ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣ ಪ್ರಿಯರನ್ನು ಕೈ ಬೀಸಿ ಕರೆಯುವ ಗಡಾಯಿಕಲ್ಲು

Last Updated 22 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ
ಯಾವ ಶಿಲ್ಪಿಯು ಕಡೆದನೊ ಇಂಥ ಸುಂದರ
ಕಲೆಯನು
ಹೇಗೆ ಇಟ್ಟನೋ ಎಂತು ನೆಟ್ಟನೋ ಮನಸು
ಸೆಳೆಯುವ ಶಿಲೆಯನು

ಪ್ರಾಯಶಃ ಕವಿವಾಣಿಗೆ ನಾವು ತಲೆಬಾಗಿ ಇಂಥ ಉದ್ಘಾರ ತೆಗೆಯುವ ನೋಟವನ್ನು ಕಾಣಲು ಬೆಳ್ತಂಗಡಿಯ ಗಡಾಯಿಕಲ್ಲಿಗೆ ಬರಬೇಕು.

ಮಂಗಳೂರು, ಮೂಡಬಿದಿರೆಯಿಂದ ಅಥವಾ ಕಾರ್ಕಳದಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದಲ್ಲಿ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಒಂಟಿಯಾಗಿ ನಿಂತಿರುವ ಬೃಹತ್ ಕರಿದಾದ ಬೆಟ್ಟವೊಂದು ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಪ್ರಕೃತಿಯ ಕೊಡುಗೆಯಂತಿದೆ.

ಬೆಳ್ತಂಗಡಿ ಉಜಿರೆ ರಸ್ತೆಯಲ್ಲಿ ಸಿಗುವ ಲಾಯಿಲ(ಭಗತ್ ಸಿಂಗ್ ವೃತ್ತ) ಬಳಿ ತಿರುಗಿ ಸುಮಾರು 5 ಕಿ. ಮೀ ಪ್ರಯಾಣಿಸಿದಾಗ ಗಡಾಯಿಕಲ್ಲಿಗೆ ಹೋಗುವ ರಸ್ತೆ ಸಿಗುತ್ತದೆ. ಅದರಲ್ಲಿ 2 ಕಿ.ಮೀ ಕ್ರಮಿಸಿದಾಗ ಗಡಾಯಿಕಲ್ಲಿನ ಪ್ರವೇಶ ಸ್ಥಳ ಸಿಗುತ್ತದೆ. ಪ್ರಾರಂಭದಲ್ಲಿ ಕಾಡಿನ ಕಡಿದಾದ ದಾರಿ, ನಂತರ ಕಲ್ಲಿನ ಮೆಟ್ಟಿಲು ಏರಿದ ಮೇಲೆ , ಕೊನೆಗೆ ಕಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿಯ ಮಧ್ಯದಲ್ಲಿ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿಯ ಸ್ಥಳಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ.

ಕುದುರೆಮುಖ ಪರ್ವತಶ್ರೇಣಿಗೆ ಅಂಟಿಕೊಂಡಿರುವ ಈ ಗಡಾಯಿಕಲ್ಲು ಸಮುದ್ರ ಮಟ್ಟದಿಂದ ಸುಮಾರು 1700 ಅಡಿ ಎತ್ತರದಲ್ಲಿದೆ. ಪ್ರಾದೇಶಿಕವಾಗಿ ಗಡಾಯಿಕಲ್ಲು, ಜಮಲಾಬಾದ್, ಜಮಲಾಗದ್ದ ಮತ್ತು ನರಸಿಂಹಗಡ ಎಂದೂ ಕರೆಯುತ್ತಾರೆ. ಬಂಗಾಡಿ ಅರಸ ನರಸಿಂಹ ಕಟ್ಟಿಸಿದ ಕೋಟೆಯಾದ್ದರಿಂದ ನರಸಿಂಹಗಢವಾಗಿತ್ತು ಎಂದೂ, ನಂತರ ಟಿಪ್ಪು ಸುಲ್ತಾನನು ಕ್ರಿ.ಶ. 1794ರಲ್ಲಿ ತನ್ನ ತಾಯಿ ಜಮಲಾಬಿಯ ಮರಣಾನಂತರ ಆಕೆಯ ನೆನಪಿಗಾಗಿ ಕಟ್ಟಿಸಿದ ಕೋಟೆಯಾದ್ದರಿಂದ ಇದನ್ನು ಜಮಾಲಾಬಾದ್ ಕೋಟೆ ಎಂದೇ ಪ್ರಸಿದ್ಧವಾಯಿತು ಎನ್ನಲಾಗಿದೆ. ಈ ಕೋಟೆಯನ್ನು ಟಿಪ್ಪುವಿನೊಂದಿಗಿದ್ದ ಫ್ರೆಂಚ್ ಎಂಜಿನಿಯರ್‍ಗಳು ನಿರ್ಮಿಸಿರುವುದರಿಂದ ಮುಸ್ಲಿಂ ವಾಸ್ತುಶಿಲ್ಪ ಶೈಲಿ ಹಾಗೂ ಫ್ರೆಂಚ್ ಮಾದರಿ ಎರಡೂ ಮೇಳೈಸಿದ್ದು ಕಾಣಬಹುದು.

ಕೋಟೆಯ ತಳವು ಸುಮಾರು 4 ರಿಂದ 5 ಕಿ. ಮೀ.ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು ಕೋಟೆಯ ಮೇಲ್ಭಾಗ ಸುಮಾರು ಒಂದರಿಂದ ಎರಡು ಎಕರೆಯಷ್ಟು ವಿಶಾಲವಾಗಿದೆ. ಈ ಜಾಗವು ಬೃಹತ್ ಗಾತ್ರದ ಮರಗಳು ಹಾಗೂ ಕುರುಚಲು ಗಿಡಗಳಿಂದ ಕೂಡಿದೆ. ಬೆಟ್ಟದ ಮಧ್ಯದಲ್ಲಿ ಕಲ್ಲಿನಿಂದ ನಿರ್ಮಾಣವಾದ ಕೆರೆಯೊಂದಿದ್ದು, ಎಂತಹ ಬೇಸಿಗೆಯಲ್ಲೂ ಈ ಕೆರೆಯ ನೀರು ಬತ್ತದೆ ಇರುವುದು ಇದರ ವಿಶೇಷ. ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆಯೊಂದಿದ್ದು, ಇದು ಬೀಳುವ ಸ್ಥಿತಿಯಲ್ಲಿದೆ.

ಈ ಕೋಟೆಗೆ ಬರಲು ಒಂದೇ ಕಡಿದಾದ ದಾರಿಯಿದ್ದು, ಮೇಲ್ಗಡೆಯಿಂದ ಅತ್ಯಂತ ಸಣ್ಣ ಸೈನ್ಯದ ಸಹಾಯದಿಂದ ಕೋಟೆಯ ಮೇಲೇರಿ ಬರುವ ಬೃಹತ್ ಸೈನ್ಯವನ್ನು ಸುಲಭವಾಗಿ ಹಿಮ್ಮೆಟ್ಟಲು ಸಾಧ್ಯವಾಗುತ್ತಿತ್ತು ಎಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಈ ಕೋಟೆಯು ಕ್ರಿ.ಶ. 1799ರ ಮೈಸೂರು ಯುದ್ಧದಲ್ಲಿ ಬ್ರಿಟೀಷರ ವಶವಾಯಿತೆಂದು ಹೇಳಲಾಗಿದೆ. ಇಲ್ಲಿ ಪಾಶಿ ಗುಂಡಿ( ಟಿಪ್ಪು ಡ್ರಾಫ್)ಗೆ ಅಪರಾದಿಗಳನ್ನು ತಳ್ಳಿ ಕೊಲ್ಲಲಾಗುತ್ತಿತ್ತು ಮತ್ತು ಕೋಟೆಯ ಕೊಠಡಿಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಇರಿಸಲಾಗುತ್ತಿತ್ತು. ಪ್ರವೇಶ ದ್ವಾರದಿಂದ ಕೋಟೆಯ ತುದಿಯನ್ನು ತಲುಪುವವರೆಗಿನ ಎಲ್ಲಾ ದಾರಿಗಳನ್ನು ಆಯಕಟ್ಟಿನ ಸ್ಥಳದಲ್ಲಿ ನಿಂತು ವೀಕ್ಷಿಸಬಹುದಾದ ಕಾರಣ ಟಿಪ್ಪು ಸುಲ್ತಾನ್ ಕೋಟೆಯ ಮೇಲಿನಿಂದಲೇ ವೈರಿಗಳನ್ನು ಬಹುತೇಕವಾಗಿ ಹಿಮ್ಮೆಟ್ಟುವಲ್ಲಿ ಯಶಸ್ವಿಯಾಗುತ್ತಿದ್ದ ಎಂದು ಹೇಳಲಾಗಿದೆ.

ಗಡಾಯಿಕಲ್ಲು ಒಂದು ಅತ್ಯುತ್ತಮವಾದ ಚಾರಣ ಬೆಟ್ಟವಾಗಿದ್ದು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಬೆಳಿಗ್ಗೆ ಆರು ಗಂಟೆಯೊಳಗೆ ತಲಾ ರೂ. 20ರಂತೆ ಪ್ರವೇಶ ಶುಲ್ಕವನ್ನು ಪಾವತಿಸಿ ಚಾರಣ ನಡೆಸಬಹುದಾಗಿದೆ ಬೆಳಿಗ್ಗೆ ಬೇಗನೇ ಸೂರ್ಯನ ಬಿಸಿಲು ಏರುವುದಕ್ಕೆ ಮೊದಲೇ ಚಾರಣವನ್ನು ಪ್ರಾರಂಭಿಸಿ ಎರಡು ಮೂರು ಗಂಟೆಗಳಲ್ಲಿ ತುದಿಯನ್ನು ತಲುಪಬಹುದು. ಕೋಟೆಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯ ಗೇಟು ಇದ್ದು, ಸೂರ್ಯನ ಬೇಗೆಯು ತಣಿಯುತ್ತಿದ್ದಂತೆ ಗೇಟ್ ಮುಚ್ಚುವ ಮುಂಚಿತವಾಗಿ ಅಲ್ಲಿಂದ ಹಿಂದಿರುಗಬೇಕು. ಸಂಜೆ ನಾಲ್ಕು ಗಂಟೆಯ ನಂತರ ಚಾರಣಕ್ಕೆ ಅವಕಾಶವಿಲ್ಲ. ಕೋಟೆಯ ಮೇಲ್ಭಾಗದಲ್ಲಿ ಸದಾ ತುಂಬಿರುವ ಕೆರೆಯೋನೋ ಇದೆ, ಆದರೆ ಈ ನೀರು ಕುಡಿಯಲು ಯೋಗ್ಯವಲ್ಲದ್ದರಿಂದ ಅವಶ್ಯವಿರುವ ನೀರು ಮತ್ತು ಅಹಾರವನ್ನು ಸಂಗ್ರಹಿಸಿಕೊಂಡು ಹೋಗುವುದು ಸೂಕ್ತ. ಮಳೆಗಾಲದಲ್ಲಿ ಇಲ್ಲಿನ ಕಲ್ಲಿನ ಮೆಟ್ಟಿಲುಗಳು ಪಾಚಿಗಟ್ಟಿಕೊಂಡು ವಿಪರೀತ ಜಾರುವುದರಿಂದ ಅತ್ಯಂತ ಅಪಾಯಕಾರಿ. ಹಾಗಾಗಿ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ಚಾರಣ ಮಾಡಲು ಸೂಕ್ತ ಸಮಯ. ಕಲ್ಲೇರುವ ಎದೆಗಾರಿಕೆ ಇದ್ದವರು ಮಾತ್ರ ಇಲ್ಲಿಗೆ ಚಾರಣ ಕೈಗೊಂಡರೆ ಸಂತೃಪ್ತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT