ಬೆಂಗಳೂರಿನಲ್ಲಿ ಎಲ್ಲ ಭಾಷೆ, ಜಾತಿ, ಧರ್ಮದವರು ಒಂದಾಗಿ ಬಾಳುವ ಮತ್ತು ಚರ್ಚ್, ಮಂದಿರ, ಮಸೀದಿಗಳು ಕೂಗಳತೆ ದೂರದಲ್ಲಿರುವ ಶಿವಾಜಿನಗರದಲ್ಲಿ ಸುತ್ತಾಡಿದಾಗ ಕಣ್ಣಿಗೆ ಬೀಳುವಮೊದಲು ಸ್ಥಳವೇಐತಿಹಾಸಿಕ ಸೇಂಟ್ ಮೇರಿಸ್ ಚರ್ಚ್. ಸದಾ ಜನರಿಂದ ತುಂಬಿರುವ ಚರ್ಚ್ನಲ್ಲಿ ಭದ್ರತಾ ಸಿಬ್ಬಂದಿ ಮತ್ತುಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಸಮರ್ಪಕವಾಗಿದೆ.
ಈ ಭಾಗದಲ್ಲಿರುವ ಇನ್ನುಳಿದ ಪ್ರಾರ್ಥನಾ ಮಂದಿರಗಳಲ್ಲಿ ಸೆಕ್ಯುರಿಟಿ ಹೊರತುಪಡಿಸಿದರೆಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲ. ಈ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿದ ಪ್ರಾರ್ಥನಾ ಮಂದಿರಗಳ ಮುಖ್ಯಸ್ಥರು, ಇದು ನಮ್ಮ ಜವಾಬ್ದಾರಿ ಅಲ್ಲ ಎಂದು ನುಣುಚಿಕೊಳ್ಳುವ ಯತ್ನ ಮಾಡಿದರು.
ಯಶವಂತಪುರ ರಸ್ತೆಯಲ್ಲಿರುವ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯ ವಿಸ್ತಾರವಾದ ಆವರಣ ಸುತ್ತಾಡಿದರೂ ಯಾರೊಬ್ಬರೂ ತಡೆದು ಪ್ರಶ್ನಿಸಲಿಲ್ಲ. ಅಲ್ಲಿದ್ದ ವಯಸ್ಸಾದ ಕಾವಲುಗಾರರೊಬ್ಬರನ್ನು ಈ ಬಗ್ಗೆ ಪ್ರಶ್ನಿಸಿದಾಗ ಚರ್ಚ್ ಸಿಬ್ಬಂದಿ ಬೇಸಿಗೆ ರಜೆಗಾಗಿ ತೆರಳಿದ್ದಾರೆ. ಯಾರೂ ಇಲ್ಲ ಎಂದು ಹೇಳಿದ. ಪಾದ್ರಿಗಳು, ಕ್ರೈಸ್ತ ಸನ್ಯಾಸಿಯರು ಮತ್ತು ಸಿಬ್ಬಂದಿ ರಜೆಗಾಗಿ ತವರು ರಾಜ್ಯಗಳಾದ ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಿಗೆ ತೆರಳಿದ್ದಾರೆ.ರಜೆಯ ಕಾರಣ ಚರ್ಚ್ಗಳಲ್ಲಿ ಜನದಟ್ಟನೆ ಕೂಡ ಕಾಣುತ್ತಿಲ್ಲ. ಭಾನುವಾರದ ಪ್ರಾರ್ಥನಾ ಸಭೆಗಳಲ್ಲಿ ಮಾತ್ರ ಚರ್ಚ್ಗಳು ಜನರಿಂದ ತುಂಬಿರುತ್ತವೆ.
ನಗರದ ದಂಡು ಪ್ರದೇಶ ಮತ್ತು ಎಂ.ಜಿ. ರಸ್ತೆಯ ಸುತ್ತಮುತ್ತಲಿನ ಪ್ರತಿಷ್ಠಿತ ಮತ್ತು ಪ್ರಮುಖ ಚರ್ಚ್ಗಳಲ್ಲಿ ಈ ಮೊದಲೇಸಾಕಷ್ಟು ಭದ್ರತಾ ಸಿಬ್ಬಂದಿ, ಕಾವಲುಗಾರರನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿದೆ. ಚಿಕ್ಕಪುಟ್ಟ ಚರ್ಚ್ಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿ ಮತ್ತು ಕ್ಯಾಮೆರಾಗಳ ಕೊರತೆ ಎದ್ದು ಕಾಣುತ್ತದೆ.‘ಭಾನುವಾರ ಪ್ರಾರ್ಥನೆಯ ವೇಳೆ ಹೆಚ್ಚು ಜನರು ಸೇರುವುದರಿಂದ ಆ ದಿನ ಮಾತ್ರ ಒಂದಿಬ್ಬರು ಪೊಲೀಸರು ಬಂದಿರುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಪಾದ್ರಿಯೊಬ್ಬರು ತಿಳಿಸಿದರು.
‘ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಗೆ ನಮಗೆ ಆಹ್ವಾನ ಬಂದಿಲ್ಲ. ಯಾವ ಪೊಲೀಸರೂ ನಮ್ಮೊಂದಿಗೆ ಮಾತನಾಡಿಲ್ಲ. ಶ್ರೀಲಂಕಾ ಬಾಂಬ್ ಸ್ಫೋಟದ ನಂತರ ಚರ್ಚ್ಗಳಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರ್ಚ್ ಬಿಷಪ್ಮಚಾಡೊ ಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳುತ್ತಾರೆ.
ಆತಂಕ ಇಲ್ಲ
ನಗರದಲ್ಲಿ ರಂಜಾನ್ ಸಂಭ್ರಮ ಮನೆ ಮಾಡಿದ್ದು ಹೆಚ್ಚಿನ ಜನರು ಸೇರುವ ಮಸೀದಿಗಳಲ್ಲಿಯೂ ಮುಂಜಾಗ್ರತಾ ಭದ್ರತಾ ಕ್ರಮಗಳು ಕಾಣುತ್ತಿಲ್ಲ. ಪೊಲೀಸ್ ಅಥವಾ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ.
ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಸಾಮರಸ್ಯದಿಂದ ಬದುಕುತ್ತಿದ್ದೇವೆ ಎನ್ನುತ್ತಾರೆ ಶಿವಾಜಿನಗರದ ಮಸೀದಿಗಳ ಮುಖ್ಯಸ್ಥರು.
ರಾಜಾಜಿನಗರದ ಇಸ್ಕಾನ್, ವೈಯ್ಯಾಲಿಕಾವಲ್ನ ತಿರುಪತಿ ತಿರುಮಲದಂಥ ದೇವಸ್ಥಾನಗಳನ್ನು ಹೊರತು ಪಡಿಸಿದರೆ ಹೆಚ್ಚಿನ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಕಾಣುವುದಿಲ್ಲ. ಪೊಲೀಸ್ ಇಲಾಖೆ ಸೂಚನೆಯ ಮೇರೆಗೆ, ದೇವಸ್ಥಾನದ ಸುರಕ್ಷತೆ ದೃಷ್ಟಿಯಿಂದಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಿರುವುದಾಗಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹೇಳುತ್ತಾರೆ.
ಚರ್ಚ್, ಮಸೀದಿ ಮತ್ತು ದೇವಸ್ಥಾನಗಳಿಗೆ ಹೋಲಿಸಿದರೆ ಜೈನ್ ಮಂದಿರ ಮತ್ತು ಸಿಖ್ ಗುರುದ್ವಾರಗಳಲ್ಲಿ ಸ್ಥಿತಿ ವಿಭಿನ್ನ. ಇಲ್ಲಿ ಕಡಿಮೆ ಜನದಟ್ಟನೆ ಕಾರಣ ಅಪರಿಚಿತ ಮುಖ ಕಂಡರೆ ತಕ್ಷಣಕಾವಲುಗಾರರು ತಡೆದು ನಿಲ್ಲಿಸುತ್ತಾರೆ. ಸಿಸಿಟಿವಿ ಕ್ಯಾಮೆರಾ ಕಣ್ಣುಗಳು ಸದಾ ಜಾಗೃತವಾಗಿರುತ್ತವೆ. ಯಾವುದೇ ರೀತಿಯ ದಾಳಿ, ಸಂಘರ್ಷದ ಆತಂಕ ಇಲ್ಲ ಎನ್ನುತ್ತಾರೆ ಜೈನ್ ಮಂದಿರ ಮತ್ತು ಗುರುದ್ವಾರಗಳ ಪ್ರಬಂಧಕರು.
ಚರ್ಚ್ಗಳಲ್ಲಿ ಭದ್ರತೆಗೆ ಒತ್ತು ನೀಡುವಂತೆ ಸೂಚಿಸಿ ಎಲ್ಲ ಚರ್ಚ್ಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. ಹೆಚ್ಚಿನ ಚರ್ಚ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಇಲ್ಲದ ಕಡೆ ಕಡ್ಡಾಯವಾಗಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿದೆ.ಶಿವಾಜಿ ನಗರದ ಸೇಂಟ್ ಮೇರೀಸ್ ಚರ್ಚ್, ವಿವೇಕ್ ನಗರದ ಇನ್ಫಂಟ್ ಜೀಸಸ್ ಚರ್ಚ್, ಕೀವ್ಲ್ಯಾಂಡ್ ಟೌನ್ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಬ್ರಿಗೇಡ್ ರಸ್ತೆಯ ಸೇಂಟ್ ಪ್ಯಾಟ್ರಿಕ್ ಚರ್ಚ್ಗಳಲ್ಲಿ ಪ್ರಾರ್ಥನೆಗೆ ಬಂದು ಹೋಗುವ ಜನರ ಸಂಖ್ಯೆ ಹೆಚ್ಚು. ಈ ಚರ್ಚ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಚರ್ಚ್ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಪಾದ್ರಿಗಳಿಗೆ ಸೂಚಿಸಲಾಗಿದೆ.ನಗರದಲ್ಲಿ ಅಂಥ ಯಾವುದಾದರೂ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿಲ್ಲ. ನಗರದಲ್ಲಿ ಶಾಂತಿಯುತ ವಾತಾವರಣವಿದ್ದು, ಯಾವುದೇ ಬೆದರಿಕೆ ಹಾಗೂ ಆತಂಕದ ವಾತಾವರಣ ಇಲ್ಲ
– ಆರ್ಚ್ ಬಿಷಪ್ಪೀಟರ್ ಮಚಾಡೊ
ಶ್ರೀಲಂಕಾ ಚರ್ಚ್ ಮೇಲೆ ಬಾಂಬ್ ದಾಳಿ ನಡೆದ ನಂತರ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕರ್ನಾಟಕ ಸೆಂಟ್ರಲ್ ಡಯೋಸಿಸ್ ಅಡಿ ಬರುವ ನಗರದ ಎಲ್ಲ ಐದಾರು ಚರ್ಚ್ಗಳಿಗೂ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ.
– ಪಿ.ಕೆ. ಸ್ಯಾಮುವೆಲ್,ಬಿಷಪ್, ಸಿಎಸ್ಐ, ಕರ್ನಾಟಕ ಸೆಂಟ್ರಲ್ ಡಯೋಸಿಸ್
ಪ್ರಾರ್ಥನಾ ಮಂದಿರಗಳಲ್ಲಿ ಜನ ಸೇರುತ್ತಾರೆ. ಎಲ್ಲ ಕಡೆಯೂ ಪೊಲೀಸರನ್ನು ನಿಯೋಜಿಸಲು ಆಗುವುದಿಲ್ಲ. ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಬೇಕು. ನಗರ ಸುರಕ್ಷಿತವಾಗಿದೆ. ಪ್ರಾರ್ಥನಾ ಮಂದಿರಗಳ ಬಳಿ ಶಂಕಿತ ವ್ಯಕ್ತಿಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
– ಟಿ.ಸುನೀಲ್ ಕುಮಾರ್,ನಗರ ಪೊಲೀಸ್ ಕಮಿಷನರ್
ನಗರದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೂ ಸಿಸಿಬಿ ಕಣ್ಣಿಟ್ಟಿದೆ. ನಗರ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
– ಅಲೋಕ್ಕುಮಾರ್, ಜಂಟಿ ಆಯುಕ್ತರು, ಅಪರಾಧ ವಿಭಾಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.