಲ್ಲಿ ಧಾರೆಯಾಗಿ ಧುಮ್ಮಿಕ್ಕುತ್ತಿರುತ್ತದೆ. ಸಗೀರ್ ಜಲ­ಪಾ­ತಕ್ಕೆ ಜಿಲ್ಲಾ­ಡ­ಳಿತ ನಿಗದಿಪ­ಡಿ­ಸಿದ ದರ (ಒಂದು ಜೀಪಿಗೆ ₹ 700. ಆರೇಳು ಜನ ಪ್ರಯಾಣಿಸಬಹುದು) ಕೊಟ್ಟು ಖಾಸಗಿ ಜೀಪ್‌ಗಳಲ್ಲಿ ಸಾಗಬೇಕು. ಬಾಬಾ­ಬು­ಡನ್‌ಗಿರಿ­ಯಿಂದ ಮಾಣಿಕ್ಯಧಾರಕ್ಕೆ ಇರುವ ಅಂತರ 4 ಕಿ.ಮೀ. ಇದು ಹಸಿರ ವನ­ಸಿ­ರಿಯ ನಡುವೆ ವರ್ಷ­ಪೂರ್ತಿ ಧುಮ್ಮಿ­ಕ್ಕುವ ಜಲ­ಧಾರೆ. ಚಿಕ್ಕಮಗಳೂರು ಸಮೀ­ಪದ ಹಿರೇ­ಮ­ಗ­ಳೂರು, ಬೆಳ­ವಾ­ಡಿಯ ವೀರನಾರಾಯಣ ದೇಗುಲವನ್ನೂ ನೋಡಿಕೊಂಡು ಬರಬಹುದು.

ಇಷ್ಟು ಸ್ಥಳ­ಗ­ಳನ್ನು ನೋಡಿ ಜಿಲ್ಲಾಕೇಂದ್ರಕ್ಕೆ ಬಂದು ವಾಸ್ತವ್ಯ ಹೂಡಿ ಮರು­ದಿನ ಹೊರ­ನಾಡು–ಶೃಂಗೇ­ರಿ­ಗ­ಳಿಗೆ ಅಥವಾ ಕೆಮ್ಮ­ಣ್ಣುಗುಂ­ಡಿಗೆ ಹೋಗು­ವುದು ಉತ್ತಮ. ಪೂರ್ವಾ­ನು­ಮತಿ ಪಡೆ­ದಿ­ದ್ದರೆ ಹೊನ್ನ­ಮ್ಮ­ನ­ಹ­ಳ್ಳ­ದಿಂದ ಅನತಿ ದೂರ­ದಲ್ಲಿ ಬಲಕ್ಕೆ ತಿರುಗಿ ಕಾಫಿ ತೋಟ­ಗಳ ಮಧ್ಯೆ ಸಾಗುವ ಅಂಕು­ಡೊಂ­ಕಿನ ಹಾದಿ­ಯಲ್ಲಿ ಭದ್ರಾ ಅಭಯಾರಣ್ಯಕ್ಕೂ ಹೋಗಿ ತಂಗ­ಬ­ಹುದು.

ಕೆಮ್ಮ­ಣ್ಣುಗುಂ­ಡಿಗೆ ಹೋಗಲು ಇಚ್ಛಿಸು­ವ­ವರು ಕೈಮರ ಬಳಿ ಎಡಕ್ಕೆ ತಿರುಗಿ ಸಂತ­ವೇರಿ ಮಾರ್ಗ­ವಾಗಿ ಹೋಗಿ ವಾಸ್ತವ್ಯ ಹೂಡ­ಬ­ಹುದು. ಜಿಲ್ಲಾ ಕೇಂದ್ರ­ದಲ್ಲಿ ವಾಸ್ತವ್ಯ ಮಾಡು­ವ­ವರು ಬಯ­ಸಿ­ದಲ್ಲಿ ಮರು­ದಿನ ಭದ್ರಾ ಅಭಯಾರ­ಣ್ಯಕ್ಕೆ (ಅರಣ್ಯ ಇಲಾಖೆ ಅನು­ಮತಿ ಅಗತ್ಯ) ಹೋಗ­ಬ­ಹುದು. ಅಲ್ಲಿಂದ ಬಂದು ಅಯ್ಯ­ನ­ಕೆ­ರೆಗೆ ಹೋಗಲೂ ಅವ­ಕಾ­ಶ­ವಿದೆ.ಧಾರ್ಮಿಕ ಕ್ಷೇತ್ರ­ಗ­ಳತ್ತ ಒಲವು ಇರು­ವ­ವರು ಚಿಕ್ಕ­ಮ­ಗ­ಳೂರು – ಬಾಳೆ­ಹೊ­ನ್ನೂರು – ಹೊರ­ನಾಡು – ಶೃಂಗೇರಿಗೆ ಒಂದು ದಿನ­ದಲ್ಲಿ ಹೋಗಿ ಬರಲು ಸಾಧ್ಯ­ವಿದೆ. ಕಳಸ–ಹೊರ­ನಾಡು ಮಾರ್ಗ ಮಧ್ಯೆ ಭದ್ರಾ­ನದಿ ತಟದ ಅಂಬಾ­ತೀರ್ಥ ರಮ್ಯ­ತಾಣ. ಹೊರ­ನಾಡು–ಶೃಂಗೇ­ರಿ­ಗ­ಳಲ್ಲಿ ದೇವಾ­ಲ­ಯ­ಗಳ ಜೊತೆ ಸಾಕಷ್ಟು ಖಾಸಗಿ ವಸ­ತಿ­ಗೃ­ಹ­ಗಳೂ ಇವೆ. ಶೃಂಗೇ­ರಿಗೆ ಚಿಕ್ಕ­ಮ­ಗ­ಳೂರು, ಬೆಂಗ­ಳೂರು, ಮೈಸೂ­ರಿ­ನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ಸು­ಗಳು ಇವೆ. ಶೃಂಗೇರಿ ಹೋದ­ವರು ಸಿರಿ­ಮನೆ ಜಲ­ಪಾತ, ಅಥವಾ ಮಾರ್ಗ­ವಾಗಿ ಸಾಗಿ ಕುಂದಾದ್ರಿ ವೀಕ್ಷಿ­ಸ­ಬ­ಹುದು.

ಶಿವ­ಮೊಗ್ಗ ಕಡೆ­ಯಿಂದ ಚಿಕ್ಕ­ಮ­ಗ­ಳೂ­ರಿ­ನತ್ತ ಬರು­ವ­ವರು ಲಕ್ಕ­ವಳ್ಳಿ ಜಲಾ­ಶಯ, ಲಕ್ಕ­ವಳ್ಳಿ ಅಭಯಾರಣ್ಯ, ಅಮೃತಾ­ಪು­ರದ ಹೊಯ್ಸಳ ದೇಗುಲ, ಕಲ್ಲ­ತ್ತ­ಗಿರಿ, ಕೆಮ್ಮಣ್ಣುಗುಂಡಿ (ಇಲ್ಲಿ ಉಳಿ­ಯಲೂ ಅವ­ಕಾ­ಶ­ವಿದೆ ) ನೋಡಿಕೊಂಡು ಬರು­ವುದು ಸೂಕ್ತ. ಕೆಮ್ಮ­ಣ್ಣುಗುಂ­ಡಿ­ಯಿಂದ 6 ಕಿ.ಮೀ. ದೂರ­ದಲ್ಲಿ ಹೆಬ್ಬೆ ಜಲ­ಪಾ­ತ­ವಿದ್ದು ಖಾಸಗಿ ಜೀಪ್‌ಗಳಲ್ಲಿ ಹೋಗ­ಬೇಕು. ಪ್ರಯಾಣ ಸ್ವಲ್ಪ ದುಬಾರಿ.

ನಿಸರ್ಗ ಪ್ರವಾ­ಸೋ­ದ್ಯ­ಮ­ದಲ್ಲಿ ಅಸಕ್ತಿ ಇರು­ವ­ವರು ಮೂಡಿ­ಗೆರೆ ಸನಿ­ಹದ ಶಿಶಿಲ ಕುಡಿ, ಸುಂಕ­ಸಾಲೆ (ಕೊಟ್ಟಿಗೆಹಾರ–ಕಳಸ ಮಾರ್ಗ) ಬಳಿಯ ಬಲ್ಲಾ­ಳ­ರಾ­ಯನ ದುರ್ಗ, ಜಯ­ಪುರ (ಬಸ­ರಿ­ಕಟ್ಟೆ) ಹತ್ತಿ­ರದ ಮೇರ್ತಿಖಾನ್ ಗುಡ್ಡ­ಗ­ಳಿಗೆ ಚಾರಣ ಮಾಡ­ಬ­ಹುದು.

ಪ್ರಯಾಣ ಹೇಗೆ?

­ಚಿ­ಕ್ಕ­ಮ­ಗ­ಳೂ­ರಿಗೆ ಬೆಂಗ­ಳೂರು, ಮೈಸೂರು, ಶಿವ­ಮೊ­ಗ್ಗ­ದಿಂದ ಸಾಕಷ್ಟು ಬಸ್ಸು­ಗ­ಳಿವೆ. ಹುಬ್ಬಳ್ಳಿ–ಬೆಂಗಳೂರಿನಿಂದ ಕಡೂರು–ಬೀರೂ­ರಿಗೆ ರೈಲ್ವೆ ಸಂಪ­ರ್ಕವೂ ಇದೆ.

ಚಿಕ್ಕ­ಮ­ಗ­ಳೂ­ರಿ­ನಿಂದ ಮುಳ್ಳ­ಯ್ಯ­ನ­ಗಿರಿ–ಬಾಬಾ­ಬು­ಡ­ನ್‌ಗಿರಿ ಇನ್ನಿ­ತರೆ ಸ್ಥಳ­ಗ­ಳಿಗೆ ಕೆಲ ವಸತಿ ಗೃಹ­ದ­ವರು ವಾಹ­ನ­ಗಳ ಮೂಲಕ ಕರೆ­ದೊ­ಯ್ಯುವ ವ್ಯವ­ಸ್ಥೆ­ಯನ್ನೂ ಮಾಡಿಕೊಂಡಿದ್ದಾರೆ. (ಸಂಪರ್ಕ ಸಂಖ್ಯೆ: ಮಿಥುನ್ – 8277446111 / 08262-238111) ಸ್ವಂತ ವಾಹನದಲ್ಲಿಯೇ ಬರುವಿರಾದರೆ ಇನ್ನೂ ಒಳ್ಳೆ­ಯದು.

ಈ ಎರಡೂ ಸ್ಥಳ­ಗ­ಳಿಗೆ ಶನಿ­ವಾರ, ಭಾನು­ವಾ­ರ­ಗ­ಳಂದು ಹೋಗಿ ಬರು­ವುದು ಸ್ವಲ್ಪ ತ್ರಾಸ. ಪ್ರವಾ­ಸಿ­ಗರ ದಟ್ಟಣೆ ಅಧಿಕ. ಟ್ರಾಫಿಕ್‌ ಜಾಮ್‌ ಕಿರಿಕಿರಿಯೂ ಎದುರಾಗಬಹುದು. ಮುಳ್ಳ­ಯ್ಯ­ನ­ಗಿ­ರಿಗೆ ಈ ದಿನ­ಗ­ಳಲ್ಲಿ ಬೆಳಿಗ್ಗೆ 9ರ ಬಳಿಕ ಸೀತಾ­ಳ­ಯ್ಯ­ನ­ಗಿರಿ ಬಳಿ ವಾಹನ ನಿಲ್ಲಿಸಿ ಹೋಗ­ಬೇಕು. (ಅಲ್ಲಿಂದ ಜೀಪ್ ವ್ಯವಸ್ಥೆ ಇದೆ) ಬೆಳಿಗ್ಗೆ 9ರ ಒಳಗೇ ಹೋಗಿಬರು­ವುದು ಉತ್ತಮ.

ಯಾವ್ಯಾವ ಜಾಗ ಎಷ್ಟೆಷ್ಟು ದೂರ..

ಚಿಕ್ಕ­ಮ­ಗ­ಳೂ­ರಿ­ನಿಂದ

ಮುಳ್ಳ­ಯ್ಯ­ನ­ಗಿರಿ 18 ಕಿ.ಮೀ.
ಬಾಬಾ­ಬು­ಡ­ನ್­ಗಿರಿ 35 ಕಿ.ಮೀ,
ಕೆಮ್ಮ­ಣ್ಣ­ಗುಂಡಿ 45 ಕಿ.ಮೀ.
ಭದ್ರಾ ಅಭಯಾರಣ್ಯ 40 ಕಿ.ಮಿ.

ಸಂಪರ್ಕಕ್ಕಾಗಿ:

ಚಿಕ್ಕ­ಮ­ಗ­ಳೂರು ಪ್ರವಾ­ಸೋ­ದ್ಯಮ ಕಚೇರಿ ಸಂಖ್ಯೆ:08262-228493

ಕೆಮ್ಮ­ಣ್ಣ­ಗುಂಡಿ ಸಂಪರ್ಕ ಸಂಖ್ಯೆ: 08261-237126,237134.

ಚಿತ್ರಗಳು: ಅಶ್ವಿನಿ ಕುಮಾರ್‌ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT